ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Tuesday 22 June 2010

ಜಾಣ ಜಾಣೆಯರ ಕನಸಿಗ

 
ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂಬುದಕ್ಕೆ ಅನ್ವರ್ಥದಂತಿದ್ದವರು ಲಂಕೇಶ್. ಸ್ಥಾಪಿತ ನಿಲುವುಗಳ ಭಂಜಕ ಲಂಕೇಶರಿಗೆ ವರ್ತಮಾನ ಬಹುಮುಖ್ಯವಾದ ಮೌಲ್ಯವಾಗಿತ್ತು. ಭೂತ, ಭವಿಷ್ಯಗಳಿಗಿಂತ ವರ್ತಮಾನಕ್ಕೆ ಸಂಬಂಸಿದ ಎಲ್ಲ ಸಂಗತಿಗಳ ಬಗ್ಗೆ ಲಂಕೇಶ್ ದೃಢವಾಗಿ ಮಾತನಾಡಿದ್ದರಿಂದಲೇ ಬಹುಬೇಗ ಒಂದು ಜನಾಂಗದ ಕಣ್ಮಣಿಯಾದರು. 

ಸಮಾನ ಮನಸ್ಕರಾಗಿದ್ದ ಅಡಿಗರು, ಅನಂತಮೂರ್ತಿ, ತೇಜಸ್ವಿ, ಎ.ಕೆ. ರಾಮಾನುಜನ್, ಯಶವಂತ ಚಿತ್ತಾಲ, ಚಂಪಾ, ಕಾರ್ನಾಡ್ ಮುಂತಾದವರಿದ್ದ ಒಂದು ತಲೆಮಾರು ಬಹಳ ಪರಿಣಾಮಕಾರಿಯಾಗಿ ಸಮಾಜದ ಎಲ್ಲ ಸ್ತರಗಳನ್ನೂ ಪ್ರಭಾವಿಸಿತು. ಕುವೆಂಪು ಅವರ ವಿಚಾರ ಕ್ರಾಂತಿಯೆಂಬ ಮಹಾಸಾಗರಕ್ಕೆ ಗಣನೀಯ ಕೊಡುಗೆ ನೀಡಿದ ಈ ತಲೆಮಾರು ಲಂಕೇಶರ ಸಮಕಾಲೀನವಾದದ್ದು ಎಂದು ಗುರುತಿಸಲು ಅಡ್ಡಿಯಿಲ್ಲ. ತಮ್ಮ ವಿಚಾರಗಳನ್ನು ಹೇಳಲು ಸಾಹಿತ್ಯದ ಜತೆಗೆ ಲಂಕೇಶರಿಗೆ ಪತ್ರಿಕೋದ್ಯಮ ಕೂಡ ಪರಿಣಾಮಕಾರಿ ಸಾಧನವಾಯಿತು. ಇದರಿಂದ ಅವರ ವಿಚಾರಗಳು ವ್ಯಾಪಕವಾಗಿ ತಲುಪುವುದು ಸಾಧ್ಯವಾಯಿತು. ಸಾಹಿತ್ಯ, ಪತ್ರಿಕೋದ್ಯಮಗಳನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಂಡ ಅವರು, ಹೊಸ ರೀತಿಯ ಜಾಗೃತಿಗೆ ಕಾರಣರಾದರು. ಲಂಕೇಶ್ ಸಾಹಿತ್ಯದ ಮೂಲಕ ಸಾಸಿದ್ದು ಬಹಳವಾದರೂ ಪತ್ರಿಕೋದ್ಯಮದ ಮೂಲಕ ಹೇಳಿದ್ದು ಮಾತ್ರ ಆವರೆಗೆ ಹೇಳದ ಸಂಗತಿಗಳಿಂದ ತುಂಬಿತ್ತು.   

ಹೊಸ ರೀತಿಯ ಪತ್ರಿಕೋದ್ಯಮಕ್ಕೆ ಕನ್ನಡ ಜಗತ್ತು ತೆರೆದುಕೊಳ್ಳುವಂತೆ ಮಾಡಿದ ಕೀರ್ತಿ ಅವರದೇ. ಅವರು ಎಲ್ಲ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಹಿತ್ಯ ಚಳವಳಿಗಳನ್ನು ಮೊದಲು ಗುರುತಿಸಿ ಪ್ರೋತ್ಸಾಹಿಸಿದರು. ಹಾಗೆಯೇ ಅವುಗಳ ಮೇಲೆ ದಿಢೀರ್ ಮುಗಿಬೀಳುತ್ತಿದ್ದುದೂ ಅವರ ವ್ಯಕ್ತಿತ್ವದಲ್ಲಿಯೇ ಇತ್ತು. ಏನೇ ವೈರುಧ್ಯಗಳಿದ್ದರೂ ಅವರ ಸಾಹಿತ್ಯಿಕ ವೈಚಾರಿಕತೆ ಮತ್ತು ಪತ್ರಿಕೋದ್ಯಮ ಇಡೀ ಕರ್ನಾಟಕವನ್ನು ಎಚ್ಚರದಲ್ಲಿಟ್ಟಿತ್ತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಪತ್ರಿಕೆಯನ್ನು ಕೈಯಲ್ಲಿ ಹಿಡಿದು ನಡೆಯುವುದು ಆಗಿನ ಕಾಲಕ್ಕೆ ಯುವಕರಿಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಪ್ರತಿಭೆಗಳನ್ನು ಗುರುತಿಸುವುದರಲ್ಲಿ ಲಂಕೇಶರಿಗೆ ಅವರೇ ಸಾಟಿ. ಅವರ ಶೋಧಗಳು ಇವತ್ತು ಪ್ರಮುಖ ಬರಹಗಾರರಾಗಿ ರೂಪುಗೊಂಡಿರುವುದು ಲಂಕೇಶರ ಬಹುಮುಖ್ಯ ಕಾಣಿಕೆ ಮತ್ತು ಕನಸು.  ಲಂಕೇಶ್ ಎಲ್ಲದರ ಬಗ್ಗೆಯೂ ಅಕೃತವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರನ್ನು ಬಹುವಾಗಿ ರೊಚ್ಚಿಗೆಬ್ಬಿಸುತ್ತಿದ್ದುದು ಮೂಲಭೂತವಾದ. ಎಲ್ಲ ರೀತಿಯ ಮೂಲಭೂತವಾದಕ್ಕು ಅವರು ಮೊದಲು ತಮ್ಮ ವಿರೋಧ ದಾಖಲಿಸುತ್ತಿದ್ದರು. ಮೌಢ್ಯವನ್ನು ಜಾಡ್ಯ ಎನ್ನುತ್ತಿದ್ದರು. ವಿಶ್ವಸುಂದರಿ ಸ್ಪರ್ಧೆ, ಪರಮಾಣು ಪರೀಕ್ಷೆ ವಿಷಯಗಳಲ್ಲಿ ಅವರು ತೆಗೆದುಕೊಂಡ ನಿಲುವುಗಳು ಖಚಿತವಾಗಿದ್ದವು. ನಿತ್ಯದ ಅನೇಕ ಸಂಗತಿಗಳಿಗೆ ತುಂಬಾ ಭಿನ್ನಪ್ರತಿಕ್ರಿಯೆಯಾಗಿ ‘ನೀಲು’ ಎಂಬ ಹೆಸರಿನಲ್ಲಿ ಅವರು ಬರೆದ ಕಾವ್ಯ ಬಹಳ ಜನಪ್ರಿಯವಾಗಿದ್ದ ಟೀಕೆ-ಟಿಪ್ಪಣಿಯಲ್ಲಿ ರಾಮಮಂದಿರ ವಿವಾದದ ಸಂದರ್ಭದಲ್ಲಿ ಬರೆದ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಟೈಮ್ಸ್ ಪತ್ರಿಕೆ ಬಗ್ಗೆ ಬರೆದ ‘ಒಳ್ಳೆಯ ಟೈಮ್ಸ್, ಕೆಟ್ಟ ಟೈಮ್ಸ್’ ಮಲೆಯಾಳದ ಹೆಸರಾಂತ ಲೇಖಕ ತಕಳಿ ಶಿವಶಂಕರ ಪಿಳ್ಳೈ ಅವರ ‘ಚೆಮ್ಮೀನ್’ ಕಾದಂಬರಿಗೆ ಪ್ರತಿಕ್ರಿಯಿಸಿದ ಬರಹಗಳು  ಅವರ ವಿಭಿನ್ನ ದೃಷ್ಟಿಕೋನಕ್ಕೆ ಸಾಕ್ಷಿಗಳಂತಿದ್ದವು.

ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸಿದ ಅವರು ಎಲ್ಲದರಲ್ಲೂ ಹೊಸತನ ಮೆರೆದರು. ಅದು ಸಿನಿಮಾ, ನಾಟಕ, ಕಾದಂಬರಿ, ಕಾವ್ಯ, ವಿಮರ್ಶೆ ಯಾವುದನ್ನೂ ಬಿಡಲಿಲ್ಲ. ಸಿಟ್ಟು ಮತ್ತು ಪ್ರೀತಿಯಲ್ಲಿ ಅವರು ಥೇಟ್ ಬನದ ಕರಡಿಯಂತಿದ್ದರು. ಹೆಸರಿನಂತೆಯೇ ವ್ಯಕ್ತಿತ್ವವೂ ವಿಕ್ಷಿಪ್ತವಾಗಿತ್ತು. ಸ್ಪಷ್ಟತೆಯಿಲ್ಲದ ಯಾವುದನ್ನೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಅವರು ಎಷ್ಟೇ ದೊಡ್ಡವನಿದ್ದರೂ ಕೆಣಕದೆ ಬಿಡುತ್ತಿರಲಿಲ್ಲ. ಯಾವುದೋ ದೇಶದ ಲೇಖಕ, ವಿಷಯ, ಚಿಂತನೆ, ರಾಜಕೀಯ ಮುಂತಾದ ಅನೇಕ ಅಗತ್ಯ ವಿಷಯಗಳನ್ನು ಹಕ್ಕಿಯಂತೆ ಹೆಕ್ಕಿ ತಂದು ಕನ್ನಡದ ಜನರಿಗೆ ಉಣಬಡಿಸಿದರು. ಲೇಖನ, ವಿಮರ್ಶೆಗಳಿಂದ ಎಲ್ಲದನ್ನೂ ಹೇಳಿದಂತೆ ಆಗುವುದಿಲ್ಲ ಎಂಬ ಕಾರಣಕ್ಕೆ ಬೋದಿಲೇರ್ನಂಥ ಲೇಖಕನನ್ನು ಕನ್ನಡಕ್ಕೆ ತಂದರು. ಆ ಮೂಲಕ ತೀವ್ರ ತಲ್ಲಣಗಳ ಜಗತ್ತೊಂದು ಕನ್ನಡಕ್ಕೆ ಪರಿಚಯವಾಯಿತು.

ತಮ್ಮ ಅನೇಕ ಸಮಕಾಲೀನ ಲೇಖಕರಿಗೆ ಅವರು ವೇದಿಕೆಗಳನ್ನೂ ಒದಗಿಸಿದರು. ಪತ್ರಿಕೆ ಲಂಕೇಶರಿಗೆ ಎಲ್ಲ ಅರ್ಥಗಳಲ್ಲೂ ಒಂದು ಅಸ್ತ್ರದಂತೆ ಇತ್ತು. ಮದಗಜದಂತೆ ನಡೆದದ್ದೇ ದಾರಿಯಾಗಿ ವಿಜೃಂಭಿಸಿದ ಲಂಕೇಶ್, ಮೂರ್ನಾಲ್ಕು ತಲೆಮಾರುಗಳನ್ನು ಪ್ರಭಾವಿಸಿದರು. ೨೫ ವರ್ಷಗಳ ಕಾಲ ಎಲ್ಲರನ್ನೂ, ಎಲ್ಲವನ್ನೂ ತುದಿಗಾಲಲ್ಲಿ ನಿಲ್ಲಿಸಿದ ಕೀರ್ತಿ ಅವರದು. ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಚಳವಳಿಗಳು ಇವು ಯಾವುವೂ ಲಂಕೇಶ್ ಗುಂಗಿನಿಂದ ಹೊರತಾಗಿರಲಿಲ್ಲ. ಅಲ್ಲೆಲ್ಲ ಲಂಕೇಶರ ಛಾಪು ಇದ್ದೇ ಇತ್ತು. ಒಟ್ಟಾರೆ ಲಂಕೇಶ್ ಎಂಬ ಅಪ್ಪಟ ಪ್ರತಿಭೆ ಬಹುಮುಖವಾದದ್ದು ಎಂದರೆ ಅದು ಮತ್ತೆ ಅವರದೇ ಮಾತಿನ ಕ್ಲೀಷೆ ಅಷ್ಟೆ.                 

 ೩೦ ನವೆಂಬರ್ ೨೦೦೭ರ ಶುಕ್ರವಾರದ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.                                                  

No comments:

Post a Comment