ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Thursday 24 June 2010

ಜಾನಪದ ಜಂಗಮ: ಮುದೇನೂರು ಸಂಗಣ್ಣ


ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ (ಈ ಮೊದಲು ಬಳ್ಳಾರಿ ಜಿಲ್ಲೆ)ಯ ಸಂಗಜ್ಜನ ಮನೆಗೆ ಹೋಗುವುದೆಂದರೆ ಬಾಲ್ಯದಲ್ಲಿ ಅಜ್ಜನ ಮನೆಗೆ ಹೋಗುವಾಗ ಆಗುತ್ತಿದ್ದ ರೋಮಾಂಚನ.


ಅಜ್ಜನ ಜತೆಗಿನ ಮಾತಿಗೆ ವಿಷಯಗಳ ಎಲ್ಲೆಯಿಲ್ಲ. ಮೊಮ್ಮಕ್ಕಳಂಥವರ ಜತೆಗೂ ೮೨ರ ಹರೆಯದ ಸಂಗಜ್ಜ, ಉತ್ಪ್ರೇಕ್ಷೆ, ಉಪೇಕ್ಷೆಗಳಿಗೆ ಅವಕಾಶವಿಲ್ಲದಂತೆ ಹೇಳುವುದು, ಕೇಳುವುದು ಗಂಟೆಗಟ್ಟಲೇ ನಡೆಯುತ್ತಲೇ ಇರುತ್ತಿದ್ದ ಕಾಲಕ್ಷೇಪದಂತೆ.


ಜಾನಪದ ಕುರಿತು ಅಜ್ಜನಿಗಿದ್ದಿದ್ದು ಕೇವಲ ಆಸೆಯಲ್ಲ, ಭವಿಷ್ಯದ ಕನ್ನಡ ಪೀಳಿಗೆಗಾಗಿ ಕಂಡ ಕನಸು ಎನ್ನಬಹುದು. ಹಾಗಾಗಿ ಕಣ್ಮರೆಯಾಗುತ್ತಿದ್ದ  ಅಪರೂಪದ ಜಾನಪದ ಕಲೆಗಳು ಯಾವತ್ತೂ ಅಳಿಸಲಾಗದ ದಾಖಲೆಯಾಗಿಸಿದ್ದಾರೆ. ಅದಕ್ಕಾಗಿ ಊರೂರು ಸುತ್ತಿದ ಅವರು, ಅನೇಕ ಕಲಾವಿದರನ್ನು ಮನೆಗೆ ಕರೆಸಿಕೊಂಡು ಅವರ ಎಲ್ಲ ಕಲೆಗಳನ್ನು ಬಹು ಶ್ರದ್ಧೆಯಿಂದ ದಾಖಲಿಸಿದ್ದಾರೆ. ತೊಗಲುಬೊಂಬೆ ಕಲೆಯನ್ನು ಉಳಿಸುವ ಸಲುವಾಗಿ ಕಲಾವಿದರಿಗೆ ಶಿಸ್ತು ಬದ್ದ ತರಭೇತಿಗೆ ವೇದಿಕೆ ಕಲ್ಪಿಸುವುದಕ್ಕಾಗಿ ಪಟ್ಟಿರುವ ಶ್ರಮ ಲೆಕ್ಕಕ್ಕೆ ಸಿಗುವುದಿಲ್ಲ. ಇವರ ಪರಿಶ್ರಮದ ಫಲವಾಗಿ ಅನೇಕ ಜಾನಪದ ತಂಡಗಳು ವಿದೇಶದಲ್ಲೂ ಪ್ರದರ್ಶನದ ಸೌಭಾಗ್ಯ ಕಂಡವು.  ಜಾನಪದದ ಬಹುದೊಡ್ಡ ಅಕಾಡೆಮಿಕೇತರ ವಿದ್ವಾಂಸ ಮುದೇನೂರು ಸಂಗಣ್ಣ. ಬಹುತೇಕ ಜಾನಪದ ಕಲೆಗಳಿಗಾಗಿ ಬಹಳ ಕೆಲಸ ಮಾಡಿದ ದಿವಂಗತ ಎಚ್.ಎಲ್. ನಾಗೇಗೌಡ, ಶಿವರಾಮ ಕಾರಂತ ಮತ್ತು ಜೋಳದರಾಶಿ ದೊಡ್ಡನಗೌಡರಂಥವರ ಪರಂಪರೆಯ ಕೊಂಡಿ ಅವರು. ಪ್ರತಿಷ್ಟಿತರು ತಮ್ಮ ಮನೆಗೆ ಬಂದಾಗ ಅವರಿಗಾಗಿ ಗೊಂದಲಿಗರ ಆಟ, ಬೀದಿ ನಾಟಕ, ತೊಗಲುಬೊಂಬೆ, ಕರಡಿ ಕುಣಿಸುವ ಆಟ, ಪ್ರದರ್ಶನ ಏರ್ಪಡಿಸಿ ಅದರ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತಿದ್ದರು.


ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಎ.ಕೆ. ರಾಮಾನುಜನ್ ಮುಂತಾದವರ ಅತಿರಥ ಮಹಾರಥರ ದಂಡೇ ಅಜ್ಜನ ಮನೆಯಲ್ಲಿ ದಿನಗಳಗಟ್ಟಲೆ ತಂಗುತ್ತಿದ್ದರು. ಅವರ ಮನೆಯೇ ಜಾನಪದ ಪರಿಕರಗಳ ಸಂಗ್ರಹಾಲಯದಂತೆ ಕಾಣುತ್ತದೆ. ಅವರು ಸಂಗ್ರಹಿಸಿದ ಜಾನಪದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ನಾಟಕಗಳನ್ನು ಬರೆದು ಲೋಕವಿಖ್ಯಾತರಾದವರು, ಒಂದು ಕಡೆಯೂ ಸೌಜನ್ಯಕ್ಕೂ ಅವರ ಹೆಸರು ಎತ್ತದಿದ್ದಾಗಲೂ ಅಜ್ಜನದು ಅದೇ ನಿರ್ಲಿಪ್ತತೆ. ಜಾನಪದ , ಜನರದು ಅದರ ಬಗ್ಗೆ ಯಾರು, ಏನು ಬೇಕಾದರೂ ಬರೆದುಕೊಳ್ಳಲಿ ಎಂಬ ನಿರ್ವಿಕಾರತೆ. ಇಂಥವರು ತಾನು ಮಾಡಿದ ಕೆಲಸದಿಂದ ಇಂಥದ್ದನ್ನು ತೆಗೆದುಕೊಂಡಿದ್ದಾರೆಂದು ಎಂದೂ ಹೇಳದ ಸೌಜನ್ಯ ಮೂರ್ತಿ. 


ಜಾನಪದದ ಅಕಡೆಮಿಕ್ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿರುವ ದೈತ್ಯರ ನಡುವೆ ಅಕಡೆಮಿಕ್ ಜನರಿಗಿಂಥ ಭಿನ್ನವಾಗಿ ಜಾನಪದದ ಮೂಲಭೂತ ಕೆಲಸ ಮಾಡಿದವರು ಸಂಗಣ್ಣಜ್ಜ. ಸಾವಿರಾರು ಜಾನಪದ ಮತ್ತು  ಶಾಸ್ತ್ರೀಯ ಸಂಗೀತದ ಧ್ವನಿ ಮುದ್ರಣಗಳು, ಕೋಲಾಟದ ಪದಗಳು, ಸೋಬಾನೆ ಪದಗಳು, ಬೀದಿ ನಾಟಕ, ಕರಡಿಯಾಟ, ತೊಗಲುಬೊಂಬೆಯಾಟ ಮುಂತಾದ ಸಾವಿರಾರು ಪುಟಗಳಾಗುವಷ್ಟು ದಾಖಲೆ ಅಜ್ಜನ ಬಳಿ ಇದೆ. ಅವರ ಇಂಥ ಅನೇಕ ಪ್ರಯತ್ನಗಳ ಫಲವಾಗಿ ಗೊಂದಲಿಗ ದೇವೇಂದ್ರಪ್ಪನ ಕಲೆ ಸಮಗ್ರವಾಗಿ ಸುಮಾರು ೭೦೦ ಪುಟಗಳಲ್ಲಿ ದಾಖಲಾಗಿದೆ. ಗೊಂಬೀಗೌಡರ ಸುಮಾರು ನಾಟಕಗಳು ಸಂಗ್ರಹಗೊಂಡು ಲಿಖಿತ ರೂಪದಲ್ಲಿ ಪ್ರಕಟಗೊಂಡಿವೆ. ಇನ್ನೂ ಲಿಪೀಕರಣವಾಗಬೇಕಿರುವುದು ಸಾಕಷ್ಟಿದೆ. ಈ ಜಾನಪದ ಭಂಡಾರ ಸರಿಯಾದ ರೀತಿಯಲ್ಲಿ ಜಂಗಮವಾಗಬೇಕು ಎಂಬುದು ಅವರ ಆಶಯ. ಆದರೆ ಅವರ ಈ ಬೃಹತ್ ಕೆಲಸವನ್ನು ಅಕಾಡೆಮಿಗಳಿಗೂ, ವಿಶ್ವವಿದ್ಯಾಲಯಗಳಿಗೋ ಕೊಡುವ ಮನಸ್ಸು ಅಜ್ಜನಗಿದ್ದಂತೆ ಕಾಣುವುದಿಲ್ಲ. ಸರಕಾರಿ ಜನ ಅದನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುತ್ತಾರೆನ್ನುವ  ಭರವಸೆ ಅಜ್ಜನಿಗೆ ಇನ್ನೂ ಬಂದಂತಿಲ್ಲ. ಜನಪದ ರಂಗಭೂಮಿಗೆ ಬೃಹತ್ ವೇದಿಕೆಯನ್ನು ಸೃಷ್ಟಿಸುವುದು ಅವರ ಮಹದಾಶೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಅಜ್ಜನನ್ನು ಸಾಂಸ್ಕೃತಿಕ ಪರಿಚಾರಿಕ ಎನ್ನಬಹುದು. ಅಜ್ಜನ ಉಪಚಾರ, ಪ್ರೋತ್ಸಾಹದ ಸ್ಪರ್ಶ ಅನುಭವಿಸದ ಸಾಂಸ್ಕೃತಿಕ ಜಗತ್ತಿನ ಜನ ಬಹಳ ಕಡಿಮೆ. ಯಾವುದೇ ವ್ಯಕ್ತಿಯ ನೆಗೆಟಿವ್ ಅಂಶಗಳನ್ನು ಎಂದೂ ಎತ್ತಿ ಆಡದ, ಮಾನವೀಯ ಮೌಲ್ಯಗಳ ವ್ಯಕ್ತಿ ಎಂಬ ಅಭಿಪ್ರಾಯ ಅವರ ೫೦ ವರ್ಷಗಳ ಒಡನಾಡಿ ಗುರುಮೂರ್ತಿ ಪೆಂಡಕೂರರದು.


ಅವರು ಬರೆದಿದ್ದು ಕಡಿಮೆಯದರೂ ಬರೆಯಲು ಪ್ರೋತ್ಸಾಹಿಸಿ, ಬರೆಯುವವರನ್ನು ಗುರುತಿಸಿದ್ದೇ ಹೆಚ್ಚು. ಇಷ್ಟೆಲ್ಲದರ ನಡುವೆ ಅವರ ಪ್ರಸಿದ್ದ ನಾಟಕಗಳಾದ ಲಕ್ಷಾಪತಿರಾಜನ ಕಥೆ, ಸೂಳೆ ಸಂಕವ್ವೆ, ಕಾವ್ಯ ಆ ಅಜ್ಜ ಈ ಮೊಮ್ಮಗ ನಮ್ಮೆದುರಿಗಿವೆ. ಮರಾಠಿಯಿಂದ ಕನ್ನಡಕ್ಕೆ ತಂದ ಘಾಸೀರಾಮ ಕೊತ್ವಾಲ, ಬೆಂಗಾಲಿಯಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಆ ಭಾಷೆಗಳ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ತರಲು ಬಂಗಾಲಿಯನ್ನು ಕಲಿತಿದ್ದು ಇನ್ನೂ ವಿಶೇಷ. ಈ ವಯಸ್ಸಿನಲ್ಲೂ ಅವರು ಸುಮ್ಮನೆ ಕುಳಿತಿಲ್ಲ. ಬುದ್ಧನ ಕುರಿತು ನಾಟಕ ಬರೆದಿದ್ದು, ಅದಕ್ಕೆ ಅಂತಿಮ ರೂಪು ನೀಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಅವರನ್ನು ಸರಿಯಾಗಿ ಗುರುತಿಸಿ, ಬಳಸಿಕೊಳ್ಳಲಿಲ್ಲ ಎನ್ನುವ ಅವರ ಅಭಿಮಾನಿಗಳ ದೊಡ್ಡ ಬಳಗವೇ ಇದೆ.

ಸಂಗಣ್ಣಜ್ಜನ ಸಂಗದಲ್ಲಿ:  ನಾನು, ಆನಂದ ಋಗ್ವೇದಿ, ತುರ್ವೀಹಾಳ ಚಂದ್ರು, ಪೀರ್‌ಭಾಷಾ.

1 comment: