ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 25 October 2010

ಗಾಂಧಿಕ್ಲಾಸ್: ಜವಾರಿ ಭಾಷೆ, ರೋಚಕ ಶೈಲಿ ಅದರಾಚೆ ಮತ್ತೇನೋ..!


ಅವ್ಯಾಹತ ಕೊಲೆಗಳು, ಒಂದು ತುತ್ತಿಗೂ  ಪರದಾಡುವ ಬಡವರಿಂದ ತುಂಬಿರುವ ಹಳ್ಳಿಗಳು, ಪ್ರಜಾಪ್ರಭುತ್ವವನ್ನು ಕೈಕಾಲು ಕಟ್ಟಿಹಾಕಿ ಕಾಲಬುಡದ ಸೇವಕನಂತೆ ನಡೆಸಿಕೊಳ್ಳುವ ಜಮೀನ್ದಾರಿ ಧಣಿಗಳು, ಮತ್ತವರ  ದಾರ್ಷ್ಟ್ಯದ  ರುದ್ರ ನರ್ತನ,  ಕಣ್ಣೆದುರಿಗೇ ನಡೆದ ಭೀಕರ, ಬೀಭತ್ಸ  ಪ್ರಪಂಚದ ಕ್ರೌರ್ಯದ ಕೃತ್ಯಗಳು, ಥ್ರಿಲ್ಲರ್ ಮಾದರಿ ನಿರೂಪಣೆ, ಬಹುತೇಕ ಪುಟಗಳ ತುಂಬೆಲ್ಲಾ ರಕ್ತದೋಕುಳಿ, ಒಟ್ಟಿನಲ್ಲಿ  ಈ ಭೂಮಿಯಲ್ಲಿ ಇಂಥ ಊರುಗಳೂ ಇವೆಯೇ ಎಂಬಷ್ಟರ ಮಟ್ಟಿಗಿನ ಊಳಿಗಮಾನ್ಯ ವ್ಯವಸ್ಥೆಯ ಚಿತ್ರಣ. ಇದೇ ಕುಂ.ವಿ ಅವರ ನೂರಾರು ಚಿತ್ರಗಳನ್ನು  ತೆರದಿಡುವ ಆತ್ಮ ಕತೆ  ಗಾಂಧಿ ಕ್ಲಾಸ್.

ಇದನ್ನು ಕಾಂದಂಬರಿ ಎಂದು  ಹೆಸರಾಂತ ವಿಮರ್ಶಕ ಸಿ.ಎನ್. ರಾಮಚಂದ್ರನ್ ಹೇಳಿದ್ದಾರೆ. ಅವರು ಹಾಗೆ ಯಾಕೆ ಹೇಳಿದರೋ ಗೊತ್ತಿಲ್ಲ. ಆದರೆ ಈ ಕಥಾನಕದ ಉದ್ದಕ್ಕೂ ಬರುವ ಫಿಕ್ಷನ್ ಮಾದರಿಯ ರೋಚಕ  ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಅವರು ಹಾಗೆ ಹೇಳಿರಬಹುದೇನೋ. ಒಟ್ಟಾರೆ ಆತ್ಮಚರಿತ್ರೆಯನ್ನು ಯಾಕೆ  ಕಾದಂಬರಿಗೆ ಹೋಲಿಸಿದರೆಂಬುದಕ್ಕೆ ಉಳಿದ ಕಾರಣಗಳನ್ನು ಅವರೇ ಹೇಳಬೇಕು. ಅದನ್ನು ಹೋಲಿಸುವುದೇ ಸರಿಯಲ್ಲವೇನೋ ಅನಿಸುತ್ತದೆ. ಏಕೆಂದರೆ ಅತ್ಮಕಥೆಯಲ್ಲಿ ಫಿಕ್ಷನ್‌ಗೆ ಜಾಗವೆಲ್ಲಿದೆ ?

ಕುಂ.ವಿ ಅವರ ಬಾಲ್ಯವಂತೂ  ಅನೇಕ ಹಳ್ಳಿ ಮಕ್ಕಳ ಹಿನ್ನೆಲೆಗಿಂತ ಭಿನ್ನವಾಗೇನೂ ಇಲ್ಲ. ಆದ್ದರಿಂದಲೇ ಅದು ತುಂಬಾ ಆಪ್ತವಾಗುತ್ತದೆ. ಅರೆರೆ  ಇದು ನಮ್ಮದೇ ಕಥೆಯಲ್ಲವೇ  ಅನಿಸುತ್ತದೆ. ಕುಂ.ವಿ  ಅವರು ಕೆಲಸ ಮಾಡಿದ ವಾಗಿಲಿ, ಗೂಳ್ಯಂಗಳೇ ಈ ಕಥಾನಕದ ಬಹುಭಾಗವನ್ನು ಆವರಿಸಿವೆ. ಅವರು ಕೊನೆಗೆ ಕೆಲಸ ಮಾಡಿ ಹೀರೇಹಾಳು ಅಷ್ಟಾಗಿ ಬಂದಿಲ್ಲ. ಹಾಗೆಂದು ಇದು ಕೊರತೆ ಅಂತ ಅಲ್ಲ. ಕುಂ.ವಿ ಅವರ ಕೊಟ್ಟೂರು ಎಲ್ಲ ಅರ್ಥಗಳಲ್ಲೂ ಸಹಜವಾಗಿಯೇ  ಕಥಾನಕದ ಅವಿಭಾಜ್ಯ ಅಂಗವಾಗಿ ವಿಜೃಂಭಿಸಿದೆ.  ಅಲ್ಲಲ್ಲಿ ಬರುವ ಕನ್ನಡ ಸಾಂಸ್ಕೃತಿಕ ಲೋಕದ ಜನರೊಂದಿಗೆ ಬೆಸೆದುಕೊಂಡಿರುವ ಘಟನೆಗಳು ತುಂಬಾ ಮುಕ್ತವಾಗಿ ಬಂದಿವೆ. ಹಾಗೆಯೇ ತಮ್ಮ ಹುಂಬತನ, ಮುಗ್ಧತೆಯನ್ನು ಮುಚ್ಚುಮರೆಯಿಲ್ಲದೆ  ಕುಂ.ವಿ ದಾಖಲಿಸುತ್ತಾರೆ.

ಇಷ್ಟು ದೊಡ್ಡ ಲೇಖಕನ ಜೀವನದಲ್ಲಿ ಸಾಂಸ್ಕೃತಿಕವಾಗಿ ಇಷ್ಟೇ ಘಟನೆಗಳೇ ಇರುವುದು ಎಂಬಷ್ಟರ ಮಟ್ಟಿಗೆ ಸಾಹಿತ್ಯಿಕ ವಿಚಾರಗಳು ಬಂದು ಹೋಗುತ್ತವೆ. ಇದು ಅನಗತ್ಯವಾಗಿ ಏಕೆ ಮೈಮೇಲೆ ಎಳೆದುಕೊಳ್ಳುವುದು ಎಂಬ ಎಚ್ಚರವೋ ಅಥವಾ ಘಟನೆಗಳನ್ನು ಮರೆಯುವ ಉದಾತ್ತತೆಯೋ ಅಥವಾ ಅವು ದಾಖಲೆಗೆ ಅರ್ಹವಲ್ಲವೆಂಬ ತೀರ್ಮಾನವೋ ಅಥವಾ ಅವರೇ ಕೆಲವು ಕಡೆ ದಾಖಲಿಸಿದಂತೆ ಅವರು ತಮ್ಮ ವೃತ್ತಿಯ ಬಹು ಭಾಗವನ್ನು ಹೊರಗಡೆ ಕಳೆದಿದ್ದರಿಂದಲೋ ಇರಬಹುದು.

ಆದರೆ ಅವರ ಸಿನಿಮಾ ಯಾನ ಮಜವಾಗಿಯೂ, ಯಾತನಾದಾಯಕವಾಗಿಯೂ ಇದೆ. ಸಿನಿಮಾಲೋಕದ ವಿವರಗಳನ್ನು ಹೇಳುವಾಗ ಅನೇಕ ಸೂಕ್ಷ್ಮ ವಿಷಯಗಳು ಬಂದು ಹೋಗುತ್ತವೆ. ಸಿನಿಮಾ ಎಂಬ ಮಾಯಾಮೃಗದ ಬೆನ್ನು ಹತ್ತಿದ್ದರಿಂದ ಅವರು ಕಲಿತ ಪಾಠಗಳು, ಚಿತ್ರರಂಗದ ಬಗ್ಗೆ ಇರುವ ಅನೇಕ ಭ್ರಮೆಗಳನ್ನು  ವಾಸ್ತವದ ನೆಲೆಯಲ್ಲಿ ದಾಖಲಿಸಿ ಒಂದು ವರ್ಗದ ಓದುಗರ ಕಣ್ಣನ್ನು ಖಂಡಿತ ತೆರೆಯುವಂತೆ ಮಾಡುತ್ತಾರೆ.

ಇನ್ನು ವಾಗಿಲಿ, ಗೋಳ್ಯಂ ಭಾಗದಲ್ಲಿ ಕುಂವಿ ಅವರು ಕುಖ್ಯಾತ ರೌಡಿಗಳು, ಧಣಿಗಳೂ ಮತ್ತು ಸಣ್ಣ-ಪುಟ್ಟದ್ದಕ್ಕೆಲ್ಲಾ ಕೊಚ್ಚುವ ಪುಡಿ ಹುಂಬರೊಂದಿಗೆ  ಮುಖಾಮುಖಿಯಾಗುವ ಘಟನೆಗಳಂತೂ  ಯಾವುದೇ ಸಿನಿಮಾ ದೃಶ್ಯಗಳಿಗಿಂತ ಕಮ್ಮಿಯಿಲ್ಲ. ಇದಕ್ಕೆ ಇಲ್ಲಿ ಬಹುತೇಕ ಘಟನೆಗಳಲ್ಲಿ ಅವರ ಸ್ವಾನುಭವಿ ಅಥವಾ ಪ್ರೇಕ್ಷಕ ಆಗಿರುವುದೇ ಕಾರಣವಿರಬಹುದು. ಕುಂ.ವಿ ಅವರ ಬರವಣಿಗೆ ಶಕ್ತಿ ಎಂಥದೆಂಬುದನ್ನು ಇದನ್ನು ಓದಿಯೇ ಅನುಭವಿಸಬೇಕು. ದೃಶ್ಯ ಮಾಧ್ಯಮಕ್ಕೆ ಏನೇನೂ ಕಡಿಮೆ ಇಲ್ಲದಂತೆ ನಿರೂಪಿಸುವ ಘಟನೆಗಳಂತೂ ಮೈ ನವಿರೇಳಿಸುತ್ತವೆ. ಕೆಲವು ಕೆಲವು ಕಡೆ ಅವರ ಬರವಣಿಗೆಯ ರೋಚಕ ಮಾದರಿ ಹೇಗಿದೆ  ಎಂದರೆ ಅದೇದನಾದರೂ ದೃಶ್ಯ ಮಾಧ್ಯಮದಲ್ಲಿ ಬಂದರೆ , ಅವು ವಾಚ್ಯವಾಗಿ ಆ ಕಲ್ಪನಾ ದೃಶ್ಯದ ಸೊಗಸೇ ಕಳೆದು ಹೋಗುತ್ತದೇನೋ ಅನಿಸುವಷ್ಟು ತಾಜಾ ಅಗಿವೆ. ಇದು ಕುಂ.ವಿ ಅವರು ಬರೆವ ತಾಖತ್ತು ಮತ್ತು ಬರವಣಿಗೆಗಿರುವ ಅಸಾಧಾರಣ ಸಾಧ್ಯತೆಗಳನ್ನು ತೆರದಿಡುತ್ತದೆ. ಈ ರೀತಿ  ಸಹಜವಾಗಿ, ಚೊಕ್ಕವಾಗಿ, ಚಿಕ್ಕದಾಗಿ ಬರೆಯುವುದನ್ನು ಕುಂ.ವಿ ಅವರನ್ನು ನೋಡಿಯೇ ನಮ್ಮಂಥ ಹೊಸ ಪೀಳಿಗೆ ಕಲಿಯಬೇಕೆನೋ ಎನ್ನುವಂತೆ ಕಥಾನಕ ಹರಿಯುತ್ತದೆ.

  ಆದರೂ ಅಷ್ಟೊಂದು ಬರೆದಿರುವ ಕುಂವಿ  ಅವರಂಥ ದೈತ್ಯ ಪ್ರತಿಭೆ ಈ ಆತ್ಮಕಥೆಯ ಮೊದಲ ನೂರು ಪುಟಗಳಲ್ಲಿ ಬೋರು ಹೋಡೆಸುತ್ತಾರೆ ಎಂಬುದನ್ನು ಅನಿವಾರ್ಯವಾಗಿ ಹೇಳಲೇಬೇಕಿದೆ. ಏಕೆಂದರೆ ಹೆಚ್ಚೂ ಕಡಿಮೆ ಪ್ರತಿ ಪ್ಯಾರಾ ಕೊನೆಯಾಗುವುದು ಎರಡೆರಡು ನೆಗೆಟಿವ್ ಪದಗಳನ್ನು ಸೇರಿಸಿ ಮಾಡುವ ಸಕಾರಾತ್ಮಕ ವಾಕ್ಯವನ್ನು ಕಟ್ಟುವುದರಿಂದ ಹಾಗಾಗುತ್ತದೆ. ಉದಾಹರಣೆಗೆ: ಅವರು  ಇದೆ  ಎಂದು ಬರೆಯಬೇಕಾದ ಕಡೆ  ಇಲ್ಲದಿಲ್ಲ ಎಂದೇ ಬಳಸುತ್ತಾರೆ. ಸಿಟ್ಟು ಬಂತು ಎಂಬುದನ್ನು ಸಿಟ್ಟು ಬರದೆ ಇರಲಿಲ್ಲ, ಹಲ್ಲು ಮಸೆದೆ ಎಂಬುದನ್ನು ಹಲ್ಲು ಮಸೆಯದೆ ಇರಲಿಲ್ಲ ಎಂದೇ ಬರೆಯುತ್ತಾರೆ. ಇದು ಕಥಾನಕದ ಉದ್ದಕ್ಕೂ ಬಂದೇ ಬರುತ್ತಾದಾದರೂ  ಮೊದಲ ಸುಮಾರು ನೂರು ಪುಟದಲ್ಲಂತೂ ಬಹುತೇಕ ಪ್ಯಾರಾಗಳು ಕೊನೆಯಾಗುವುದು ಈ ರೀತಿಯ ಪದಗಳಿಂದಲೇ. ಇದು ಬೇಜಾರು ತರಿಸುತ್ತದೆ.   ಎಂದಿನಂತೆ ಇಂಥ ಬೃಹತ್ ಕಥಾನಕವನ್ನು ಬರೆಯುವಾಗ ಎದುರಾಗುವ ಅನೇಕ ಘಟನೆಗಳ ಅನುಕ್ರಮಣಿ ಸಾಧ್ಯವಾಗದ ಸವಾಲು ಇಲ್ಲೂ ಎದ್ದು ಕಾಣುತ್ತದೆ. ಇದನ್ನು ಲೇಖಕರು ಮೊದಲೇ ಸ್ಪಷ್ಟಪಡಿಸಿರುವರಾದರೂ ಹತ್ತಾರು ಕೊಲೆಗಳು, ದೌರ್ಜನ್ಯಗಳು, ಘರ್ಷಣೆಗಳನ್ನು ಓದುವಾಗ ಗೊಂದಲವಾಗುತ್ತದೆ. ಆ ಘಟನೆಗಳನ್ನು ಮತ್ತೆ ಮತ್ತೆ  ಓದಿ ಸ್ಪಷ್ಟಪಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಇದೇನೂ ದೊಡ್ಡ ಕೊರತೆಯಲ್ಲದಿದ್ದರೂ  ಸರಾಗ ಓದಿಗೆ ಅಡ್ಡ ಬಂದರೂ ಅವುಗಳ ರೋಚಕತೆಯಿಂದ ಎಲ್ಲವನ್ನೂ ಆಸ್ವಾದಿಸುವಂತೆ ಮಾಡುತ್ತವೆ.

ತಮ್ಮ ಆತ್ಮಕತೆ ತೊಂಭತ್ತೈದು ಪರ್ಸೆಂಟ್ ನಿಜವೆಂದು ಕುಂ.ವಿಯವರೇ ಘೋಷಿಸಿರುವುದರಿಂದ ಆ ಕಾಲದ ಕರಾಳ ಘಟನೆಗಳನ್ನು ಅನುಮಾನಿಸುವ ಪ್ರಶ್ನೆ ಬರುವುದಿಲ್ಲವಾದರೂ ಸಾಮಾನ್ಯವಾಗಿ ಆತ್ಮಕತೆಯಲ್ಲಿ ಬರಬಹುದಾದ ನವರಸಗಳ ಕೊರೆತೆ ಇದೆ ಎಂದೇ ಹೇಳಬೇಕು. ಒಂದು ಅಪೂರ್ಣ ಪ್ರೇಮ ಸರಣಿ, ಅಷ್ಟೊಂದು ದೌರ್ಜನ್ಯ ಪೀಪಾಸು ಧಣಿಗಳು ಇದ್ದರೂ ಒಬ್ಬನೇ ಒಬ್ಬ ಕಚ್ಚೆ ಹರುಕ ಧಣಿ ಸಿಗುವುದಿಲ್ಲ. ಇದು ನಿಜವಿದ್ದರೂ ಇರಬಹುದು. ಅಥವಾ ಲೇಖಕರೇ ಅವನ್ನು ಕಡೆಗಣಿಸಿರಬಹುದು.

ಕಥಾನಕ ಹೆಚ್ಚು ರೋಚಕತೆ ಕಡೆಗೆ  ಪ್ರಜ್ಞಾಪೂರ್ವಕವಾಗಿಯೇ ಹರಿದಂತಿದೆ ಎಂದು ಮೊದಲ ಓದಿಗೇ ಅನಿಸಿಬಿಡುತ್ತದೆ. ನಮ್ಮ ಟಿವಿಗಳ  ‘ಕ್ರೈಂ’ಗಳಿಂದ ಕುಂ.ವಿ ಅವರು ಪ್ರಭಾವಿತರಾದರೇನೋ ಎಂಬ ಅನುಮಾನ ಬರುವಂತೆ ಹರಿಯುವ ಇದು ಅರ್ಧ ಆತ್ಮ ಕಥೆ, ಉಳಿದರ್ಧ ರಾಯಲಸೀಮೆಯ ಕ್ರೌರ್ಯವನ್ನೇ ಆಯುಧ ಮಾಡಿಕೊಂಡಿದ್ದ ಧಣಿಗಳ ಜವಾರಿ ಕತೆ. ಚಪ್ಪರಿಸಿಕೊಂಡು ಓದಬೇಕಾದ ಅಕ್ಷರ ಲೋಕ ಮತ್ತು ಅವು ಸೃಷ್ಟಿಸುವ ದೃಶ್ಯ ಲೋಕದ ಕಲ್ಪನೆಗಳು ವಿಜೃಂಭಿಸುತ್ತದೆ. ಅಷ್ಟರಮಟ್ಟಿಗೆ ಒಂದು ಅಪರೂಪದ ಯಶಸ್ವಿ ಕೃತಿಯೊಂದರ ದರ್ಶನ ಓದುಗನಿಗೆ ಖಂಡಿತಾ ಆಗುತ್ತದೆ. ಆ ಕಾರಣಕ್ಕೆ ಇದು ಓದಲೇಬೇಕಾದ ಆತ್ಮ ಕತಾನಕ.  ಇಷ್ಟಾಗಿಯೂ  ಗಾಂಧಿಕ್ಲಾಸ್ ಒಂದು ಅಪೂರ್ಣ ಆತ್ಮಕತೆ ಅನಿಸುವುದು ಯಾಕೋ ಗೊತ್ತಿಲ್ಲ.  ಒಂದೆರಡು ಘಟನೆ ಬಿಟ್ಟರೆ ಅವರ ಸಹೋದರ/ಸಹೋದರಿಯರ ನೆನಪುಗಳು ನೆಪಮಾತ್ರಕ್ಕೆ ಬಂದು ಹೋದಂತಿವೆ.

Thursday 23 September 2010

ಮಲೆನಾಡಿನ ಎರಡು ಚಿತ್ರಗಳು

೨೦೦೪ರ ಸುಮಾರಿನಲ್ಲಿ ತೆಗೆದ ಮಲೆನಾಡಿನ ಚಿತ್ರಗಳಿವು.

Saturday 28 August 2010

ತುಂಗಭದ್ರಾ: ಈ ರೀತಿ ಫೋಟೋ ಎಂದಾದರೂ ಕಂಡಿದ್ದೀರಾ !?

 ಇದು ೨೦೦೫ರ ಆಗಸ್ಟ್ ೧೫ರಂದು ತೆಗೆದ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆ ಚಿತ್ರ. ಈ ಚಿತ್ರ ತೆಗೆದ ಹಿನ್ನೆಲೆಯನ್ನು ಹೇಳಲೇಬೇಕು. ಸ್ಥಳೀಯವಾಗಿ ನಾವು ಲಾಂಚ್ ಮಾಡಲು ಉದ್ದೇಶಿಸಿದ್ದ ವಿಜಯ ಕರ್ನಾಟಕ ಪತ್ರಿಕೆಯ ‘ತುಂಗಭದ್ರಾ ವಿಜಯ’ದ ಮೊದಲ ಸಂಚಿಕೆಗೆ ಲೀಡ್ ಫೋಟೋ ಬೇಕಿತ್ತು. ವಾಡಿಕೆಯಂತೆ ತುಂಗಭದ್ರೆ ತುಂಬಿದರೆ ಆಗಸ್ಟ್ ೧೫ಕ್ಕೆ ಎಲ್ಲ ೩೩ ಕ್ರಸ್ಟ್  ಗೇಟುಗಳನ್ನೂ ತೆರೆದು ನದಿಗೆ ನೀರು ಬಿಡುತ್ತಾರೆ. ಅಂದು ಜನವೋ ಜನ, ಸಂಭ್ರಮ ಮುಗಿಲು ಮುಟ್ಟುತ್ತದೆ. ೩೩ ಕ್ರಸ್ಟ್  ಗೇಟ್‌ಗಳಿಂದ ಹೊರಬರುತ್ತಿರುವ ಚಿತ್ರ ತೆಗೆದು ಹಾಕುವುದು ಸಂಪ್ರದಾಯ. ನಮ್ಮ ಕಚೇರಿಯಲ್ಲಿದ್ದ ಏಳು ಮೆಗಾ ಪಿಕ್ಸೆಲ್‌ನ ಡಿಜಿಟಲ್ ಕ್ಯಾಮರಾ ಉಪಯೋಗಿಸಿ ವಿಕ್ಷಣಾ ಗೋಪುರದಿಂದ ಈ ಕೆಳಗಿನ ಚಿತ್ರ ತೆಗೆಯಲು ಯತ್ನಿಸಿದೆ. ಟ್ರೈಪಾಡ್ ಇಲ್ಲದೆ ಅ ಭಯಂಕರ ಗಾಳಿ, ಮಂಜು ಮುಸುಕಿದ ವಾತಾವರಣದಲ್ಲಿ ಈ ಫೋಟೋವನ್ನು ಪನೋರಮಾ ಟೆಕ್ನೋಲಜಿ ಉಪಯೋಗಿಸಿ ತೆಗೆಯಲಾಗಿದೆ.
ಪನೋರಮಾ: ಒಂದು ದೃಶ್ಯವನ್ನು ವಿಭಾಗ ಮಾಡಿಕೊಂಡು ಏಳೆಂಟು ಶಾಟ್‌ಗಳಲ್ಲಿ ಸೆರೆ ಹಿಡಿದು ಅದನ್ನು ಕಂಪ್ಯೂಟರ್‌ನಲ್ಲಿ ಕ್ಯಾಮರಾ ಕಂಪನಿ ಕೊಡುವ ಸಾಫ್ಟ್‌ವೇರ್ ಉಪಯೋಗಿಸಿ ಜೋಡಿಸುವುದು. ಪ್ರತಿ ಶಾಟ್ ತೆಗೆಯುವಾಗಲೂ ಅಲ್ಪ, ಸ್ವಲ್ಪ ಅಡ್ಡಡ್ಡವಾಗಿಯೋ, ಉದ್ದುದ್ದವಾಗಿಯೋ, ವ್ಯತ್ಯಾಸವಾದರೆ ಕ್ಯಾಮರ ಅದನ್ನು ಪ್ರತ್ಯೇಕ ಫೋಟೋ ಎಂದು ತಿಳಿದುಕೊಳ್ಳುತ್ತದೆ.  ಆದ್ದರಿಂದ ಮತ್ತೆ ಪ್ರಯತ್ನಿಸಬೇಕು. ಇದು ಈ ರೀತಿಯ ಫೋಟೋ ತೆಗೆಯುವಾಗ ಇರುವ ಚಾಲೆಂಜ್. ಅದೂ ಮೋಡದ ವಾತಾವರಣವಿರುವಾಗ ಸಿಗುವ ಕಡಿಮೆ ಬೆಳಕಲ್ಲಿ ಟ್ರೈಪಾಡ್ ಇಲ್ಲದೆಯೇ ಫೋಟೋಗ್ರಫಿಯ ಬಗ್ಗೆ ಆಳವಾದ ಜ್ಞಾನವಿಲ್ಲದೆ ತೆಗೆಯುವುದು ಇನ್ನೂ ಕಷ್ಟ. ಕೇವಲ ಪ್ರಯೋಗಾತ್ಮಕವಾಗಿ ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ. ಉಳಿದಂತೆ ತುಂಬಿ ತುಳುಕುತ್ತಿರುವ ತುಂಗಭದ್ರೆಯ ಕಲರವವನ್ನು ನನ್ನದೇ ಆಂಗಲ್‌ಗಳಲ್ಲಿ ಚಿತ್ರಿಸಿರುವುದನ್ನು ಇಲ್ಲಿ ಕೊಟ್ಟಿದ್ದೇನೆ ಕಣ್ತುಂಬಿಕೊಳ್ಳಿ.

Wednesday 11 August 2010

ವಂಚಿಸಿಬಿಟ್ಟೆಯಲ್ಲ ಗಾರುಡಿ


ಸುಚಿತ್ರ ಫಿಲ್ಮ್ ಸೊಸೈಟಿಯ ಆವರಣದಲ್ಲಿ ತಲೆ ಎತ್ತಿರುವ ಹೊಸ ಆಧುನಿಕ ಜೋಪಡಿಯಲ್ಲಿ ಕಿತ್ತಾನೆ ರಂಗಪ್ಪ ನಾಗರಾಜ (ಕಿರಂ) ತಮ್ಮ ‘ಲಾಸ್ಟ್ ಲೆಕ್ಚರ್’ ಮುಗಿಸಿ ಕೆಳಗಿಳಿಯಲು ಮೆಟ್ಟಿಲುಗಳ ಕಡೆಗೆ ಬರುತ್ತಿದ್ದರು. ಬಂದವರೆ ತಮ್ಮ ಚಪ್ಪಲಿಗಳಿಗಾಗಿ ಹುಡುಕಾಡಿದರು. ಚಪ್ಪಲಿಗಳು ಕೆಳಗಿರಬಹುದೆಂದುಕೊಂಡರೋ ಏನೋ? ಆಸರೆಗಿದ್ದ ಕಂಬಿ ಹಿಡಿದುಕೊಂಡು ಇಳಿಯುತ್ತಿದ್ದರು. ನಮಸ್ಕಾರ ಎಂದವನಿಗೆ ಪ್ರತಿ ನಮಸ್ಕಾರ ಹಾಕಿ ಮುಗುಳ್ನಕ್ಕರು. ಕಾರ್ಯಕ್ರಮಗಳು ಮುಗಿವ ಹಂತ ತಲುಪಿದ ಕೂಡಲೇ ಹೋಗಬೇಕೆಂದುಕೊಂಡವನು ಪರಿಚಿತರು ಸಿಗುತ್ತಾರೆ ಎಂಬ ಆಸೆಯಿಂದ ನಿಂತಿದ್ದೆ. ಹಾಗಾಗಿ ಕಿರಂ ಅವರ ಕೊನೆಯ ದರ್ಶನವಾಯಿತು.

ಉಪನ್ಯಾಸದಲ್ಲಿ ಅವರು ಮಾತನಾಡಿದ ರೀತಿ ಮತ್ತು ಗತ್ತನ್ನು ಕೇಳಿಸಿಕೊಂಡವರಿಗೆ ಅವರು ಸುಸ್ತಾಗಿರಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ. ಉಪನ್ಯಾಸ ಮುಗಿದಾಗ , ‘ಸಂಚಯ’ದ ಪ್ರಹ್ಲಾದ್ ಮಾತನಾಡುತ್ತಾ, ‘ಕಿರಂ ಅವರಿಗೆ ಹುಷಾರಿರಲಿಲ್ಲ. ಅವರು ಕಾರ್ಯಕ್ರಮಕ್ಕೆ ಬಂದಾಗ ಅವರಲ್ಲಿ ಲವಲವಿಕೆ ಇರಲಿಲ್ಲ. ತುಂಬಾ ತೊಂದರೆಯಾದರೆ ಕಾರ್ಯಕ್ರಮ ರದ್ದು ಮಾಡೋಣ ಎಂದೆವು ಆದರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಷ್ಟೊಂದು ಚೆನ್ನಾಗಿ ಮಾತನಾಡಿದರು’ ಎಂದು ಕಿರಂ ಅವರಿಗೆ ಧನ್ಯವಾದ ಅರ್ಪಿಸಿದರು.  ಇದು ಅವರ ‘ಲಾಸ್ಟ್ ಲೆಕ್ಚರ್’ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲದಷ್ಟು ಲವಲವಿಕೆಯಿಂದ ಅವರು ದಶಕಗಳಿಂದ ಚರ್ಚೆಯಾಗುತ್ತಿರುವ  ಬೇಂದ್ರೆಯವರ  ಜೋಗಿ ಪದ್ಯವನ್ನು ಕುರಿತು ಮಾತನಾಡಿದರು. ನಡುನಡುವೆ ಅವರ ಬೇರೆ ಪದ್ಯಗಳನ್ನೂ ಉದ್ಧರಿಸಿದರು. ಬೇಂದ್ರೆ ಈ ರೀತಿ ಬರೆಯಲು ಸಾಧ್ಯವಿಲ್ಲ ಎಂದು ಕಾವ್ಯದ ವಿಷಯವಾಗಿ ತಾವು ಒಪ್ಪದ ಕೆ.ಎಸ್. ನರಸಿಂಹಸ್ವಾಮಿ ಅವರ ನಾನು ನನ್ನ ಶಾರದೆ, ಪಗಡೆಯಾಡಬಾರದೆ ಎಂಬ ಪದ್ಯವೊಂದರ ಸಾಲುಗಳನ್ನು ಉಲ್ಲೇಖಿಸಿದರು. ಜೋಗಿ ಪದ್ಯದಲ್ಲಿರುವ ಪ್ರೇಮ -ಕಾಮದ ಸೆಳೆತಗಳ ಕುರಿತು ಈಗ ಹೆಚ್ಚು ಚರ್ಚಿಸುವುದಿಲ್ಲ ಎಂದ ಅವರು, ಮತ್ತೆ ಹೊಸ ರೂಪಕಗಳೊಂದಿಗೆ ಜೋಗಿಯನ್ನು ನಮ್ಮೆದುರಿಗೆ ತೆರೆದಿಟ್ಟರು. ಕಾವ್ಯಕ್ಕಿರುವ ಕಷ್ಟ ಮಾಯಿಸುವ  ಗುಣದ ಬಗ್ಗೆಯೂ ಮಾತನಾಡಿ, ಬೇಂದ್ರೆ ಪದ್ಯಗಳ ಬಗ್ಗೆ ಮಾತನಾಡಿ ಗುಣಮುಖನಾದೆ ಎಂದೂ ಚಟಾಕಿ ಹಾರಿಸಿದರು. ಇಂಥದೇ ಪದ್ಯದ ಬಗ್ಗೆ ಮಾತನಾಡಬೇಕೆಂದು ಯಾರಾದರೂ ಸೂಚಿಸಿದರೆ ಮುಂದಿನ ಉಪನ್ಯಾಸದಲ್ಲಿ ಮಾತನಾಡುವುದಾಗಿ ತಿಳಿಸಿ ಉಪನ್ಯಾಸ ಮುಗಿಸಿದ್ದರು.

ಅವರ ಮಾತುಗಳ ಗುಂಗಿನಲ್ಲೇ ಮನೆಗೆ ಬಂದು, ಒಂಬತ್ತೂವರೆ ಹೊತ್ತಿಗೆ ಎಂದೂ ಮಲಗದ ನಾನು, ಅಂದು ದಿಂಬಿನ  ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗಿದ್ದುದರಿಂದ, ಕಿರಂ ಅವರ ಜತೆಗೆ ಅವರ ಕೊನೆ ಕ್ಷಣಗಳಲ್ಲಿ ಇರಬೇಕಾದ ಸಂದರ್ಭದಿಂದ ವಂಚಿತನಾದೆ. ಬೆಳಗ್ಗೆ ಪತ್ರಿಕೆ ಬರುವುದಕ್ಕೆ ಹತ್ತು ನಿಮಿಷದ ಮುಂಚೆ  ಅವರ ಉಪನ್ಯಾಸದ ಕುರಿತು ನಮ್ಮ ಮನೆಯವರೊಂದಿಗೆ ಮಾತನಾಡಿದ್ದೆ. ಇದು ಅವರು ಹತ್ತಿಸಿದ್ದ ಗುಂಗು. ಪತ್ರಿಕೆ ನೋಡಿದರೆ ಕಿರಂ ಇನ್ನಿಲ್ಲ ಎಂಬ ಸುದ್ದಿ. ಚಡಪಡಿಸಿ ಮೊಬೈಲ್ ತೆಗೆದು ನೋಡಿದರೆ ಹತ್ತಾರು ಮಿಸ್ಡ್ ಕಾಲ್‌ಗಳು, ನಾಲ್ಕೈದು ಮೆಸೇಜ್‌ಗಳು ಇದ್ದವು. ಇದೆಲ್ಲಾ ಕಣ್ಣುಮುಚ್ಚಿ ತೆರೆಯುವುದರೊಳಗೆ ನಡೆದಂತಾಯಿತು.

ಸಾಹಿತ್ಯದ ವಿಷಯವಾಗಿ ಶ್ರೇಷ್ಠರಾಗಿಯೂ ಶ್ರೇಷ್ಠತೆಯ ವ್ಯಸನವಿಲ್ಲದ ಕಿರಂ, ಎಲ್ಲರಿಗಿಂತ ಭಿನ್ನ ಎಂದರೆ ಖಂಡಿತವಾಗಿ ಕ್ಲೀಷೆಯಲ್ಲ. ವೈಯಕ್ತಿಕವಾಗಿ ಯಾರನ್ನೂ ದೂರದ, ಎಲ್ಲರನ್ನೂ ತಾತ್ವಿಕವಾಗಿಯೇ ಎದುರಿಸುತ್ತಿದ್ದ ಕಿರಂ ಅವರಿಗೆ ಹಮ್ಮು -ಬಿಮ್ಮು ಗೊತ್ತಿರಲಿಲ್ಲ ಎಂದೇ ಹೇಳಬೇಕು. ಅವರ ಪ್ರತಿಕ್ರಿಯೆಗಳು ತುಂಬಾ ಉದಾತ್ತವಾಗಿರುತ್ತಿದ್ದವು. ಹಾಗಾಗಿ ಕ್ಷುಲ್ಲಕ ಪ್ರತಿಕ್ರಿಯೆಗಳು ಮತ್ತು ಕೊಂಕು - ಈರ್ಷೈಗಳಿಗೆ ಅವಕಾಶವಿರಲಿಲ್ಲ. ಕಿರಂ ಅವರ ಭೇಟಿ, ಸಂಪರ್ಕ ಎಲ್ಲರಿಗೂ ಸಾಧ್ಯವಿದ್ದುದರಿಂದಲೇ ಅವರು ಸಾಹಿತ್ಯದ ಅದರಲ್ಲೂ ಕಾವ್ಯದ ಸಾವಿರಾರು ವಿದ್ಯಾರ್ಥಿಳಿಗೆ ದ್ರೋಣಾಚಾರ್ಯರಾಗಿದ್ದರು. ಇತ್ತೀಚೆಗಂತೂ ಸಾಹಿತ್ಯದ ಜಿಜ್ಞಾಸೆಗಳು ಬಂದಾಗಲೆಲ್ಲಾ ಕಿರಂ ಇದ್ದಾರಲ್ಲ ಕೇಳಿದರಾಯಿತು ಎಂಬ ಮಾತುಗಳು ಹೆಚ್ಚಾಗಿದ್ದವು. ಅಷ್ಟರಮಟ್ಟಿಗೆ ಕಿರಂ ಹೇಳಿದರೆ ಅಕೃತ ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು. ಕಿರಂ ಇದ್ದಾರಲ್ಲ ಎಂಬ ಧೈರ್ಯವೇ ನಮಗೆಲ್ಲ ಸಾಕಾಗಿತ್ತು. ಏಕ ಕಾಲಕ್ಕೆ ಗೆಳೆಯ, ಮೇಷ್ಟ್ರು, ಅಜ್ಜ ಎಲ್ಲ ಆಗಬಹುದಾದ ಸಾಧ್ಯತೆ ಕಿರಂ ಅವರಿಗಿತ್ತು.

ನಮ್ಮಂಥವರ ಸಾಂಗತ್ಯದಲ್ಲಿದ್ದಾಗ ಸಾಮಾನ್ಯವಾಗಿ ಸಾಹಿತ್ಯೇತರ ವಿಷಯಗಳಿಗೆ ಸ್ಥಾನವಿರುತ್ತಿರಲಿಲ್ಲ ಎನ್ನುವುದು ನನ್ನ ಅನುಭವ ಮತ್ತು ತಿಳಿವಳಿಕೆ. ಎಲ್ಲ ಹೊಸಬರನ್ನೂ ಅತ್ಯಂತ ಶ್ರದ್ಧೆಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದ ಕಿರಂ ಅವರಿಗೆ ಕಿಂದರ ಜೋಗಿ, ಗಾರುಡಿ, ಆಧುನಿಕ ಸೂಫಿ ಸಂತ ಮುಂತಾದ ಅನ್ವರ್ಥಗಳಿದ್ದವು. ಕೆಲವರಂತೂ ಅವರನ್ನು ಅವ್ವಾ ಎಂದೇ ಕರೆಯುತ್ತಿದ್ದರು. ಇವೆಲ್ಲಕ್ಕೂ ಅವರು ಅರ್ಹರಾಗಿದ್ದರು.  ಸಮಕಾಲೀನತೆ ಕಿರಂ ವಿಶೇಷತೆ. ಅವರು ಯಾವಾಗಲೂ ಎಲ್ಲ ವಿಷಯಗಳ ಬಗೆಗೂ ಪ್ರಸ್ತುತವೇ ಆಗಿದ್ದರು. ಕಿರಂ ಅವರ ಮುಂದೆ ಏನೋ ಗೊತ್ತಿದೆ ಎಂದು ತೋರಿಸಿಕೊಳ್ಳುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ. ಕಂಪ್ಯೂಟರ್‌ನಿಂದ ಹಿಡಿದು ಐಪಾಡ್‌ವರೆಗೆ, ಥಿಯರಿ ಆಫ್ ರಿಲೇಟಿವಿಟಿಯಿಂದ ಹಿಡಿದು ಕೃಷ್ಣ ಕುಳಿಗಳ (ಬ್ಲ್ಯಾಕ್ ಹೋಲ್ಸ್) ಗಳವರೆಗೆ ಕಿರಂ ಮಾತಾಡಬಲ್ಲವರಾಗಿದ್ದರು. ಅವರಲ್ಲಿ ಒಂದು ಬಿಂದುವನ್ನೂ ಅಹಂಕಾರದ ರೂಪದಲ್ಲಿ ಕಾಣಲು ಸಾಧ್ಯವಿರಲಿಲ್ಲ. ಎಲ್ಲವನ್ನೂ ಹೊಸ ಹೊಳಹಿನಿಂದ ಹೇಳುವ ಶಕ್ತಿ ಅವರಿಗಿತ್ತು. ಇತರರು, ಅರೆರೆ ಇದು ತಮಗೆ ಹೊಳೆಯಲೇ ಇಲ್ಲವಲ್ಲ ಎಂಬಂತೆ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ಒಟ್ಟೂ ಸಾಹಿತ್ಯದ ಅನನ್ಯತೆಯನ್ನು ಕಿರಂ ಅನನ್ಯತೆಯಿಂದಲೇ ವ್ಯಾಖ್ಯಾನಿಸುತ್ತಿದ್ದರು. ಹಾಗಾಗಿ ಕಿರಂ ದನಿಗೆ ಪ್ರತಿ ಬಾರಿಯೂ ಹೊಸತನ ಮತ್ತು ಸಮಕಾಲೀನತೆ ಇದ್ದವು. ಕಾವ್ಯಕ್ಕೆ ಕಾಲವಿಲ್ಲ. ಕಾವ್ಯ ಎಲ್ಲ ಅರ್ಥಗಳನ್ನೂ ಒಳಗೊಂಡ ವಿಶ್ವಕೋಶದಂತೆ ಎನ್ನುವುದು ಕಿರಂ ಅವರ ಪ್ರಬಲ ಪ್ರತಿಪಾದನೆಯಾಗಿತ್ತು.

ಕಿರಂ ಅವರು ಕೈಲಾಸಂ ಮತ್ತು ಸ್ವಾಮಿ ವೆಂಕಟಾದ್ರಿ ಅಯ್ಯರ್ (ಸಂಸ) ಅವರಂಥ ಘನ ವ್ಯಕ್ತಿತ್ವಗಳ ಕೊಂಡಿ. ಸಂಸ ಅವರಂತೆ ಕಿರಂ ಅವರಿಗೆ ಯಾವುದೇ ಫೋಬಿಯಾಗಳು  ಇರಲಿಲ್ಲವಾದರೂ  ಶಿಸ್ತು, ಅಚ್ಚುಕಟ್ಟುಗಳ ಕೊರತೆ, ಅಸ್ತವ್ಯಸ್ತತೆ ಇದ್ದೇ ಇದ್ದವು.ಆದರೆ ಇಂಥವೇ ಗುಣಗಳು ಕಿರಂ ಅವರು ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗಿಸಿದವು ಎನ್ನುವವರಿದ್ದಾರೆ. ಅವರ ಅನೇಕ ಪ್ರತಿಕ್ರಿಯೆಗಳು ಏಕ ಕಾಲದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಮತ್ತು ಸಮಾಜದ ಎಲ್ಲ ಆಯಾಮಗಳನ್ನೂ  ಪ್ರತಿನಿಸುವ ಅದ್ವೈತದಂತೆ  ಇದ್ದವು. ಇವೆಲ್ಲ ಕಿರಂ ನಮ್ಮನ್ನೆಲ್ಲಾ ಆವರಿಸಿದ್ದ ಪರಿಯಿಂದ ಆದ ಬೆಳವಣಿಗೆಗಳು. ಇತ್ತೀಚೆಗೆ ಅವರು ಕಿರಿಯರನ್ನು ಕಟುವಾಗಿ ವಿಮರ್ಶಿಸುತ್ತಿಲ್ಲ ಎಂಬ ದೂರುಗಳೂ ಇದ್ದವು. ಅದು ಮಾಗಿದ ಜೀವದ ಇನ್ನೊಂದು ಆಯಾಮವಿರಬಹುದು. ಒಬ್ಬ ಹೊಸಬನ ಸಾಹಿತ್ಯದಲ್ಲಿ ಅವನು ಬೆಳೆಯಬಹುದಾದ ಒಂದು ಪ್ರಬಲ ಎಳೆ ಇದ್ದರೂ ಕಿರಂ ಅವನ ಪರ ನಿಲ್ಲುತ್ತಿದ್ದರು. ಹಾಗಂತ ಇದನ್ನು ರಿಯಾಯಿತಿ ಎಂದು ಯಾರೂ ಭಾವಿಸಬೇಕಿರಲಿಲ್ಲ. ಅವರು ಪ್ರಬಲವಾಗಿ ವಕ್ತಾರಿಕೆ ವಹಿಸಿದ ಯಾರೂ ಕಳಪೆ ಬರಹಗಾರರಲ್ಲ.

ಅವರ ಸರಳತೆ ಮತ್ತು ಮಗುತನಗಳಿಗೆ ಸಾಕ್ಷಿಯಾಗಿದ್ದ ಎರಡು ಘಟನೆಗಳನ್ನು ಉಲ್ಲೇಖಿಸಬಹುದು ಎಂದುಕೊಂಡಿದ್ದೇನೆ. ಒಮ್ಮೆ ಹಿರಿಯ ಬರಹಗಾರರೊಬ್ಬರ ಅಭಿನಂದನಾ ಸಮಾರಂಭದಲ್ಲಿ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕಿರಂ ವಹಿಸಿದ್ದರು. ಸಭೆಯಲ್ಲಿ ಕವಿತೆ ವಾಚಿಸಿದವರಲ್ಲಿ ಬಹುತೇಕರು ಅಭಿನಂದಿತರ ಸಮಕಾಲೀನರೇ ಆಗಿದ್ದರು. ಎಲ್ಲರದೂ ಬಹುಪರಾಕ್ ಕವನಗಳೆ. ಸಮಾರಂಭ ಮುಗಿದ ಮೇಲೆ ಕಿರಂ ರಸ್ತೆ ಕಡೆಗೆ ನಡೆದು ಬರುತ್ತಿದ್ದರು. ಹೆಗಲಲ್ಲಿ ಬ್ಯಾಗಿತ್ತು. ಮನೆಗ ಸಾರ್ ಎಂದೆ. ಹೌದು ಆಟೋದಲ್ಲಿ ಹೋಗುತ್ತೇನೆ ಎಂದರು. ಮನೆಗೆ ಬಿಡುತ್ತೇನೆ ಎಂದು ನನ್ನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಹೊರಟೆ. ದಾರಿಯಲ್ಲಿ ಕವಿಗೋಷ್ಠಿ ಹೇಗಿತ್ತು ಸಾರ್ ಎಂದೆ. ಮಾರ್ಮಿಕವಾಗಿ ನಗುತ್ತಾ ‘ಅಭಿನಂದನಾ ಸಮಾರಂಭ ಅಲ್ವೆ ’ ಎಂದರು.


ಇನ್ನೊಂದು ದಿನ ಸಂಜೆ ಅವರ ಮನೆಗೆ ನಾನು, ನಾಗತಿಹಳ್ಳಿ ರಮೇಶ್ ಮತ್ತು ರಾಮಲಿಂಗಪ್ಪ ಟಿ. ಬೇಗೂರು ಹೋದೆವು. ಮನೆಯಲ್ಲಿ ಅವರು ಮತ್ತು ಅವರ ಕೊನೆ ಮಗಳು ಚಂದನ ಮಾತ್ರ ಇದ್ದರು. ಒಂದೆರಡು ಗಂಟೆ ಹರಟೆ ಹೊಡೆದೆವು.ಆಗ ಸುಮಾರು ಒಂಬತ್ತೂವರೆ ಆಗಿತ್ತು. ರಾತ್ರಿ ಒಮ್ಮೆ ಮನೆಗೆ ಬಂದ ಮೇಲೆ ಹೊರ ಹೋಗುತ್ತಿರಲಿಲ್ಲವೆಂದು ಕಾಣುತ್ತದೆ. ನಾವು ಹೊರಡಲು ಅನುವಾಗಿ ಸಾರ್ ಬರುತ್ತೀರಾ ಅಂದೆವು.  ಮೊದಲೇ ಹೇಳಬಾರದೇನ್ರಯ್ಯಾ ಎಂದು ಗೊಣಗಿ, ತಮ್ಮ ಮಗಳನ್ನು ಕರೆದು, ಮಗೂ ನೀನು ಊಟ ಮಾಡಿ ಮಲಗಿಕೋ ನಾವು ಇಲ್ಲೇ ಇವರ ಕಾರಲ್ಲಿ ಕೂತು ಮಾತನಾಡುತ್ತೇವೆ ಎಂದು ಹೇಳಿದರು.  ಕಾರಲ್ಲಿ ಇದ್ದ ಮಾಲನ್ನು ನೋಡಿ ಛೇ ಇದೇನ್ರಯ್ಯಾ ಇರಿ ಬರ್‍ತೀನಿ ಅಂತ ಅಂಗಡಿ ಕಡೆ ಹೋದರು. ಜೇಬಲ್ಲಿ ದುಡ್ಡು ತಂದಿರಲಿಲ್ಲ. ಮತ್ತೆ ಮನೆಗೆ ಹೋಗಿ ದುಡ್ಡು ತರುವುದಾಗಿ ಹಠ ಹಿಡಿದರು. ನಾವು ಎಷ್ಟು ಹೇಳಿದರೂ ಕೇಳಲಿಲ್ಲ. ನಾವು ಮನೆಗೆ ಹೋಗುವುದು ಬೇಡ ಎಂದರೂ ಕೇಳದೆ ನಮಗೂ ಕೊಡಲು ಬಿಡದೆ ದುಡ್ಡು ತಂದು ತಮ್ಮ ಇಷ್ಟದ ಬ್ರ್ಯಾಂಡ್ ತಂದೇಬಿಟ್ಟರು. ಸರಿ, ಕಾರಲ್ಲೇ ಸಮಾರಾಧನೆ ಶುರುವಾಯಿತು. ‘ಏ ರಾಮಲಿಂಗಪ್ಪ ಕಾರ್ ಓಡುಸ್ರಿ, ಯಾವನಾರ ಪೋಲೀಸ್ನೋನು ಗಲಾಟೆ ಮಾಡಿದ್ರೆ ಅಕ್ಕ-ಪಕ್ಕದೋರ್‍ಗೆ ತೊಂದ್ರೆ ಆಗುತ್ತೆ’ ಎಂದರು.

ಈ ನಡುವೆಯೇ ಆಗ ನಮ್ಮ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮತಾಂತರ ಕುರಿತ ಚರ್ಚೆಗೆ  ಅಂದು ಪ್ರತಿಕ್ರಿಯಿಸಿದ್ದ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಅವರ ಜತೆ ಲೇಖನದ ಬಗ್ಗೆ ದೀರ್ಘವಾಗಿ ಜಂಗಮವಾಣಿಯಲ್ಲಿ ಮಾತಾಡಿದರು. ಗಲ್ಲಿಗಲ್ಲಿಗಳಲ್ಲಿ ರಾಮಲಿಂಗಪ್ಪ ಕಾರನ್ನು ನಿಧಾನಕ್ಕೆ ಓಡಿಸುತ್ತಿದ್ದರೆ, ಇತ್ತ ಗುರುಗಳು ಗಟ ಗಟ ಕುಡಿದು ಮಗುವಿನಂತೆ ಒಂದು ಅಬೋದ ನಗೆ ನಕ್ಕರು. ಆಗ ತಾನೆ ಹಾಲು ಕುಡಿದು ನಕ್ಕ ಮಗುವಿನಂಥ ತೃಪ್ತಿ ಅವರ ಕಣ್ಣುಗಳಲ್ಲಿತ್ತು. ಇನ್ನೂ ಆಗಿಲ್ಲವೆ ಎಂದು ನಮ್ಮತ್ತ ನೋಡಿದರು. ನಾವು ವೈನು, ಬೀರನ್ನು ಕುಡಿಯಲು ಒದ್ದಾಡುತ್ತಿದ್ದನ್ನು ನೋಡಿ ಬೇಗ ಮುಗುಸ್ರಯ್ಯಾ ಎಂದು ಅವಸರಿಸಿದರು.

ಇಂತ ಗುರುಗಳು ಈಗ ಕೇವಲ ನೆನಪು ಮಾತ್ರ. ಮರೆತೇನೆಂದರೆ ಮರೆಯಲಿ ಹ್ಯಾಂಗ !?

Tuesday 20 July 2010

ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಘಟಿಕೋತ್ಸವ:೧೯೯೯

೧೯೯೯ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದು ಬೀಗಿದ ಕ್ಷಣ: ಕನ್ನಡ ಪತ್ರಿಕೋದ್ಯಮದ ಹೆಮ್ಮೆಯ ಸಂಪಾದಕ ವೈ.ಎನ್.ಕೆ ಮತ್ತು ಇಂಗ್ಲಿಷ್ ಪತ್ರಿಕೋದ್ಯಮದ ಇನ್ನೊಬ್ಬ ದಿಗ್ಗಜ ಎಂ.ಜೆ. ಅಕ್ಬರ್ ಅವರೊಂದಿಗೆ.

Monday 19 July 2010

ಕ್ರೈಸ್ಟ್ ಕಾಲೇಜ್ ಕವಿದಿನ: ನಾವೆಲ್ಲ ಕವಿಗಳಾದ ದಿನ


ಕವಿ ಕ್ಷಣ: ಕ್ರೈಸ್ಟ್ ಕಾಲೇಜ್ ಎಂದರೆ ರಾಜು ಮೇಷ್ಟ್ರು, ಬೇಂದ್ರೆ (ಜನ್ಮದಿನ  ಜ.೩೧) ಕವಿ ದಿನ. ಅದು ನಮ್ಮನ್ನೆಲ್ಲಾ ಕವಿಗಳು ಅಂತ ಪ್ರತಿ ವರ್ಷ ಘೋಷಿಸುತ್ತಿದ್ದ ದಿನ. ಹಿರಿಯ ಕವಿಗಳಿಂದ ಕವಿಗಳೆಂಬ ಆಭಿದಾನ ಪಡೆದು ನಾವು ಬೀಗಿದ ಕ್ಷಣಗಳು ಮರೆಯಲಾರದಂಥವು. ಸತತ ಮೂರು ವರ್ಷ ಕ್ರೈಸ್ಟ್ ಕಾಲೇಜ್ನ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕ್ಷಣಗಳನ್ನು ಹಂಚಿಕೊಳ್ಳೋಣ ಎನಿಸಿತು.









ಮೊದಲ ವರ್ಷ: ಚನ್ನವೀರ ಕಣವಿ ಅವರೊಂದಿಗೆ. 






















ಎರಡನೇ ವರ್ಷ: ರಾಮಚಂದ್ರ ಶರ್ಮ ಅವರೊಂದಿಗೆ.

Wednesday 14 July 2010

'ಕಮ್ಯುನಿಸ್ಟ್ ಕಲ್ಪನೆಗೆ ಮೈಗಳ್ಳತನ ಮೂಲ' (ಡಾ. ಭೈರಪ್ಪ ಅವರ ೧೧ ವರ್ಷಗಳ ಹಿಂದಿನ ಸಂದರ್ಶನ)

‘ವಿಜಯ ಕರ್ನಾಟಕ’ ದಿನಪತ್ರಿಕೆ ಬಿಡುಗಡೆ ಮಾಡಿದ (೫ ಅಕ್ಟೋಬರ್ ೧೯೯೯) ಖ್ಯಾತ ಕನ್ನಡ ಸಾಹಿತಿ, ಚಿಂತಕ, ಎಸ್.ಎಲ್. ಭೈರಪ್ಪನವರು ಪತ್ರಿಕೆಯ ಬಳಗದೊಂದಿಗೆ ಅನೇಕ ವಿಷಯಗಳನ್ನು ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆ ಅವಿಸ್ಮರಣೀಯ ಅನುಭವಕ್ಕೆ ನೀಡಿದ ಅಭಿವ್ಯಕ್ತಿ ಈ ಲೇಖನ. ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪುಟ ೧, ಸಂಚಿಕೆ ೨ರಲ್ಲಿ ಪ್ರಕಟಗೊಂಡಿದೆ. ಈ ಸಂದರ್ಶನಕ್ಕೆ ಈಗ ೧೧ ವರ್ಷ. ಆನಂತರ ಈ ಸಂದರ್ಶನ ಆರ್.ಜಿ.ಹಳ್ಳಿ ನಾಗರಾಜ್ ಸಂಪಾದಕತ್ವದ ಅನ್ವೇಷಣೆಯಲ್ಲೂ ಪ್ರಕಟಗೊಂಡಿದೆ.

ಮಠ ಸಂಸ್ಕೃತಿ ಒಳ್ಳೆಯ ಬೆಳವಣಿಗೆ ಅಲ್ಲ. ಮಠಗಳಿಲ್ಲದಿದ್ದರೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ಮನೋಭಾವ ಎಲ್ಲ ಸಣ್ಣ-ಪುಟ್ಟ ಜಾತಿಗಳಲ್ಲಿ ಬೆಳೆದುಬಿಟ್ಟಿದೆ. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎಂಬುದೂ ಇದಕ್ಕೆ ಕಾರಣ.

ಮಠಗಳಲ್ಲಿ ಅನೇಕ ಒಳ್ಳೆಯ ಬೆಳವಣಿಗೆಗಳಾಗುತ್ತಿವೆ. ಎಲ್ಲ ಮಠಗಳಲ್ಲೂ ಮಕ್ಕಳಿಗೆ ಸಂಸ್ಕೃತ, ವೇದಾಧ್ಯಯನ ಮಾಡಿಸುತ್ತಿದ್ದಾರೆ. ಇದು ಪ್ರತಿಯೊಂದು ಜಾತಿಗಳಲ್ಲಿಯೂ ಪುರೋಹಿತರನ್ನು ಸೃಷ್ಟಿಸುತ್ತದೆ. ಹಾಗೆಯೇ ಹಿಂದುಳಿದ ವರ್ಗಗಳ ಮಠಗಳಲ್ಲಿ ಸ್ವಾಮೀಜಿಗಳು ಬ್ರಾಹ್ಮಣರಂತೆಯೇ ಬದುಕು ನಡೆಸುತ್ತಿದ್ದಾರೆ. ಈ ಜಾತಿಗಳು ಮಠಗಳನ್ನು ಕಟ್ಟಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬಂದಿವೆ. ಇದರಿಂದ ಜಾತಿಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸಗಳು ಕಡಿಮೆಯಾಗುತ್ತವೆ. ಒಂದು ಕಾಲದಲ್ಲಿ ತಮಗೆ ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡಲು ಬಿಡುತ್ತಿಲ್ಲ ಎಂದು ದೂರುತ್ತಿದ್ದ ಕೆಳವರ್ಗಗಳಿಗೆ ಇವತ್ತು ಅಂಥ ಅವಕಾಶ ಒದಗಿ ಬಂದಿರುವುದು ಕ್ರಾಂತಿಯಲ್ಲವೆ?

ಇದು, ಜಾತಿಗೊಂದರಂತೆ ಮಠಗಳು ಹುಟ್ಟುತ್ತಿರುವುದಕ್ಕೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಪ್ರತಿಕ್ರಿಯೆ.

ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡುವುದರಿಂದ ಎಲ್ಲ ಬ್ರಾಹ್ಮಣೀಕರಣವಾಗುತ್ತಿದೆ ಎಂದು ಇವತ್ತು ಅದೇ ಜನಾಂಗಗಳ ಕೆಲವರು ಹೇಳುತ್ತಿರುವುದಕ್ಕೆ ಅರ್ಥವಿಲ್ಲ. ಪ್ರತಿ ಜಾತಿಗೂ ತನ್ನದೇ ಆದ ಸಂಸ್ಕೃತಿ, ಐಡೆಂಟಿಟಿಯ ಪ್ರಶ್ನೆ ಬರುವುದಿಲ್ಲ. ಹಾಗಾದರೆ ಎಲ್ಲರ ನಿಜವಾದ ಸಂಸ್ಕೃತಿ ಯಾವುದೆಂಬ ಪ್ರಶ್ನೆ ಬರುತ್ತದೆ. ಅದು ಉಳಿಯಬೇಕೆಂದರೆ ನೀವು ಜಾತೀಯತೆಯನ್ನು ಬೆಂಬಲಿಸಬೇಕಾಗುತ್ತದೆ. ಶಂಕರಾಚಾರ್ಯರು ಹೇಳಿದ್ದು ಇದನ್ನೆ. ಆಧುನಿಕತೆ ಕೂಡಾ ಇದೇ ಕೆಲಸವನ್ನು ಮಾಡುತ್ತಿದೆ. ಗಂಡು, ಹೆಣ್ಣು, ಜಾತಿ, ಧರ್ಮದ ಪ್ರಶ್ನೆಗಳು ಕಡಿಮೆಯಾಗುತ್ತಿವೆ. ಸಾಂಸ್ಕೃತಿಕ ವ್ಯತ್ಯಾಸ ಇಲ್ಲವಾಗುತ್ತಿದೆ. ಒಟ್ಟಿನಲ್ಲಿ ಮಠಗಳು ಸಾಮಾನ್ಯ ಸಂಸ್ಕೃತಿಯ ಹುಟ್ಟಿಗೆ ಕಾರಣವಾಗುತ್ತಿವೆ. ಆದ್ದರಿಂದ ಸಾಂಸ್ಕೃತಿಕವಾಗಿ ನಾವು ಇಂದು ಒಡೆಯಲು ಸಾಧ್ಯವಿಲ್ಲ. ರಾಜಕೀಯ ಕಾರಣಗಳು ಮಾತ್ರ ನಮ್ಮನ್ನು ಒಡೆಯುತ್ತಿವೆ. ತಾವು ಜಾತಿ-ಧರ್ಮದ ವಿರೋಧಿಯಾಗಿದ್ದರೂ ಪರಂಪರೆಯಲ್ಲಿ ನಂಬಿಕೆ ಇಟ್ಟವರು ಎಂದು ಭೈರಪ್ಪ ಹೇಳಿದರು.

ಕನಿಷ್ಠ ಪದವಿಪೂರ್ವ ಮಟ್ಟದವರೆಗೆ ಪ್ರಾದೇಶಿಕ ಭಾಷೆಗಳು ಶಿಕ್ಷಣ ಮಾಧ್ಯಮವಾಗಬೇಕು ಎಂಬುದು ಭೈರಪ್ಪನವರ ಅಭಿಮತ. ಅನೇಕ ಘಟಕಗಳು ವ್ಯಕ್ತಿತ್ವವನ್ನು ರೂಪಿಸುವುದರಿಂದ ವ್ಯವಸ್ಥೆಯನ್ನು ರೂಪಿಸುವ ಸ್ಥಾನದಲ್ಲಿರುವ ಎಲ್ಲರಿಗೂ ಸಾಮಾಜಿಕ ಅರಿವುಗಳೂ, ಬದ್ಧತೆಗಳೂ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು. ನಮ್ಮ ಭಾಷೆಯನ್ನು ಆ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮಾತೃ ಭಾಷಾ ಶಿಕ್ಷಣ ಅತ್ಯಗತ್ಯ. ಆದರೆ ಶಿಕ್ಷಣ ನೀತಿಯನ್ನು ರೂಪಿಸುವ ರಾಜಕಾರಣಿಗಳಿಗೆ ಸಾಂಸ್ಕೃತಿಕ ಕಾರಣಗಳ ಮಹತ್ವ ತಿಳಿಯುವುದೇ ಇಲ್ಲ. ಆದ್ದರಿಂದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಳ್ಳಿಗಳಲ್ಲೂ ಕಾನ್ವೆಂಟ್ ತೆಗೆಯುವುದನ್ನು ಅಭಿವೃದ್ಧಿ ಎಂದುಕೊಂಡಿದ್ದಾರೆ.

ನಮ್ಮ ಪೋಷಕರೂ ಇಂಗ್ಲಿಷ್ನಲ್ಲಿ ಓದಿದ ತಕ್ಷಣ ಎಲ್ಲವೂ ಸಿಕ್ಕಿಬಿಡುತ್ತದೆಂಬ ಭ್ರಮೆಯಿಂದ ಹೊರಬರಬೇಕು. ಉದಾಹರಣೆಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದಿಂದ ಇಂಗ್ಲಿಷ್ನಲ್ಲಿ ಮಾಡಬಹುದಾದ ಎಲ್ಲವನ್ನೂ ಕನ್ನಡದಲ್ಲೇ ಮಾಡಲು ಸಾಧ್ಯವಿರುವಾಗ ಇಂಗ್ಲಿಷ್ನ ಹಂಗೇಕೆ?

ಚಳವಳಿಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅಲ್ಲಿನ ಅನಾರೋಗ್ಯಕರ ಬೆಳವಣಿಗೆಗಳೆಂದರೆ ಅನಗತ್ಯ ಬದ್ಧತೆ. ಚಳವಳಿಗಳಿಗೆ ಸಿದ್ಧಾಂತವಿರಬೇಕು. ಆದರೆ ಅದು ಚಳವಳಿಯ ಮಿತಿಯೂ ಆಗಬಾರದು. ಪ್ರಗತಿಶೀಲರೂ, ಬಂಡಾಯದವರು ಬೈಗುಳದ ಮಾರ್ಗ ಹಿಡಿದಿದ್ದು ಸಮಾಜವನ್ನು ಒಡೆಯುವ ಕ್ರಿಯೆ. ಅನೇಕ ಚಳವಳಿಗಳ ವಿಫಲತೆಗೆ ದ್ವೇಷ, ಅನಗತ್ಯ ಆಕ್ರೋಶಗಳು ಕಾರಣ. ಹಾಗೆಯೇ ಒಂದು ಪತ್ರಿಕೆ ಕೂಡಾ. ಪತ್ರಿಕೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಪತ್ರಕರ್ತನಿಗೆ ಸ್ವಾತಂತ್ರ್ಯ ಇರಬೇಕು ಇದರಿಂದ ಹೊಸದು ಹುಟ್ಟಲು ಸಾಧ್ಯವಾಗುತ್ತದೆ. ಆದರೆ ಒಂದು ಸಿದ್ಧಾಂತಕ್ಕೆ ಬದ್ಧವಾಗತೊಡಗಿದಂತೆ ಕೆಲವೇ ಕೆಲವು ಜನರ ಕೈಗೆ ಸಿಕ್ಕು ಸಾಮಾನ್ಯ ಜನರಿಂದ ದೂರವಾಗತೊಡಗುತ್ತವೆ. ಹಾಗೆಯೇ ಸಾಯುತ್ತವೆ. ಪತ್ರಕರ್ತನ ಸುತ್ತಾ ಹೆಣೆದಿರುವ ‘ತಂತು’ ಕಾದಂಬರಿಯನ್ನು ಬರೆಯುವಾಗ ನಾವು ಭೇಟಿ ಮಾಡಿದ ಅನೇಕ ಪತ್ರಕರ್ತರು, ಪತ್ರಿಕಾಲಯಗಳ ಬಗ್ಗೆ ಭೈರಪ್ಪನವರು ಮಾತನಾಡಿದರು.

ಭಾರತದ ಕಮ್ಯೂನಿಸ್ಟ್ ಕಲ್ಪನೆ ಮೈಗಳ್ಳತನದಿಂದ ಬಂದದ್ದು. ಬಾಂಗ್ಲಾದಿಂದ ವಲಸೆ ಬಂದ ಸೋಮಾರಿಗಳಿಗೆ ಆಪ್ತವೆನಿಸಿದ್ದು ಕಮ್ಯುನಿಸ್ಟ್ ಸಿದ್ಧಾಂತ. ಪಶ್ಚಿಮ ಬಂಗಾಳವನ್ನು ಜ್ಯೋತಿಬಸು ೨೫ ವರ್ಷ ಆಳುವುದು ಮುಖ್ಯವಾಗುವುದಿಲ್ಲ. ಬದಲಾಗಿ ತನ್ನ ಅವಯಲ್ಲಿ ಮಾಡಿದ ಕೆಲಸಗಳು, ತಂದ ಸುಧಾರಣೆಗಳು ರಾಷ್ಟ್ರ ಕಟ್ಟುವಲ್ಲಿ ಮುಖ್ಯವಾಗುತ್ತವೆ. ಬದಲಾವಣೆಗಳಿಗೆ ಒಡ್ಡಿಕೊಳ್ಳದೆ ಒಂದು ಸಿದ್ಧಾಂತದ ಅಡಿಯಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರೆ ಸಂಪನ್ಮೂಲಗಳು ಬೇರೆ ಕಡೆ ಹರಿಯತೊಡಗುತ್ತವೆ. ಈ ದೃಷ್ಟಿಯಲ್ಲಿ ಕೇರಳ ಕೂಡಾ ಭಿನ್ನವಾಗುವುದಿಲ್ಲ.

ಉದಾರೀಕರಣ ವ್ಯಾಪಾರಕ್ಕೆ ಸಂಬಂಸಿದ್ದು. ಅದು ನಮ್ಮ ಸಂಸ್ಕೃತಿಗೆ ನೇರವಾಗಿ ಸಂಬಂಸಿದ್ದಲ್ಲ. ಆದರೆ ಅದರಿಂದ ನಮ್ಮ ಸಂಸ್ಕೃತಿಯ ಮೇಲಾಗುವ ಪರಿಣಾಮಗಳ ಬಗ್ಗೆ ತಕ್ಷಣ ಹೇಳಲು ಸಾಧ್ಯವಿಲ್ಲವಾದರೂ ಅಂಥ ವೈರುಧ್ಯಗಳ ನಡುವೆ ಬದುಕಬೇಕಾದ ಅನಿವಾರ್ಯ ಇದ್ದೇ ಇದೆ. ಸಂಸ್ಕೃತಿಗೆ ಸಂಬಂಸಿದ ಎಲ್ಲ ಬದಲಾವಣೆಗಳೂ ನಮ್ಮ ಪರಂಪರೆಗನುಗುಣವಾಗಿಯೇ ಆಗಬೇಕು. ಪಾಶ್ಚಾತ್ಯರೂ ಸೇರಿದಂತೆ ಎಲ್ಲರ ಕಡೆಯಿಂದ ಬರುವ ಬದಲಾವಣೆಗಳು, ತಕ್ಷಣಕ್ಕೆ ಹಿತವೆನಿಸಿದರೂ ನಾವು ಅದರಿಂದಲೇ ರೂಪಿತವಾಗುತ್ತೇವೆ ಎನ್ನುವುದು ಸುಳ್ಳು.

ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಟ್ಟು ಯೋಚಿಸುವುದೆಂದರೆ ನೀರಿನಿಂದ ಹೊರ ತೆಗೆದ ಮೀನಿನಂತೆ. ಉತ್ತಮವಾದದ್ದನ್ನು ಕೇಳುವುದು, ಪಡೆಯುವುದೇ ಬೇರೆ. ನಮ್ಮ ಸಂಸ್ಕೃತಿಯೇ ಬೇರೆ. ಉದಾರೀಕರಣಕ್ಕೆ ತೆರೆದುಕೊಂಡ ಜಪಾನ್ನಂಥ ದೇಶಕ್ಕೆ ತನ್ನದೇ ಆದ ದೇಶೀಯ ನೀತಿಯೊಂದನ್ನು ಅನುಸರಿಸಲು ಸಾಧ್ಯವಾದುದರಿಂದ ಅದು ಜಗತ್ತಿನ ಪ್ರಬಲ ರಾಷ್ಟ್ರಗಳ ಪೈಕಿ ಒಂದಾಯಿತು.

ಸ್ವದೇಶಿ ಎನ್ನುವ ವಿಚಾರ ತುಂಬಾ ದೊಡ್ಡದು. ಪ್ರತ್ಯೇಕ ಕ್ಷೇತ್ರಗಳನ್ನು ಕುರಿತು ಹೇಳಬೇಕಾಗುತ್ತದೆ. ೧೯೪೭ರ ನಂತರ ನೆಹರೂಗೆ ರಷ್ಯಾದ ಸಮಾಜವಾದ ಪ್ರಭಾವ ಬೀರಿತು. ಆಗ ಹಣ ಸಂಪಾದನೆ ಮಾಡುವುದೇ ಒಂದು ಪಾಪ ಎಂಬ ಸಿದ್ಧಾಂತವನ್ನು ಪ್ರತಿಪಾದನೆ ಮಾಡಲಾಯಿತು. ಈ ಥರದ ಫಿಲಾಸಫಿ ಆಗಿನ ಯುವ ತಲೆಮಾರುಗಳಲ್ಲಿ ಸ್ವ ಉದ್ಯೋಗದ ಪರಿಕಲ್ಪನೆಯನ್ನೇ ಹಾಳುಮಾಡಿತು. ಇದರಿಂದ ಎಲ್ಲ ವಿದ್ಯಾವಂತರೂ ಕೆಲಸ ಇಲ್ಲ ಅನ್ನೋಕೆ ಪ್ರಾರಂಭಿಸಿದರು. ಸ್ವಂತ ಉದ್ಯೋಗ ಮಾಡುತ್ತೇನೆ ಎನ್ನುವ ಒಂದು ಹುಡುಗನ ಪಾತ್ರವನ್ನು ಕತೆಯಲ್ಲಿ ಸೃಷ್ಟಿ ಮಾಡಿದರೆ, ವಿದೇಶಿ ವ್ಯಾಮೋಹಿ ಅಂತ ವಿಮರ್ಶಕರೇ ಗೇಲಿ ಮಾಡುತ್ತಿದ್ದರು. ಆದರೆ ಅದೇ ಥರದ ಕತೆ ಇವತ್ತು ಪ್ರಗತಿಪರವಾಗುತ್ತದೆ. ಪ್ರಸ್ತುತವಾಗುತ್ತದೆ.

ಮುಕ್ತ ಮಾರುಕಟ್ಟೆ, ಜಾಗತೀಕರಣಗಳು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿರುವಂತೆ ಅನೇಕ ರೀತಿಯ ಎರಡೂ ಥರದ ಬದಲಾವಣೆಗಳಿಗೆ ಕಾರಣವಾಗಿದೆ. ಸ್ವದೇಶಿ ವಾದವನ್ನು ಕುರಿತು ರಾಜಕಾರಣಿಗಳು, ಬುದ್ಧಿಜೀವಿಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಮಾತನಾಡುತ್ತಿದ್ದಾರೆ ಅನ್ನಿಸುವುದನ್ನೂ ಕೂಡಾ ಮೇಲೆ ವಿವರಿಸಿರುವ ಹಿನ್ನಲೆಯಲ್ಲಿ ನೋಡಬೇಕಾಗಿದೆ. ಆದ್ದರಿಂದಲೇ ತಕ್ಷಣಕ್ಕೆ ತೀರ್ಮಾನಕ್ಕೆ ಬರಲು ಅನೇಕ ಮಿತಿಗಳಿವೆ. ಹಾಗೆಯೇ ಗಾಂಯವರ ಸ್ವದೇಶಿವಾದ, ಅಹಿಂಸಾವಾದ ಕೂಡಾ. ಬ್ರಿಟಿಷರಲ್ಲಿ ಸಾಕಷ್ಟು ಸಮಾಜವಾದದ ಅರಿವು ಇದ್ದದ್ದರಿಂದ ಗಾಂಯವರ ಅಹಿಂಸಾವಾದ ಕೆಲಸ ಮಾಡಿತು. ಹಿಟ್ಲರನೇನಾದರೂ ನಮ್ಮನ್ನಾಳುತ್ತಿದ್ದರೆ ಗಾಂಜಿಯವರನ್ನು ಕೊಲ್ಲಿಸುತ್ತಿದ್ದ. ಆದ್ದರಿಂದ ಎಲ್ಲ ವಾದಗಳೂ ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಒಟ್ಟಿನಲ್ಲಿ ಎಲ್ಲ ವೈರುಧ್ಯಗಳ ನಡುವೆ ನಮ್ಮನ್ನು ರೂಪಿಸುವ ದಿಟ್ಟ ನಾಯಕರ ಕೊರತೆ ಇದೆ. ಎಲ್ಲರ ಕ್ಷೇಮಕ್ಕಾಗಿ ಎಲ್ಲವನ್ನೂ ಸ್ವೀಕರಿಸಬೇಕು. ಇದು ನಿಜವಾದ ಸ್ವದೇಶಿವಾದ ಎಂದರು ಭೈರಪ್ಪ.

Tuesday 6 July 2010

ಅಮ್ಮನಿಗೆ ಜೋಗುಳ

ಮೊದಲ ಬಾರಿಗೆ ಅಮ್ಮನನ್ನೇ ಕುರಿತ ಹಾಡುಗಳ ಸಿ.ಡಿ ಬಂದಿದೆ. ನಮ್ಮನ್ನೆಲ್ಲಾ ಜೋಗುಳ ಹಾಡಿ ಬೆಳಸಿರುವ ಅಮ್ಮಂದಿರಿಗೇ ಜೋಗುಳಗಳ ಮಾಲೆಯನ್ನು ಸಂಗೀತ ನಿರ್ದೇಶಕ ಎಸ್.ಆರ್. ರಾಮಕೃಷ್ಣ ಮತ್ತು ಗೆಳೆಯರು ಕಟ್ಟಿಕೊಟ್ಟಿದ್ದಾರೆ.  ಜಾನಪದ ಶೈಲಿಯಲ್ಲಿ ತುಂಬಾ ದೇಶಿ ಅನ್ನುವಂತೆ ರಾಗ ಸಂಯೋಜಿಸಿರುವುದೇ ಈ ಹಾಡುಗಳ ಹೆಗ್ಗಳಿಕೆ.

ವಚನಗಳಂತೆ ತುಂಬಾ ಪ್ರಖರವಾಗಿ ತಟ್ಟುವ ಅಮ್ಮನ ಚಿತ್ರಗಳು ಇಲ್ಲಿ ಝಗಮಗಿಸುತ್ತವೆ. ಅಮ್ಮನನ್ನು ಹೀಗೂ ನೆನೆಯಬಹುದೆಂದು ತೋರಿಸಿಕೊಟ್ಟಿರುವ ಈ ಅಪರೂಪದ ರೂಪಾಂತರದ ಹಾಡುಗಳಿಗೆ ಕಿವಿಯಾದರಷ್ಟೇ ಅವುಗಳ ಸೊಗಸನ್ನು ಅರಿಯಬಹುದು.

ಮೊಗಳ್ಳಿ ಗಣೇಶ್, ನಟರಾಜ್ ಬೂದಾಳ್, ನಾಗತಿಹಳ್ಳಿ ರಮೇಶ್ ಮುಂತಾದವರ ಪದ್ಯಗಳನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ನಾಗತಿಹಳ್ಳಿ ಅವರ ಅಮ್ಮ, ನೀಲಗಿರಿ ಪದದ ಕೆಂಪಕ್ಕನ ಹಾಡೂ ಇಲ್ಲಿ ಸೇರಿರುವುದು ವಿಶೇಷ. ಜನ್ನಿಯವರ ಕಂಚಿನ ಕಂಠ, ಮಂಗಳಾ, ಸುಪ್ರಿಯಾ ಆಚಾರ್ಯ, ಮುಖೇಶ್, ನಾಗಚಂದ್ರಿಕಾ, ರತ್ನ ಸಕಲೇಶಪುರ ಮುಂತಾದವರ ಬೇರೆ, ಬೇರೆ ಸ್ವರ ತಂತುಗಳು ತೀವ್ರವಾಗಿ ತಟ್ಟುತ್ತವೆ.

ಎಲ್ಲರೆಲ್ಲರ ಅಮ್ಮನೂ ನಮ್ಮಮ್ಮನೇ ಆಗುವ ಈ ಅಮ್ಮಂದಿರ ಮುಚ್ಚಟೆಯಿಂದ ವಂಚಿತರಾಗಬೇಡಿ.  ವ್ಯಾಪಾರಿ ದೃಷ್ಟಿ ಬಿಟ್ಟು ಪ್ರಯೋಗಾತ್ಮಕವಾಗಿ ಇದನ್ನು ಮಾಡಲಾಗಿದೆ. ಹಾಗಾಗಿ ಅನೇಕ ಪ್ರತಿಭಾವಂತರ ಸಂಗಮದಿಂದ ತುಂಬಾ ವೈವಿಧ್ಯತೆ ದಕ್ಕಿದೆ. ಈ ಮೂಲಕ ಕನ್ನಡ ಕೇಳುಗ ಜಗತ್ತಿಗೆ ಹೊಸ ಸಾಧ್ಯತೆಯನ್ನು ರಾಮ್ (೯೮೪೫೭೨೧೨೦೨) ತೋರಿಸಿಕೊಟ್ಟಿದ್ದಾರೆ.

 ೨೧ ಜೂನ್ ೨೦೦೯ರ  ವಿಜಯಕರ್ನಾಟಕದ  ಸಾಪ್ತಾಹಿಕ  ಪುರವಣಿಯಲ್ಲಿ ಪ್ರಕಟವಾಗಿದೆ. 

Monday 5 July 2010

ಪ್ರತಿಮೆಗಳ ಮೋಹ ಮತ್ತು ವಿರೋಧಿಸುವವರ ಧಾವಂತ

ಆಗಿ ಹೋಗಿರುವ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ಹೇಗೆ? ಕಾಲದ ಯಾವುದೋ ಹೊಡೆತಕ್ಕೆ ಸಿಲುಕಿ ಯಾವುದೇ ವ್ಯಕ್ತಿಯ ವಿಚಾರಗಳು ಪ್ರಸ್ತುತವಾಗಿದ್ದರೂ ಜನಮಾನಸದಿಂದ ಮರೆಯಾಗಿದ್ದರೆ ಅದನ್ನು ಜನರ ಬಳಿಗೆ ಕೊಂಡೊಯ್ಯುವುದು ಹೇಗೆ? ಹಾಗೆಯೇ  ಅವರ ವಿಚಾರಗಳನ್ನು ಜನರ ಬಳಿಗೆ ತರುವಾಗ ಇರುವ ಆಯ್ಕೆಗಳು ಯಾವುವು? ಅಂಥವರನ್ನು ಜನರು ನೆನಪಿಸಿಕೊಳ್ಳುವಂತೆ ಮಾಡುವುದು ಕೇವಲ ಪ್ರತಿಮೆ ಪ್ರತಿಷ್ಠಾಪಿಸುವುದರಿಂದ ಮಾತ್ರ ಸಾಧ್ಯವೆ?ಎಂಬಂಥ ಪ್ರಶ್ನೆಗಳನ್ನು ಈಗ ಕೇಳಿಕೊಳ್ಳಲೇಬೇಕಿದೆ.  ಕೆಲವರಿಗೆ ತಮ್ಮ ಯಾವ್ಯಾವುದೋ ಖಯಾಲಿ/ಖಾಯಿಶ್ಗಳಿಂದ ಯಾರದೋ ಪ್ರತಿಮೆಯನ್ನು ಎಲ್ಲೋ ಒಂದು ಕಡೆ ಹಾಕಿ ಪ್ರತಿಷ್ಠೆ ಬೆಳಸಿಕೊಳ್ಳುವಾಸೆ. ಇನ್ನೂ ಕೆಲವರಿಗೆ ಪ್ರತಿಮೆಗಳ ಮರೆಯಲ್ಲೇ ಬೆಳೆ ಬೆಳೆದುಕೊಳ್ಳುವಾಸೆ. ಮತ್ತೂ ಕೆಲವರಿಗೆ ಆ ಪ್ರತಿಮೆಗಳೇ ತಮ್ಮೆಲ್ಲಾ ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಇರುವ ಗುರಾಣಿ. ಬೆರಳ ತುದಿಯಲ್ಲಿ ಜಗತ್ತನ್ನಾಡಿಸುವ ಕಾಲದಲ್ಲಿ ಬದುಕುತ್ತಿರುವ ನಾವೆಲ್ಲಾ  ಇನ್ನೂ ಪ್ರತಿಮೆಗಳ ಪರ್ಯಾಯಕ್ಕೆ ಅಂಟಿಕೊಂಡಿರುವುದೇಕೆ? ಪ್ರತಿಮೆಗಳ ವಿಚಾರದಲ್ಲಿ ಇದುವರೆಗೆ ಜಗತ್ತಿನಲ್ಲಿ ಆಗಿರುವ ಅವಾಂತರ, ಗಲಭೆ, ವಾದ-ವಿವಾದಗಳೆಷ್ಟು? ಭಾರತದಂತಹ ಬಹುಸಂಸ್ಕೃತಿಯ ನಾಡಲ್ಲಿ ಪ್ರತಿಮೆಗಳು ತಂದಿಡುವ ಸಂಕಷ್ಟ-ಸಂದಿಗ್ಧಗಳೆಷ್ಟು? ಈಗ ನಡೆಯುತ್ತಿರುವುದೇನು? ಎಲ್ಲರಿಗೂ ತಮ್ಮ ತಮ್ಮ ಕೆಲಸ ಸಾಧನೆಗಷ್ಟೇ ಪ್ರತಿಮೆಗಳು ಬೇಕಾಗಿವೆ. ಆದ್ದರಿಂದಲೇ ಇವತ್ತು ಪ್ರತಿಮೆ ಸ್ಥಾಪನೆ ವಿಷಯಗಳು ಹೆಚ್ಚು ವಿವಾದಕ್ಕೀಡಾಗುತ್ತಿವೆ. 

ತಿರುವಳ್ಳುವರ್ ಮತ್ತು ಸರ್ವಜ್ಞ ಎಂಬ ಮಹಾನ್ ಮಾನವತಾವಾದಿಗಳು ಈಗ ಬೇಡದ ಕಾರಣಗಳಿಗಾಗಿ ಅನೇಕ ಜನರಿಗೆ ಆಹಾರವಾಗುತ್ತಿದ್ದಾರೆ. ತಿರುವಳ್ಳುವರ್  ಪ್ರತಿಮೆ ಸ್ಥಾಪಿಸಲು ಬಿಜೆಪಿ ಸರಕಾರ ತೋರುತ್ತಿರುವ ಕಾಳಜಿ(?) ಪ್ರಶ್ನಾತೀತವೇನಲ್ಲ. ಇದೇ ಗದ್ದಲಕ್ಕೆ ಕಾರಣವಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಯಾರಾದರೂ ಊಹಿಸಬಹುದು. ತಮಿಳು ಗುಂಪುಗಳನ್ನು ವೋಟ್ ಬ್ಯಾಂಕ್ನಂತೆ ಉಪಯೋಗಿಸಿಕೊಳ್ಳುತ್ತಿದ್ದ ಮಂದಿ ತಮ್ಮ ವೋಟ್ ಬ್ಯಾಂಕ್ ಎಲ್ಲಿ ಕೈ ತಪ್ಪುತ್ತದೋ ಎಂಬ ಕಾರಣದಿಂದ ವಿವಾದಕ್ಕೆ ತೆರೆ ಮರೆಯಿಂದ ತುಪ್ಪ ಸುರಿಯುತ್ತಿರಬಹುದು. ಹಾಗೆಯೇ ಪ್ರತಿಮೆ ಬೇಡ ಎಂದು ವಾದಿಸುತ್ತಿರುವ ಕೆಲವರಿಗೆ ತಾವು ಮಿಂಚಲು ಸೂಕ್ತ ವಿಷಯಗಳೇ ಇಲ್ಲವಾಗಬಹುದೆಂಬ ಭಯವೂ ಇರಬಹುದು.

ಎರಡು ರಾಜ್ಯಗಳಿರಲಿ, ಎರಡು ದೇಶಗಳ ನಡುವೆ ಕೂಡ ಎಂಥ ಸಮಸ್ಯೆಗಳಿದ್ದರೂ ಸಾಂಸ್ಕೃತಿಕ ವಿನಿಮಯ ಎಲ್ಲ ದೃಷ್ಟಿಯಿಂದಲೂ ನಡೆಯುತ್ತಲೇ ಇರಬೇಕು. ಇದು ಬೆಳೆಯುತ್ತಿರುವ ನಾಗರಿಕ ಸಮಾಜವೊಂದರ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ. ಸಂಸ್ಕೃತಿಯ ಹರಿವಿಗೆ ಯಾವುದೇ ಕಾರಣ ನೀಡಿ ತಡೆಯೊಡ್ಡಿದರೂ ಅದು ಹೋಗುತ್ತಲೂ ಬರುತ್ತಲೂ ಕೊಯ್ಯುವ ಗರಗಸದಂತೆ ನಷ್ಟವುಂಟುಮಾಡುತ್ತದೆ. ಅದೊಂದು ಮುಂದಿನ ಪೀಳಿಗೆಗೆ ನಾವು ಮಾಡುವ ದ್ರೋಹವೇ ಸರಿ. ಇಲ್ಲದಿದ್ದರೆ ಭಾರತ ಮತ್ತು ಪಾಕ್ ನಡುವಿನ ಬಸ್ ಪ್ರಯಾಣ ಪುನಾರಂಭ ಮಾಡಿದ್ದನ್ನು ನಾವೆಲ್ಲ ಏಕೆ ಅಷ್ಟೊಂದು ಸಂಭ್ರಮದಿಂದ ಸ್ವಾಗತಿಸಿದ್ದೆವು? ಭಾರತದ ಸಿನಿಮಾ, ಪಾಕ್ನ ಸಂಗೀತ ಎರಡು ದೇಶಗಳ ನಡುವಿನ ಎಲ್ಲ ಕಾರಣಗಳನ್ನೂ ಮೀರಿ ಭಾರತೀಯರು ಮತ್ತು ಪಾಕಿಸ್ತಾನಿಗಳನ್ನು ಅನೇಕ ಸ್ತರಗಳಲ್ಲಿ ಒಟ್ಟಾಗಿಟ್ಟಿಲ್ಲವೇ? ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕೆಲ ವಿವಾದಗಳನ್ನು ದೇಶಗಳ ನಡುವಿನ ಸಮಸ್ಯೆಗಳಿಗೆ ಹೋಲಿಸಲಾದೀತೆ? ಎರಡು ದೇಶಗಳ ನಡುವೆ ಇರುವಂಥ ವಾತಾವರಣ ನಮ್ಮ ಎರಡೂ ರಾಜ್ಯಗಳ ನಡುವೆ ಇದೆಯೇ? ಹಾಗೆಂದು ಭ್ರಮಿಸಿದರೆ ಅದಕ್ಕಿಂತ ಹಾಸ್ಯಾಸ್ಪದವಾದದ್ದು ಇದೆಯೆ? ಎರಡೂ ರಾಜ್ಯಗಳ ನಡುವಿನ ಸೌಹಾರ್ದವನ್ನು ಕದಡುವಂತೆ ವಿಷಯವನ್ನು ದೊಡ್ಡದು ಮಾಡುತ್ತ, ಪ್ರತಿಮೆಗಳ ಅನಾವರಣವನ್ನು ವಿರೋಧಿಸುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ವಿಶಾಲ ದೃಷ್ಟಿಯಲ್ಲಿ ನೋಡಿದಾಗ ಪ್ರತಿಮೆಗಳ ಸಂಸ್ಕೃತಿಯೇ ಸರಿಯಲ್ಲವೆನಿಸಿದರೂ ಸೌಹಾರ್ದಕ್ಕೆ ವೇದಿಕೆಯಾಗಬಹುದೆಂಬ ಕಾರಣಕ್ಕೆ ಒಪ್ಪಬೇಕಾಗುತ್ತದೆ.

ಇನ್ನು ಒಂದೇ ದೇಶದ ಒಂದೇ ಭಾಷಾ ಮೂಲದಿಂದ ಬಂದಿರುವ ತಮಿಳುನಾಡು ಮತ್ತು ಕರ್ನಾಟಕ ಭಾರತದ ಇತರ ಯಾವುದೇ ಎರಡು ರಾಜ್ಯಗಳಿಗೆ ಹೋಲಿಸಿ, ಯಾವುದೇ ದೃಷ್ಟಿಯಿಂದ ನೋಡಿದರೂ  ಅವಿಭಾಜ್ಯವಾದ ಗಟ್ಟಿ ಸಂಬಂಧವನ್ನೇ ಹೊಂದಿವೆ. ಆದ್ದರಿಂದ ಎರಡೂ ರಾಜ್ಯಗಳು ಒಂದೇ ಮರದ ರೆಂಬೆಗಳು. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿಮೆ ಸ್ಥಾಪನೆಯಾದ ಮಾತ್ರಕ್ಕೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅರ್ಥವಲ್ಲ. ನಾವು ಪರಸ್ಪರ ಹತ್ತಿರ ಬರಲು ಒಂದು ವೇದಿಕೆಯಾಗಿ ಇದನ್ನು ಬಳಸಿಕೊಳ್ಳಬಹುದು. ಪ್ರತಿಮೆ ಸ್ಥಾಪಿಸುವುದಿಕ್ಕಿಂತ ಎಷ್ಟೋ ಪಟ್ಟು ಮಿಗಿಲಾಗಿ ಈ ಮಹಾನ್ ವ್ಯಕ್ತಿಗಳನ್ನು, ಅವರ ವಿಚಾರಧಾರೆಯನ್ನು ಜನರಿಗೆ ಮುಟ್ಟಿಸುವ ಮಾರ್ಗಗಳಿವೆ ಎಂಬುದೂ ನಿಜ. ಹಾಗಂತ ಪ್ರತಿಮೆ ಅನಾವರಣ ವಿರೋಧಿಸುತ್ತಿರುವವರ ವಾದಗಳಲ್ಲಿ ಕೂಡ ಯಾವುದೇ ದೂರದೃಷ್ಟಿ ಮತ್ತು ಬಲವಾದ ಕಾರಣಗಳಿಲ್ಲದಿರುವುದರಿಂದ ಸರಕಾರದ ನಿಲುವನ್ನು ನಾವು ಬೆಂಬಲಿಸಬೇಕಷ್ಟೆ. ಸರಕಾರ ಈ ಹೊತ್ತನ್ನೇ ಯಾಕೆ ಆಯ್ಕೆ ಮಾಡಿಕೊಂಡಿದೆ ಎಂಬುದಂತೂ ಯಾವಾಗಲೂ ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ. ಹಾಗೆಯೇ ಪ್ರತಿಮೆ ಅನಾವರಣ ಮಾಡುವುದರಿಂದ ಕನ್ನಡದ ನೆಲ-ಜಲಕ್ಕೆ ಆಗುವ ಹಾನಿಯ ಬಲವಾದ ಕಾರಣಗಳನ್ನು ಎತ್ತಿ ಹೇಳದೆ, ರಾಜಕೀಯಕ್ಕೆ ಸಂಬಂಧಿಸಿದ ನೀತಿಸಂಹಿತೆ ಕಾರಣವನ್ನು ಮುಂದು ಮಾಡಿ ಹೋರಾಡುತ್ತಿರುವವರಿಗೆ ನಾಡಿನ ಬಗ್ಗೆ ಯಾವ ಕಾಳಜಿ ಇದೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ಹಾಗಾದರೆ ಈ ಸಂಘಟನೆಗಳು ನೀತಿಸಂಹಿತೆ ಕಾಪಾಡಲು ಹೋರಾಡುತ್ತಿವೆಯೇ? ಇದು ಅವುಗಳಿಗಿರುವ ವಿಶಾಲ ದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಅಥವಾ ಅವು ಸದ್ಯದ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ ಎನ್ನಬೇಕಾಗುತ್ತದೆ.

ರಾಜಕಾರಣಿಗಳು ಏನೇ ಮಾಡಿದರೂ ಅದರಿಂದ ಪ್ರತಿಫಲ ಪಡೆಯಲು ಯಾವಾಗಲೂ  ಪೈಪೋಟಿ ನಡೆಸುತ್ತಿರುತ್ತಾರೆ. ಆದ್ದರಿಂದಲೇ ಪ್ರತಿಫಲವಿಲ್ಲದೆ ಅವರು ಏನನ್ನೂ ಮಾಡುವುದಿಲ್ಲ. ಅದನ್ನು ಮೀರಿದ ಕಾಳಜಿ ಯಾವ ರಾಜಕಾರಣಿಯಲ್ಲೂ ಇರುವುದಿಲ್ಲ. ನಾಳೆ ಇದೇ ಸರ್ವಜ್ಞನ ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿಯೋ, ಗುಜರಾತಿನಲ್ಲಿಯೋ ಸ್ಥಾಪನೆ ಮಾಡಲು ಮತ್ತು ಆ ರಾಜ್ಯಗಳ ಮಹಾನ್ ಚೇತನಗಳ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಆಯಾ ರಾಜ್ಯಗಳ ಇಬ್ಬರು ಮುಖ್ಯಮಂತ್ರಿಗಳ ನಡುವೆ ಒಂದು ಫೋನ್ ಕಾಲ್ನಲ್ಲಿ ಕೆಲಸ ಮುಗಿದುಹೋಗಬಹುದು. ಅದರಿಂದ ಅವರಿಗೆ ಆಗುವ ಪ್ರಯೋಜನವೇನು? ಮೊನ್ನೆ ವಿದ್ವಾಂಸರೊಬ್ಬರು, ದೇಶದ ಯಾವುದೋ ವಿಶ್ವವಿದ್ಯಾಲಯದಲ್ಲಿರುವ ಅಧ್ಯಯನ ಪೀಠದಲ್ಲಿ ಕನ್ನಡದ ಉಪನ್ಯಾಸಕರು, ನಿರ್ದೇಶಕರಿಲ್ಲ ಎಂದು ನೋವಿನಿಂದ ಬರೆದಿದ್ದರು. ಇದನ್ನು ತುಂಬಲು ಸರಕಾರವೆಂಬ ದೈತ್ಯ ಸಂಸ್ಥೆಗೆ ಎಷ್ಟು ವೇಳೆ ಬೇಕು? ಗಡಿನಾಡಲ್ಲಿ ಇವತ್ತಿಗೂ ಕನ್ನಡ ಶಾಲೆಗಳಿಗೆ ಸರಿಯಾದ ಸಮಯದಲ್ಲಿ ಪುಸ್ತಕಗಳು ಸರಬರಾಜಾಗುವುದಿಲ್ಲ. ಆದರೆ ಅದ್ಯಾವುದೂ ನಾವಂದುಕೊಂಡಷ್ಟು ಸುಲಭದಲ್ಲಿ ಆಗುವುದಿಲ್ಲ. ಏಕೆಂದರೆ ಅದರಿಂದ ರಾಜಕಾರಣಿಗಳಿಗೆ ದೊಡ್ಡಮಟ್ಟದ ಲಾಭ ಇಲ್ಲ.  ಕೇವಲ ಪ್ರತಿಮೆಯೊಂದರಿಂದಲೇ ಎಲ್ಲವನ್ನೂ ಸಾಧಿಸಿಬಿಡುವುದು ಸಾಧ್ಯವಿದ್ದಿದ್ದರೆ ಸಾಲುಮರಗಳ ಬದಲು ರಸ್ತೆಯುದ್ದಕ್ಕೂ ಪ್ರತಿಮೆಗಳನ್ನು ನಿಲ್ಲಿಸಲು ಮುಂದಾಗುವ ಜನರಿದ್ದಾರೆ. ಹಾಗಾಗಿಯೇ ಮುಖ್ಯಮಂತ್ರಿಯೊಬ್ಬರು ಯಾವುದೇ ನಾಚಿಕೆ ಇಲ್ಲದೆ ತಮ್ಮದೇ ಪ್ರತಿಮೆಗಳನ್ನು ಸ್ಥಾಪಿಸಿಕೊಂಡರೆ ಅದನ್ನು ಅವರಿಗೆ ಮುಖಕ್ಕೆ ಹೊಡೆದಂತೆ ಯಾವುದೇ ರಾಜಕಾರಣಿಯೂ ಹೇಳಲಾರ. ಏಕೆಂದರೆ ಆ ಮುಖ್ಯಮಂತ್ರಿಯ ಜಾತಿ ವೋಟುಗಳು ಕೈಬಿಡಬಹುದು ಎಂಬ ಭಯ ಮತ್ತು ತಾವೂ ಇದೇ ರೀತಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಿಕೊಳ್ಳಲಿಕ್ಕೆ ಹೇಸದವರು. ಇನ್ನೊಂದು ತಮಾಷೆ ಎಂದರೆ ಕೇವಲ ಏಳೆಂಟು ವರ್ಷಗಳ ಹಿಂದೆ ಕುಟುಂಬ ರಾಜಕಾರಣವನ್ನು ವಿರೋಧಿಸಿದ ಪಕ್ಷಗಳೆಲ್ಲವೂ ಇವತ್ತು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಹಾಗೆಯೇ ಇದೂ ಕೂಡ.

ಇದೆಲ್ಲ ಏನೇ ಇರಲಿ, ನಾಳೆ ತಿರುವಳ್ಳುವರ್ ಮತ್ತು ಸರ್ವಜ್ಞನ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡ ಇರದವನೊಬ್ಬ ಒಂದು ಕಲ್ಲನ್ನೋ, ಸಗಣಿಯನ್ನೋ, ಚಪ್ಪಲಿಯನ್ನೋ ಕೊನೆಗೆ ಒಂದು ಹಿಡಿ ಮಣ್ಣನ್ನೋ ಪ್ರತಿಮೆಯೆಡೆಗೆ ತೂರಿದರೂ  ಸಾಕು, ಕೊನೆಗೆ ಅದೇ ದೊಡ್ಡ ಗಲಾಟೆಯಾಗಿ ಸಂಕಷ್ಟಗಳನ್ನು ತಂದೊಡ್ಡಬಹುದು. ಅತ್ಯಂತ ಸೂಕ್ಷ್ಮ ಅನ್ನಬಹುದಾದ, ಬಗೆಹರಿಸಿಕೊಳ್ಳಲಾಗದ ಯಾವುದೇ ಸಮಸ್ಯೆಗಳು ನಮ್ಮ ರಾಜ್ಯಗಳ ನಡುವೆ ಇಲ್ಲದಿರಬಹುದು. ಆದರೆ ದುರುದ್ದೇಶದಿಂದ ಅಮಾಯಕರನ್ನು ಮತ್ತು ಕಿಡಿಗೇಡಿಗಳನ್ನು ಎತ್ತಿ ಕಟ್ಟುವವರಿಗೆ ಬೇರೆ ಯಾವುದೂ ಮುಖ್ಯವಾಗುವುದಿಲ್ಲ. ಉರಿಯುವ ಮನೆಯಲ್ಲಿ ಗಳ ಹಿರಿಯುವುದಷ್ಟೇ ಅವರ ಕೆಲಸ. ಆದ್ದರಿಂದ ಯಾವ ಉದ್ದೇಶದಿಂದ ಪ್ರತಿಮೆಗಳನ್ನು ಅನಾವರಣ ಮಾಡಲಾಗುತ್ತಿದೆಯೋ ಅದರ ಉದ್ದೇಶವೇ ಬುಡಮೇಲಾಗುವ ಅಪಾಯವೂ ಇದೆ.  ಎಲ್ಲ ಮಹಾನ್ ವ್ಯಕ್ತಿಗಳನ್ನೂ ಜಾತಿ, ಧರ್ಮ ಅಥವಾ ಪ್ರಾಂತ್ಯಕ್ಕೆ ಸೀಮಿತಗೊಳಿಸಿಕೊಂಡು ನೋಡುವಂತಾದರೆ ಸಣ್ಣ-ಪುಟ್ಟ ಗಲಾಟೆಗಳಾದರೂ ಅದನ್ನು ಕೆಲವೇ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲರು. ಹಾಗಂತ ನಾಳೆ ಏನೋ ಆಗಿಬಿಡಬಹುದೆಂದು ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳದೇ ಇರುವುದೂ ತಪ್ಪು. ಇದರಿಂದ ತೋಳ ಬರಬಹುದೆಂಬ ಭಯಕ್ಕೆ ಕುರಿಸಾಕಣೆಯೇ ಬೇಡ ಅಂದಂತೆ ಆಗುತ್ತದೆ.  ಈ ಪ್ರತಿಮೆಗಳ ಬದಲು ಈ ಇಬ್ಬರು ಮಹಾನ್ ವ್ಯಕ್ತಿಗಳು ಸಾಹಿತ್ಯದ ಮೂಲಕ ಹೇಳಿದ್ದು ಮತ್ತು ಸಾಧಿಸಿದ್ದನ್ನು ಪುಸ್ತಕ ರೂಪದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ತಂದು ಅಥವಾ ಈಗಾಗಲೇ ತಂದಿರುವುದನ್ನು ಮತ್ತೊಮ್ಮೆ ಮುದ್ರಿಸಿ ಹಂಚುವುದು ಇನ್ನಷ್ಟು ಅರ್ಥಪೂರ್ಣ ಕೆಲಸಗಳಿಗೆ ನಾಂದಿ ಹಾಡುತ್ತಿತ್ತೇನೋ ಅನಿಸುತ್ತದೆ. 


೮ ಆಗಸ್ಟ್  ೨೦೦೯ರ  ವಿಜಯಕರ್ನಾಟಕದ ಒಪೆಡ್ ಪುಟದಲ್ಲಿ ಪ್ರಕಟವಾಗಿದೆ.

ವಿಮರ್ಶೆ ಗುಂಪುಗಾರಿಕೆಯಾಗಬಾರದು: ಚದುರಂಗ (೧೫ ವರ್ಷದ ಹಿಂದಿನ ಸಂದರ್ಶನ)


ಚದುರಂಗ(ಸುಬ್ರಮಣ್ಯ ರಾಜೆ ಅರಸ್)ರು ಒಬ್ಬ ವಿಶಿಷ್ಟ  ಗದ್ಯ ಶೈಲಿಯ ಲೇಖಕ. ಇವರು ತಮ್ಮದೇ ಶೈಲಿಯಿಂದ ಓದುಗರನ್ನು ಬೆರಗುಗೊಳಿಸುತ್ತಾರೆ. ಇವರು ಸುಮಾರು ಅರ್ಧ ಶತಮಾನದಿಂದ ಬರೆಯುತ್ತಿದ್ದು ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಪ್ರಕಟಿಸಿದ್ದರೂ ಓದುಗರ ಹೃದಯದಲ್ಲಿ ಸ್ಥಾನ ಪಡೆದಿರುವುದು ಸರ್ವವಿತ.  ಇವರು ತಮ್ಮ ಎಂಬತ್ತರ ಹರೆಯದಲ್ಲೂ ಉತ್ಸಾಹದಿಂದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಕಾಲೇಜುಗಳ ಪ್ರತಿಭಾಶ್ರೀ -೯೫ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಂದರ್ಶನ.

*ನೀವು ಶಿಕ್ಷಣ ಪಡೆಯುವಾಗ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಮತ್ತು ನಿಮಗೆ ಸಾಹಿತ್ಯದ ಒಲವು ಹೇಗುಂಟಾಯಿತು? 
- ಮೈಸೂರಿನಲ್ಲಿ ರಾಜರ  ಆಡಳಿತವಿದ್ದಾಗ ನಾನಿನ್ನೂ  ಬಾಲಕ. ನಾನು ಮೈಸೂರಿನ ಹತ್ತಿರದ ಕಲ್ಲಹಳ್ಳಿಯವನು. ತಂದೆ ಕೃಷಿಕ, ಅಣ್ಣ ಲಾಯರ್,  ದೇವರಾಜ ಅರಸರ ಹತ್ತಿರದ ಸಂಬಂ. ಶಿಕ್ಷಣ ಕೂಲಿ ಮಠದಿಂದ ಆರಂಭ. ನಂತರ ಮೈಸೂರಿನ ರಾಯಲ್ ಸ್ಕೂಲಿಗೆ ಸೇರಿದೆ. ಆನಂತರ ಆ ಶಾಲೆಯ ವ್ಯವಸ್ಥೆ ಇಷ್ಟಪಡದೆ ಪಬ್ಲಿಕ್ ಸ್ಕೂಲಿಗೆ ಸೇರಿದೆ. ಮುಂದೆ ಪೂನಾದಲ್ಲಿ ‘ಲಾ’ ಅಭ್ಯಾಸ. ಅನಂತರ ಬರಹ ಪ್ರಾರಂಭ. ಪ್ರೇಮ ವಿವಾಹದ ಕಾರಣದಿಂದ ಮನೆಯಲ್ಲಿ ಆಗ ಆದ ಘರ್ಷಣೆಯಿಂದ ಸಾಹಿತ್ಯದ ಕಡೆಗೆ ಒಲವು, ಆವತ್ತು ಸಾಹಿತಿಗಳನ್ನು ಗೌರವಿಸುತ್ತಿದ್ದರು. ಸಾಮರಸ್ಯವಿತ್ತು. ಇಂದು ವಿಮರ್ಶೆ ಹೆಚ್ಚಾಗಿದೆ. ಇದು ಒಳ್ಳೆಯದು, ಒಳ್ಳೆ ವಿಮರ್ಶೆ ಬರಬೇಕು. ಆದರೆ ಗುಂಪುಗಾರಿಕೆಯಾಗಬಾರದು. ನಾನು ಮಾಸ್ತಿಯವರ ಕಥೆಗಳಿಂದ ರೂಪುಗೊಂಡವನು. ಅನಂತರ ಲೋಹಿಯಾ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಬರೆಯಲು ಆರಂಭಿಸಿದೆ.

* ವೈಶಾಖದ ಕಾದಂಬರಿಯ ಪ್ರೇರಣೆ ಏನು? -ನನ್ನ ಹಳ್ಳಿಯ ಬದುಕಿನ ಗಾಢವಾದ ಸಂಬಂಧ. * ಈ ಕೃತಿಯ ಬಗೆಗಿನ ಪ್ರತಿಕ್ರಿಯೆ ಹೇಗೆ?
-ನಿರೀಕ್ಷೆ ಮೀರಿದ್ದು, ಕುವೆಂಪು ರುದ್ರಾವಸ್ತುವೆಂದರು. ರಾಜೀವ್ ತಾರಾನಾಥ್ ತುಂಬಿದ ಬುಟ್ಟಿ ಎಂದರು. ಈ ಕೃತಿಗೆ - ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದಲ್ಲದೆ, ಈ ಕೃತಿ ತಮಿಳಿಗೂ ತರ್ಜುಮೆಯಾಗಿ ಆ ಕೃತಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಬಂಡಾಯ ಸಾಹಿತ್ಯದ ಪ್ರಕಾರ ನಿರಂತರ ಸಾಹಿತ್ಯ ಪ್ರಾಕಾರವೆನ್ನುವುದಕ್ಕೆ ನೀವು ಕೊಡುವ ಕಾರಣಗಳೇನು? 
-ಬಂಡಾಯ ನಿರಂತರ. ನವೋದಯದ ಪ್ರಕೃತಿಗೆ ಚಿತ್ರಣ ಜಾಸ್ತಿಯಾದಾಗ ವಿಚಾರಕ್ಕೆ ಮತ್ತು ಬದುಕಿಗೆ ಒತ್ತು ಕೊಟ್ಟು ಪ್ರಗತಿಶೀಲ ಪ್ರಾರಂಭವಾಯಿತು. ಪ್ರಗತಿಶೀಲದಲ್ಲಿ ಭಾಷೆಗೆ ಪ್ರಾಮುಖ್ಯವಿಲ್ಲದೆ ಸೊರಗಿತು. ಆಗ ನವ್ಯ ಸಾಹಿತ್ಯ ಹುಟ್ಟಿತು. -ನವ್ಯ ಸಾಹಿತ್ಯದಲ್ಲಿ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗಿದ್ದು, ದೋಷವೆನಿಸಿತು. ಆಗ ಮತ್ತೆ ಬಂಡಾಯ ಮತ್ತು ದಲಿತ ಸಾಹಿತ್ಯ...,

* ತಮ್ಮ ‘ಸರ್ವಮಂಗಳ’ ಕಾದಂಬರಿಯನ್ನು ತಾವೇ ನಿರ್ದೇಶಿಸಿ ಚಲನಚಿತ್ರವಾಗಿಸಿದ ಅನುಭವವೇನು?
-ಬೇರೆ ನಿರ್ದೇಶಕರು ಕೆಡಿಸುವುದು ಬೇಡ ಎಂದು ನಾನೇ ಕೆಡಿಸಿದೆ (ನಗು) * ಇವತ್ತಿನ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಸಾಹಿತ್ಯ ಸಮರ್ಥವಾಗಿ ಸ್ಪಂಸಿದೆಯೇ? -ಭಾರತ ವಿಶಾಲವಾದ ದೇಶ. ಭಾಷೆಗಳು ಹಲವು ಅಲ್ಲಲ್ಲಿ ಸ್ಪಂದನವಾಗಿದೆ. ನನಗೆ ತಿಳಿದಿರುವ ಹಾಗೆ ನಮ್ಮಲ್ಲಿಯೂ ಸಾಕಷ್ಟು ಸ್ಪಂದನ ಆಗಿದೆ.

*ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ? 
 -ಶೇಷನ್ ಗುರುತಿನ ಚೀಟಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ರಾಜಕೀಯಕ್ಕೆ ಉತ್ತಮ ತಿರುವು ಕೊಡಬಹುದು.  *ತಾವು ಗದ್ಯವನ್ನು ಆರಿಸಿಕೊಂಡಿದ್ದಕ್ಕೆ ಕಾರಣ? -ನಾನು ಕವಿಯಲ್ಲ ಅದಕ್ಕೆ. *ಇತ್ತೀಚೆಗೆ ಒಂದು ಕವನ ಸಂಕಲನ ಬಂದಿದೆಯಲ್ಲ? -ಅದು ಒಂದು ಬದಲಾವಣೆ ಅಷ್ಟೆ.  *ಜೀವನದ ಹಾಗೂ ಲೇಖಕರ ಬಗ್ಗೆ ನಿಮ್ಮ ಸಂದೇಶ ಏನು? -ಯಾವುದಕ್ಕೂ ಬದ್ಧರಾಗಬಾರದು, ಅನಿಸಿದ್ದನ್ನು ಬರೆಯಬೇಕು, ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸಬೇಕು.  * ತಾವು ಈಗ ಏನನ್ನಾದರೂ ಬರೆಯುತ್ತಿರುವಿರಾ? -ಹೌದು ಹೆಜ್ಜಾಲ ಎನ್ನುವ ಕಾದಂಬರಿ ಬರೆಯುತ್ತಿದ್ದೇನೆ *ಇದರ ತಿರುಳೇನು? -ನನ್ನ ಸಮಗ್ರ ಜೀವನಾನುಭವ.

*ಕೊನೆಯದಾಗಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾವ್ಯಕಮ್ಮಟಕ್ಕೆ ಸಂಬಂಸಿದಂತೆ ಯುವಕವಿಗಳ ಕವನ ಸಂಕಲನ ‘ಹದಿಹೆಜ್ಜೆ’ ಕೃತಿಯ ಮುನ್ನುಡಿಯಲ್ಲಿ ಜಿ.ಎಚ್. ನಾಯಕ್ರವರು ಪ್ರಸ್ತಾಪಿಸಿರುವ ‘ಕನ್ನಡ ಕಾವ್ಯ ಮತ್ತು ಹೊರಳು ದಾರಿಯಲ್ಲಿದೆ’ ಎಂಬ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
- ನಾನು ಆ ಕಮ್ಮಟಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದೇನೆಂದು ನಿಮಗೆ ಗೊತ್ತು. ಆದರೆ ಆ ಕೃತಿಯನ್ನು ನಾನು ಓದಿಲ್ಲ. ಕಾವ್ಯ ಯಾವಾಗಲೂ ಹೊರಳಲೇಬೇಕು. ಆದರೆ ಅದು ಹೇಗೆ ಹೊರಳುತ್ತದೆ ಎಂಬುದನ್ನು ವಿಮರ್ಶಕರಾದ ಜಿ.ಎಚ್. ನಾಯಕರೆ ಹೇಳಬೇಕು.


ಹೆಸರಾಂತ ಕಾದಂಬರಿಕಾರ ದಿವಂಗತ  ಚದುರಂಗ ( ಸುಬ್ರಮಣ್ಯ ರಾಜೆ ಅರಸ್)ರ  ಈ ಸಂದರ್ಶನ  ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ದಿನಾಂಕ ೧೩ ಮಾರ್ಚ್ ೧೯೯೫ ಸೋಮವಾರ ಪ್ರಕಟಗೊಂಡಿದೆ.

ದಲಿತ ಲೋಕದ ನಾನಾ ಮುಖ ತೋರುವ ನಾಟಕ: ಮಣೆಗಾರ


ದಲಿತ ಆತ್ಮಕತೆಗಳ ಸಾಲಿನಲ್ಲಿ ಮರಾಠಿ ಆತ್ಮಕತೆಗಳಿಗೆ ಪ್ರತ್ಯೇಕ ಪಾಲಿದೆ. ಕನ್ನಡದ ಮಟ್ಟಿಗೆ ಕವಿ ಡಾ. ಸಿದ್ದಲಿಂಗಯ್ಯನವರ ಊರು-ಕೇರಿ ಹೊರತುಪಡಿಸಿ ಹೆಚ್ಚು ಸುದ್ದಿಯಾದದ್ದು ದಲಿತರಲ್ಲಿ ಎಡಗೈ ಗುಂಪಿಗೆ ಸೇರಿದ ರಾಮಯ್ಯನವರ ಆತ್ಮಕತೆ ‘ಮಣೆಗಾರ’. ಇದು ಊರುಕೇರಿಗಿಂತ ಬೇರೆಯದೇ ಧಾಟಿ ಮತ್ತು ಸಂಕಟಗಳನ್ನು ಒಳಗೊಂಡಿದೆ.

ಹಸಿವು- ಅನ್ನ, ಜಾತಿ-ಅವಮಾನಗಳ ಸುರುಳಿಯೊಳಗೆ ಸಿಕ್ಕಿರುವ ಒಂದಿಡೀ ಜಾತಿಯ ಪ್ರತಿನಿ ರಾಮಯ್ಯ ಮತ್ತು ಅವರ ಕುಟುಂಬ  ಪಟ್ಟ ಪಾಡುಗಳನ್ನು ಒಂಚೂರು ಆಡಂಬರ, ಅಬ್ಬರ, ಮೆಲೋ ಡ್ರಾಮಾಗಳಿಲ್ಲದೆ ಕೃತಿಯಂತೆಯೇ ಸಹಜವಾಗಿ ರಂಗದ ಮೇಲೆ ತರಲಾಗಿದೆ. ಅದು ಎಷ್ಟೊಂದು ಸಹಜ ಅಂದರೆ ಕಣ್ಣು ತನ್ನಷ್ಟಕ್ಕೆ ತಾನೆ ಒದ್ದೆಯಾಗುತ್ತದೆ. ಕೆಲವು ಕಡೆ ಲಘುಹಾಸ್ಯದ ಧಾಟಿಯಲ್ಲಿ ಕ್ರೂರ ಸತ್ಯಗಳನ್ನು ಅಭಿನಯಿಸುವಾಗ ಶಿಳ್ಳೆಗಳ ಅಬ್ಬರವೂ ಸಹಜವಾಗಿಯೇ ಬಂದುಬಿಡುತ್ತದೆ.

ಕೊಡುವ ಸ್ಥಾನದಲ್ಲಿರುವವನಿಗೆ ಪಡೆಯುವವನ ಕರುಳ ಸಂಕಟಗಳು ಅರ್ಥವಾಗುವುದಿಲ್ಲ. ದಲಿತರೂ ಸೇರಿದಂತೆ ಎಲ್ಲರನ್ನೂ ಇನ್ನೂ ಕಾಪಾಡುತ್ತಿರುವ, ಮುಂದೆಯೂ ಕಾಪಾಡಬಲ್ಲದೆಂಬ ಆತ್ಮ ವಿಶ್ವಾಸ ಹುಟ್ಟಿಸುವ ‘ಸ್ವಾಭಿಮಾನ’ ಎಂಬ ಅದ್ಭುತವನ್ನು ಮತ್ತೆ ಮತ್ತೆ ಒತ್ತಿ ಹೇಳುವ ರಾಮಯ್ಯನವರ ನೌಕರಿಯ ಮೊದಲ ಮತ್ತು ನಂತರದ ಹೋರಾಟಗಳು ಮನ ಕಲಕುತ್ತವೆ. ಸಮುದ್ರದ ನೆಂಟಸ್ತನ, ಉಪ್ಪಿಗೆ ಬರ ಎಂಬಂತೆ, ಊರಲ್ಲಿ ಎಲ್ಲರೂ ಪರಸ್ಪರ ಅಕ್ಕ, ಮಾಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆದುಕೊಂಡರೂ, ಜಾತಿ ಶ್ರೇಣಿಗಳು ದಲಿತರನ್ನು ಹೇಗೆ ಶೋಷಿಸುತ್ತವೆ ಎಂಬ ಸಮಾಜದ ಕ್ರೂರ ಮುಖಗಳನ್ನು ಕಟ್ಟಿಕೊಟ್ಟಿರುವ ರೀತಿಯನ್ನು ರಂಗದ ಮೇಲೆ ನೋಡಿಯೇ ಕಣ್ತುಂಬಿಕೊಳ್ಳಬೇಕು. ಕೋಣ ಕಡಿಯುವ ಮಾರಿಹಬ್ಬ, ಸರಗು(ದೇವರಿಗಿಟ್ಟ ನೈವೇಧ್ಯವನ್ನು ಕೋಣನ ರಕ್ತ ಬೆರೆಸಿ) ಚೆಲ್ಲುವುದು ಸೇರಿ ಅನೇಕ ದೃಶ್ಯಗಳು ಹಟ್ಟಿಯನ್ನು, ಹಳ್ಳಿಯನ್ನು ಒಟ್ಟೊಟ್ಟಿಗೆ ರಂಗದ ಮೇಲೆ ನಿಲ್ಲಿಸುತ್ತವೆ.

ಬೇಡಿತಿನ್ನುವ ಮಾದಿಗರನ್ನು ಅನ್ನಕ್ಕಾಗಿ ಕಾಡಿ ತಿನ್ನುವ ದಕ್ಕಲರ ಚಿತ್ರಣವಂತೂ ಹಸಿವಿನ ಅಗಾಧ ಸಂಕಟದೊಂದಿಗೆ ಮನಕ್ಕೆ ನಾಟಿಬಿಡುತ್ತದೆ. ದಲಿತರ ಹುಡುಗನೊಬ್ಬ ಕುರುಬನ ಕೊಳಲಿಗೆ ಆಸೆ ಪಡುವುದು, ಅದನ್ನು ಕುರುಬನ ಅನುಪಸ್ಥಿತಿಯಲ್ಲಿ ಬಾಯಿಗಿಟ್ಟು ನಲಿವಾಗ ಕಾಣುವ ಕನಸನ್ನು ಎಷ್ಟು ಅಭೂತಪೂರ್ವವಾಗಿ ಸೃಷ್ಟಿಸಲಾಗಿದೆ ಎಂದರೆ ಕಾರಂತರ ‘ಗೋಗುಲ ನಿರ್ಗಮನ’ ನಾಟಕದ ಕ್ಲಾಸಿಕ್ ದೃಶ್ಯಗಳ ನೆನಪನ್ನು ತರುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಚಲನಚಿತ್ರದಷ್ಟೇ ವೇಗವಾಗಿ ತನ್ನ ಎಲ್ಲ ಪರಿಣಾಮಗಳೊಂದಿಗೆ ಕತೆ ಬೆಳೆಯುತ್ತದೆ, ಸಾಗುತ್ತದೆ. ಎಲ್ಲೂ ಅಶ್ಲೀಲವೆನ್ನಿಸದ ಬೈಯ್ಗುಳಗಳು, ಶಾಲೆಯಲ್ಲಿ ಗುರುಗಳು ಮಾಡುವ ಜಾತಿ ತಾರತಮ್ಯದಿಂದ ಆತ್ಮಹತ್ಯೆಗೆ ಶರಣಾಗುವ ರಾಮಯ್ಯ ಅವರ ಸಹೋದರನ ಸಾವಂತೂ ಮನ ಕಲಕುತ್ತದೆ.  ಇದೆಲ್ಲಕ್ಕೂ ಜಾತಿಯೊಂದನ್ನೇ ಕಾರಣ ಮಾಡದೆ ಒಟ್ಟು ಸಮಾಜ ಇದರ ಹೊಣೆ ಎಂಬಂತೆ ಚಿತ್ರಿಸಿರುವಲ್ಲಿ ನಿರ್ದೇಶಕ ಶಿವಶಂಕರನ ಜಾಣ್ಮೆ ಎದ್ದು ಕಾಣುತ್ತದೆ.


ದಲಿತರ ನಂಬುಗೆ, ಸೇವೆ, ಅವರನ್ನು ಇತರರು ನಡೆಸಿಕೊಳ್ಳುವ ರೀತಿಗಳನ್ನು ಸಣ್ಣ,ಸಣ್ಣ ದೃಶ್ಯಗಳಲ್ಲಿ ಎಲ್ಲಿಯೂ ಬೋರು ಹೊಡೆಯದಂತೆ ಪೋಣಿಸಲಾಗಿದೆ.  ಆ ದೃಷ್ಟಿಯಿಂದ ಇದು ಒಟ್ಟು ಸಮಾಜ ನೋಡಬೇಕಾದ ನಾಟಕ. ನಾಟಕದ ಓಘ, ಸಹಜತೆಗಳಿಂದ ಬಿಚ್ಚಿಕೊಳ್ಳುವ ದಲಿತ ಲೋಕದ ಬೇರೆ ಬೇರೆ ಮುಖಗಳನ್ನು ತುಂಬಾ ಚಲನಶೀಲ ರೀತಿಯಲ್ಲಿ ಹೇಳಲಾಗಿದೆ. ಅದಕ್ಕಾಗಿ ಕೆಲವು ಸೆಲ್ಯುಲಾಯಿಡ್ ತಂತ್ರಗಳನ್ನೂ ಬಳಸಿಕೊಳ್ಳಲಾಗಿದೆ. ಮೊದಲ ಪ್ರದರ್ಶನವಾದ್ದರಿಂದ ಸಣ್ಣಪುಟ್ಟ-ದೋಷಗಳನ್ನು ಮರೆತುಬಿಡಬೇಕೆಂದರೂ ತಪ್ಪುಗಳೇ ಇಲ್ಲವೆನ್ನುವಷ್ಟು ಚೆನ್ನಾಗಿ ನಾಟಕ ಬಂದಿದೆ. ತುಂಬಾ ಕಡೆ ನಾಟಕದ ‘ಘಮ’ ರಂಗಾಯಣ, ನೀನಾಸಂ ತಂಡಗಳ ನಾಟಕಗಳನ್ನು ನೆನಪಿಸುತ್ತದೆ. ಮುದ ಕೊಡುವ ಸಂಗೀತ, ಬೆಳಕು, ವಸ್ತ್ರವಿನ್ಯಾಸ ಯಾವುದನ್ನೂ ಬೆರಳು ಮಡುಚುವಂತಿಲ್ಲ. ಪಾತ್ರಧಾರಿಗಳೆಲ್ಲರೂ ನೀರಿನ ಹರಿವಿನಂತೆ ಸಹಜ.

ನಾಟಕಕ್ಕೆ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಟಕಕಾರ ಚಂದ್ರಶೇಖರ ಕಂಬಾರರು, ನಾಟಕಕ್ಕೆ ಮುಖ್ಯ ಸರಕು ಸಂಘರ್ಷ, ಆತ್ಮಕತೆಯೊಂದರಲ್ಲಿ ಬರುವ ಸಂಘರ್ಷಗಳನ್ನು  ಸಾದೃಶ್ಯಗೊಳಿಸುವುದು ಸುಲಭದ ಕೆಲಸವಲ್ಲ. ಕತೆ, ಕಾದಂಬರಿ, ಪದ್ಯಗಳ ಕಥನವನ್ನು ರಂಗಕ್ಕೆ ತರುವಾಗ ಇರುವ ಸವಾಲು ಅದು. ಹಾಗಾಗಿ ಈ ಸವಾಲನ್ನು ಶಿವಶಂಕರ್ ಹೇಗೆ ಗೆದ್ದಿದ್ದಾರೆ ಎಂಬ ಕುತೂಹಲದಿಂದ ತಾನು ನಾಟಕ ನೋಡಲು ಬಂದಿರುವುದಾಗಿ ಹೇಳಿದರು. ಇದನ್ನು ಕವಿ ಕೆ.ಬಿ. ಸಿದ್ದಯ್ಯ ಅವರೂ ಅನುಮೋದಿಸಿ ಮಾತನಾಡಿದರು. ಇದಕ್ಕೆ ಉತ್ತರ ನೀಡುವವರಂತೆ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು, ನಾಟಕಪರಂಪರೆಗಿಂತ ಕಥನ ಪರಂಪರೆಯಲ್ಲೇ ಕನ್ನಡರಂಗಭೂಮಿಗೆ ಹೆಚ್ಚು ಇತಿಹಾಸವಿದೆ. ನಾಟಕಗಳನ್ನು ರಂಗದ ಮೇಲೆ ತರುವುದು ಹೊಸ ಪರಂಪರೆ, ಮೊದಲಿನಿಂದಲೂ ಕತೆ, ಪುರಾಣ ಮತ್ತು ಮಹಾಕಾವ್ಯಗಳನ್ನೇ ನಾಟಕಗಳನ್ನಾಗಿ ರಂಗದ ಮೇಲೆ ತಂದು ಜನರಿಗೆ ಮುಟ್ಟಿಸಲಾಗಿದೆ. ಹಾಗಾಗಿ ‘ಮಣೆಗಾರ’ ನಾಟಕವಾಗುವ ಎಲ್ಲ ಅರ್ಹತೆಯನ್ನೂ ಪಡೆದಿದೆ ಎಂದರಲ್ಲದೆ ಇದನ್ನು ಸಮರ್ಥವಾಗಿ ರಂಗಕ್ಕೆ ತರುವ ಶಕ್ತಿ ಹಾಲ್ಕುರಿಕೆ ಶಿವಶಂಕರ್ಗೆ ಇದೆ ಎಂದರು. ಇದೆಲ್ಲ ನಡೆದದ್ದು  ಗುರುವಾರ(೧ನೇ ಜುಲೈ ೨೦೧೦) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ.

೪ ಜುಲೈ ೨೦೧೦ರ  ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Saturday 3 July 2010

ನೀವು ಕಂಡಿರದ, ಮುಂದೆ ಕಾಣಲಾಗದ ಸಂಡೂರಿನ ಚಿತ್ರಗಳು



ಲಲಿತ ಪ್ರಬಂಧ: ನೆರಳುಗಳು

 ‘ಅವನ ನೆರಳು ಕಂಡರೆ ನನಗಾಗುವುದಿಲ್ಲ’ ಎನುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಅನೇಕರನ್ನು ನಾವು  ನಿತ್ಯ ನೋಡುತ್ತೇವೆ. ನೆರಳು ಕಂಡರಾಗದ ಜನಕ್ಕೆ ಸಂಬಂಸಿದ ವ್ಯಕ್ತಿಯೇ ಕಂಡುಬಿಟ್ಟರೆ! ವ್ಯಕ್ತಿಯಿದ್ದರೆ ತಾನೆ ನೆರಳು ಕಾಣುವುದು? ಇಲ್ಲಿ ನೆರಳಿನ ಉಪಮೆ ಉಪಯೋಗಿಸಿರುವುದರ ಹಿಂದಿನ ಉದ್ದೇಶ ಆ ‘ನೆರಳಿನ’ ವ್ಯಕ್ತಿಯನ್ನು ಇವರು ದ್ವೇಷಿಸುತ್ತಾರೆ. 

ಆದರೆ  ನಾವು ಹೋದಲ್ಲಿಗೆಲ್ಲಾ ನಾಯಿ ಬಾಲದಂತೆ ಬರುವ ತಮ್ಮ ನೆರಳು ಕಂಡರೆ ಎಷ್ಟು ಜನರಿಗಾಗುವುದಿಲ್ಲ, ಎಷ್ಟು ಜನ ರೋಮಾಂಚಿತರಾಗುತ್ತಾರೆ ಎಂಬುದನ್ನು ಲೆಕ್ಕ ಹಾಕುವವರ್ಯಾರು? ನೆರಳನ್ನು ವ್ಯಕ್ತಿಯೊಬ್ಬನ ವ್ಯಕ್ತಿತ್ವ ಅಳೆಯಲು ಅನೇಕ ಬಾರಿ ಅನೇಕ ವಿಧದಲ್ಲಿ ಉಪಯೋಗಿಸುವ ನಾವು, ಇಂತಹವರು, ಇಂಥವರ ವ್ಯಕ್ತಿತ್ವದ ನೆರಳಿನಿಂದ ಹೊರಬರಬೇಕೆಂದೊ, ಸೋಲಿನ ಕಹಿ ನೆರಳಿನಿಂದ ಇವರು ಬೇಗ ಹೊರಬರಲಿ ಎಂದು ಆಶಿಸುವಾಗಲೋ ನಮಗೆ ಗೊತ್ತಿಲ್ಲದಂತೆ ನೆರಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನೆರಳನ್ನು ಸಾಮಾನ್ಯವಾಗಿ ಸಿಹಿ, ಕಹಿ ಪ್ರಸಂಗಗಳಿಗೂ ಹೋಲಿಸುತ್ತೇವೆ. ನೆರಳಿಗೆ ಕಹಿ ಇದೆಯೆಂದಾದರೆ ಸಿಹಿಯೂ ಇರಬೇಕಲ್ಲವೇ? ‘ಅವರ ವ್ಯಕ್ತಿತ್ವದ ನೆರಳಿನಿಂದ ಹೊರಬರುವುದು, ಅವರ ಸಹವಾಸ ಮಾಡಿದ ಯಾರಿಗಾದರೂ ಕಷ್ಟ" ಅಂಥ, ದೊಡ್ಡವರ ವ್ಯಕ್ತಿತ್ವದ ವ್ಯಾಪ್ತಿ ಸೂಚಿಸುವಲ್ಲಿ ಅವರ ಬಗ್ಗೆ ಗೌರವವಿರುತ್ತದೆ. ನೆರಳಲ್ಲಿ ಏನೂ ಬೆಳೆಯುವುದಿಲ್ಲ ಎನ್ನುವಾಗ ನೆರಳಿನ, ಸರ್ವನಾಶದ ಗುಣ ನಮಗೆ ಗೊತ್ತಾಗುತ್ತದೆ.

ಚಿಕ್ಕಂದಿನಲ್ಲಿ ಸೂರ್ಯನೆದುರು ಕುಳಿತು, ಹಿಂದೆ ಬಿದ್ದ ನೆರಳನ್ನು ನೋಡುತ್ತಾ ಪುಳಕಗೊಂಡಿದ್ದು, ಮಧ್ಯಾಹ್ನದ ಊಟಕ್ಕೆ ಶಾಲೆಯ ಗಂಟೆ ಬಾರಿಸಲು ಶಾಲೆಯ ಪಕ್ಕದ ಹುಣಸೇ ಮರದ ನೆರಳು ನೋಡುತ್ತಿದ್ದುದು, ಅಪ್ಪ ನೆರಳನ್ನು ನೋಡಿ ತಿಂಡಿಯ ಹೊತ್ತು. ಊಟದ ಹೊತ್ತು, ಸಂಜೆಯಾಗುತ್ತಾ ಬಂತು. ಅಂಥ ಕಾಲವನ್ನು ಅಳೆಯುತ್ತಿದ್ದುದು ಈಗ ಕಂಡು, ಕೇಳಿದಂತಿದೆ. ಹಾಗೆಯೇ ವೇಳೆಯನ್ನು ಅಳೆಯುತ್ತಾ ಎಳೆಯ, ಯುವಕ, ಮುದುಕ ಸೂರ್ಯ ಅಂಥ ಆ ದಿನದ ಸೂರ್ಯನ ಆಯುಷ್ಯ ಅಳೆಯುತ್ತಿದ್ದುದು ಅರ್ಥವಾಗದೇ ನಿಂತ ನಮ್ಮ ಪುಟ್ಟ ಕಣ್ಣುಗಳಿಗೆ ಸೂರ್ಯ, ಭೂಮಿಯನ್ನೇ ಸುತ್ತುತ್ತಿದ್ದಾನೆ ಎನ್ನುವಂತೆ ಕಂಡಿದ್ದು ಎಂಥ ವಿಸ್ಮಯ!  ತಮ್ಮ ಸುತ್ತಾಮುತ್ತಾ ಯಾರೂ ಇಲ್ಲದ ವೇಳೆಯಲ್ಲಿ  ತಮ್ಮ ನೆರಳಿನೊಡನೆ ಆಟವಾಡುತ್ತಾ ಮೈಮರೆಯುವ ಮಕ್ಕಳಾಟವನ್ನು ಕಂಡವರಿಗೆ ಮಾತ್ರ ಹೇಳಲು ಸಾಧ್ಯ ತಮ್ಮ ನೆರಳನ್ನು ನೋಡಿಕೊಂಡು ಮೈಮರೆಯುವ ಹದಿಹರೆಯದವರಿಗೆನೂ ಕೊರತೆಯಿಲ್ಲ. ಕನ್ನಡಿ ಮುಂದೆಯೇ ಬಹುಪಾಲು ಸಮಯ ಕಳೆಯುವ ಹುಡುಗಿಯರು (ಹುಡುಗರೂ ಇದಕ್ಕೆ ಹೊರತಲ್ಲ) ನೆರಳಿನ ರೋಮಾಂಚನದಲ್ಲಿ ಕಾಲಕಳೆಯುವುದು ಅಪರೂಪವೆಂದೇ ಹೇಳಬೇಕು. 

ನಮ್ಮ ಜನಪದರಂತೂ ನೆರಳಿನ ಉಪಮೆ ಬಳಸಿ ಪದ್ಯವನ್ನೇ ಕಟ್ಟಿ ಹಾಡಿದ್ದಾರೆ. 
‘ಆಲಕ್ಕೆ ಹೂವಿಲ್ಲ 
ಸಾಲಕ್ಕೆ ಕೊನೆಯಿಲ್ಲ 
ಜಾಲಿಯ ನೆರಳು ನೆರಳಲ್ಲ  ||ಪ|| 
ಹೆಣ್ಣಿಗೆ ತವರು ಸ್ಥಿರವಲ್ಲ’  
ಇಲ್ಲಿ, ನೆರಳಿನ  ಬಗೆಗೆ ನಮ್ಮ ಪೂರ್ವಿಕರಿಗಿದ್ದ ಸೂಕ್ಷ್ಮ ಮನೋಭಾವ ವ್ಯಕ್ತವಾಗುತ್ತದೆ. ಜಾಲಿಯ ನೆರಳು ಕನಿಷ್ಟದ್ದಾದರೆ, ತಂಪಾದ ನೆರಳಿಗೆ ಹೊಂಗೇ ಮರ ಬಿಟ್ಟು ಸಾಟಿ ಯಾವುದು? ವಸಂತ ಕಾಲದ ಹೊಂಗೇ ಮರದ ನೆರಳ ಆಹ್ಲಾದತೆಯನ್ನು ವರ್ಣಿಸಲು ಕವಿಗಳೇ ಬೇಕು. ಮರ ಕಡಿಯುವವನೊಬ್ಬ ಬಿಸಿಲಿನ ಬೇಗೆಗೆ ಹೆದರಿ ತಾನು ಮುಂದೆ ಕಡಿಯಲಿದ್ದ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು ನಂತರ ಅದೇ ಮರವನ್ನು ಕಡಿದ ಜಾನಪದ ಕಥೆಯೊಂದನ್ನು ಕೇಳುವ ಯಾರಿಗಾದರೂ ಮನುಷ್ಯನ ಸ್ವಾರ್ಥದ ಪರಿಚಯವಾಗುತ್ತದೆ. ಸುಖಕ್ಕೆ ಆಶ್ರಯಕ್ಕೆ ಮರದ, ವ್ಯಕ್ತಿಯ ನೆರಳು ಮನುಷ್ಯನಿಗೆ ಬೇಕು. ಆದರೆ ಒಂದು ಚಿಕ್ಕ ಗಿಡಕ್ಕೆ ದೊಡ್ಡ ಮರದ ನೆರಳು, ಅದರ ಭವಿಷ್ಯದ ದೀಪವನ್ನೇ ಆರಿಸಿಬಿಡಬಹುದು.

ವಯಸ್ಕ ರಸಿಕರಿಗೆ, ಪ್ರಾಯದ ಹುಡುಗ, ಹುಡುಗಿಯರಿಗೆ  ತಾವು ರೋಮಾಂಚನಗೊಳ್ಳಲು ತಾವು ಇಷ್ಟಪಟ್ಟವರ ನೆರಳು ಸೋಕಿದರೇ ಸಾಕು. ಹಾಗೆಯೇ ಬದುಕಿನ ಸಂದರ್ಭದಲ್ಲಿ ಸಂಸ್ಕೃತಿ, ಅನುಭವಗಳ ದೃಷ್ಟಿಯಲ್ಲಿ ಹಿರಿಯ ತಲೆಮಾರಿನ ನೆರಳು, ಕಿರಿಯ ತಲೆಮಾರುಗಳ ಮೇಲೆ ಇರಬೇಕು, ಇರುತ್ತದೆ. ಪ್ರಾಯದಲ್ಲಿ ಹೆಂಡತಿಗೆ ಗಂಡನ ನೆರಳು, ವೃದ್ದಾಪ್ಯದಲ್ಲಿ ಗಂಡನಿಗೆ ಹೆಂಡತಿಯ ಆಶ್ರಯದ ನೆರಳೂ ಅವಶ್ಯಕ ಎಂಬ ಹಿರಿಯರ ಮಾತಿನ ಔಚಿತ್ಯ ರಕ್ಷಣೆ ಮತ್ತು ಆಸರೆ. ಜಗತ್ತಿನಲ್ಲಿ ಯಾವ ವಸ್ತುವಿಗೆ ನೆರಳಿಲ್ಲ? ಬೆಳಕಿದ್ದರೆ ಎಲ್ಲ ವಸ್ತುಗಳಿಗೂ ನೆರಳಿದೆ. ಎರಡು ಕೈಗಳು ಸೇರಿದರೆ ಚಪ್ಪಾಳೆ ಹೇಗೋ ಹಾಗೆ ಬೆಳಕು ಮತ್ತು ವಸ್ತು ನೆರಳ ಸೃಷ್ಟಿಗೆ ಅತ್ಯವಶ್ಯಕ.

ನಾವು ಇಷ್ಟಪಡುವ ವ್ಯಕ್ತಿಗಳು ನಮ್ಮ ಆಳಕ್ಕೆ ಹೇಗೋ ಇಳಿದು ತುಂಬಿಕೊಳ್ಳುವಂತೆ, ಪಾತ್ರೆಯಲ್ಲಿ ಹಾಕಿದ ನೀರು ಪಾತ್ರೆಯ ಆಕಾರ ಪಡೆಯುವಂತೆ, ಬೆಳಕು ಮತ್ತು ವಸ್ತುವನ್ನಾಧರಿಸಿ ನೆರಳನ್ನು ಮೂಡಿಸಬಹುದಲ್ಲವೇ? ಆದರೆ ನೆರಳಿನ ಉದ್ದ, ತುಂಡ ಮುಂತಾದ ಏರಿಳಿತಗಳಿಗೆ ಬೆಳಕಿನ ಕೋನ ಮತ್ತು ದಿಕ್ಕುಗಳು ಮುಖ್ಯ. ಆದರೆ ನೆರಳಿನ ಹಂಗಿನಿಂದ ದೇವತೆಗಳ ದೇಹ ದೂರವಂತೆ. ಹಾಗಾಗಿ ಅವರಿಗೆ ನೆರಳಿರುವುದಿಲ್ಲವಂತೆ ! ಹಾಗಾದರೆ ತಮ್ಮ ದೇಹದ ಆಕಾರ  ಬದಲಿಸಿಕೊಳ್ಳಲು ದೆವ್ವಗಳಿಗೆ, ರಾಕ್ಷಸರಿಗೆ ಸಾಧ್ಯ ಎಂಬ ಪುರಾಣದ ಕಥೆಗಳ ಹಿನ್ನಲೆಯಲ್ಲಿ, ಅವುಗಳಿಗೆ ನೆರಳಿದ್ದರೆ ಯಾವ ತರಹದ ನೆರಳಿರಬಹುದು? ‘ಶನಿದೇವಾ ನಿನ್ನ ಕರಿನೆರಳು ನಮ್ಮ ಮೇಲೆ ಬೀಳದಿರಲಿ’ ಅಂಥ ಶನಿಮಹಾತ್ಮನನ್ನು ಪ್ರಾರ್ಥಿಸುವಲ್ಲಿ ಜನ ಯಾವ ರೀತಿಯ ನೆರಳು ಬೇಡ ಎನ್ನುತ್ತಾರೆ? ಯಾವ ರೀತಿಯ ನೆರಳಿಗೆ ಮೊರೆಯಿಡುತ್ತಾರೆ? ಹಾಗಾದರೆ ಕಹಿ (ಸೋಲು) ಸಿಹಿ (ತಂಪು) ನೆರಳುಗಳಂತೆ ಕರಿನೆರಳು ಕೆಟ್ಟ ದೃಷ್ಟಿಯನ್ನು ಸೂಚಿಸುವುದಾದರೆ ಒಳ್ಳೆಯದನ್ನುಂಟು ಮಾಡುವ ನೆರಳನ್ನು ಯಾವ  ಬಣ್ಣದಿಂದ ಕರೆಯಬೇಕೆನ್ನುವುದು ಪ್ರಶ್ನೆ.

ಸೂರ್ಯ, ಚಂದ್ರರ ಗ್ರಹಣಕ್ಕೆ ಕಾರಣವಾಗುವ ಭೂಮಿ, ಸೂರ್ಯ, ಚಂದ್ರರ ಪರಸ್ಪರ ನೆರಳುಗಳು,  ಕಪ್ಪೆಯ ಮೇಲೆ ಹಾವಿನ ನೆರಳು, ಹಾವಿನ ಮೆಲೆ ಹದ್ದಿನ ನೆರಳು, ಶಿಷ್ಯನ ಮೇಲೆ ಗುರುವಿನ ನೆರಳು ಮುಂತಾದವುಗಳ ಪರಿಕಲ್ಪನೆ ಮತ್ತು ವಾಸ್ತವಗಳು ನೆರಳನ್ನು ಉಪಮೆಗಳಾಗಿ ಉಪಯೋಗಿಸಿಕೊಳ್ಳುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಿವೆ. ಮಳೆಗಾಲದಲ್ಲಿ ಮೂಡುವ ಕಾಮನ ಬಿಲ್ಲೂ ಕೂಡಾ ನೆರಳು ಬೆಳಕಿನ ಆಟದಿಂದಲೇ ಸೃಷ್ಠಿಯಾಗುವ ಒಂದು ಅದುತ ವಿಸ್ಮಯ ಹಾಗೆಯೇ ಸೂರ್ಯನ ಬಿಳಿ ಬೆಳಕು ಪಟ್ಟಕದ ಮೂಲಕ ಹಾಯ್ದು ಹೋದಾಗ ಬೆಳಕು ಏಳು ಬಣ್ಣಗಳಾಗಿ ಒಡೆಯುತ್ತದೆ. ಬೆಳಕು ವಸ್ತುವಿನ ಮೂಲಕ ತೂರಿದಾಗ ಉಂಟಾಗುವ ಈ ಕ್ರಿಯೆಗಳೂ ಕೂಡಾ ಒಂದು ತರಹದ ನೆರಳನ್ನು ಸೃಷ್ಟಿಸುವ ವಿಧಾನಗಳಾಗಿವೆ. ಬೆಳಕು ವಸ್ತುವಿನ ಮೂಲಕ ತೂರಿ ಹೋಗದೆ ಇದ್ದಾಗ ಉಂಟಾಗುವ ನೆರಳು ಒಂದು ಅರ್ಥದಲ್ಲಿ ಏನನ್ನೂ ಬಿಚ್ಚಿಡುವುದಿಲ್ಲ. ಹಾಗೆಯೇ ಏನನ್ನೂ ಮುಚ್ಚಿಡುವುದಿಲ್ಲ. ಬೆಳಕಿಗೆ ಒಗ್ಗಿಕೊಂಡ ಎಲ್ಲಾ ಭಾಗ ಕಾಣುತ್ತದೆ. ಬೆಳಕಿನ ಕೋನ, ದಿಕ್ಕು ಹಾಗೂ ವಸ್ತುವಿನಿಂದ ಬೆಳಕಿನ ಮೂಲಕ್ಕಿರುವ ಅಂತರವನ್ನು ಆಧರಿಸಿ ವಸ್ತುವಿ ನೆರಳನ್ನೇ ಹತ್ತಾರು ವಿಧವಾಗಿ ಮೂಡಿಸಬಹುದು. ಹೀಗೆ ವಸ್ತುವೊಂದರ ಹೊರ ಆಕಾರವನ್ನು ಭೂಮಿಯ ಮೇಲೆ  ಆ ವಸ್ತುಗಳ ನೆರಳಿನ ಸಹಾಯದಿಂದ ಬಿಡಿಸುವ ಕಲೆ ಬಹುಶಃ ಈಗಿನ ಚಿತ್ರ ಕಲೆಗೆ ಕಾರಣವಾಗಿರಲೂಬಹುದಲ್ಲವೇ? 

ನಮ್ಮ ಆಧುನಿಕ ಜಗತ್ತಿನಲ್ಲಿ ಮಸೂರಗಳ ಸಹಾಯದಿಂದ, ನೆರಳು ಬೆಳಕಿನ ಸಂಯೋಜನೆಯ ಹೊಸ ಕಲಾ ಜಗತ್ತೇ ಸೃಷ್ಠಿಯಾಗಿದೆ. ಈ ದೃಷ್ಠಿಯಿಮದ ಇಂದಿನ ಸಿನಿಮಾ ಕಲ್ಪನೆ ಕೂಡಾ ನೆರಳು ಬೆಳಕಿನ ಆಟದ ಒಂದು ಮಜಲು ಮಾತ್ರ. ಇಷ್ಟಲ್ಲದೆ ಬೆಳಕಿನಲ್ಲಿ ತಮ್ಮ ಕೈಕಾಲು ಹಾಗೂ ದೇಹದ ವಿವಿಧ ಭಾಗಗಳ ಚಲನೆಯಿಂದ ವಿವಿಧ ಆಕಾರ, ಪ್ರಾಣಿ, ಪಕ್ಷಿಗಳ ಆಕಾರ ಹಾಗೂ ಅವುಗಳ ನಡವಳಿಕೆ, ಚಟುವಟಿಕೆಯನ್ನು ಗೋಡೆ, ಪರದೆಗಳ ಮೇಲೆ ಮೂಡಿಸುತ್ತಾರೆ. ಹೀಗೆಯೇ ಹೊಸ ಕಲೆಯೊಂದನ್ನು ಸೃಷ್ಠಿಸಿರುವ ಆಧುನಿಕ ಭೂಪರು ನೆರಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮನುಷ್ಯನ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣಿನ ರಚನೆ ಹಾಗೂ ಕ್ರಿಯೆ ನೆರಳು-ಬೆಳಕನ್ನು  ಆಧರಿಸಿದೆ  ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. 

ಪುರಾಣದ ಕಥೆಗಳಲ್ಲೊಂದಾದ ಮಹಾಭಾರತದಲ್ಲಿ, ನೆರಳು, ಕಥೆಯ ದಿಕ್ಕನ್ನೇ ಬದಲಿಸುವ ಮಹತ್ವ ಪಡೆದುಕೊಂಡಿದೆ. ಚಕ್ರವ್ಯೂಹದಲ್ಲಿ ಮೋಸಕ್ಕೆ ಬಲಿಯಾದ ಅಭಿಮನ್ಯು, ಅವನನ್ನು ಕೊಂದ ಜಯದ್ರಥನನ್ನು ‘ನಾಳೆಯ ಸೂರ್ಯ ಮುಳುಗುವುದರೊಳಗಾಗಿ ಹತ್ಯೆ ಮಾಡುತ್ತೇನೆ" ಎಂದು ಪ್ರತಿe ಮಾಡುವ ಅರ್ಜುನನ ಶಪಥ ಈಡೇರದ ಸ್ಥಿತಿ ಬಂದಾಗ, ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಿಡಿದು ಚಕ್ರದ ನೆರಳಿನಿಂದ ಇಡೀ ಜಗತ್ತನ್ನು ಕತ್ತಲಲ್ಲಿ ಮುಗಿಸಿದ ನಂತರ ಅರ್ಜುನ ಮೋಸದ ಜಯದ್ರಥನನ್ನು ಮೋಸದಿಂದಲೇ ಹತ್ಯೆ ಮಾಡಿದನೆಂಬ ಕಥೆಯನ್ನು ಯಾರು ಕೇಳಿಲ್ಲ? ಗೌರಿ ತನ್ನ  ತವರಿಗೆ ಹೋಗಬೇಕಾಗಿ ಬಂದಾಗ ತನ್ನ ನೆರಳಿಗೆ ಜೀವ ತುಂಬಿ ಇಟ್ಟು ಹೋದದ್ದರಿಂದ ಅದು ಶಿವನೊಡನೆ ಸಮಾಗಮಿಸಿ ಷಣ್ಮುಖನ ಹುಟ್ಟಿಗೆ ಕಾರಣವಾಯಿತು ಎಂನಲ್ಲಿ ನೆರಳನ್ನು ಪೌರಾಣಿಕವಾಗಿ ಬಳಸಿಕೊಂಡಿರುವುದರ ಹಿಂದಿನ ಮರ್ಮವನ್ನು ಅರಿತವರಿಗಷ್ಟೇ ನೆರಳ ಮಹತ್ವ ತಿಳಿಯುತ್ತದೆ. 

ನೀರಿನ ಮೇಲೆ ಬೀಳುವ ನೆರಳು ಅಲೆಗಳಿಗನುಗುಣವಾಗಿ ನಡುಗುವಂತೆ, ಛಿದ್ರವಾದಂತೆ ತೋರುತ್ತದೆ. ಭೂಮಿ, ಬಂಡೆಯ ಮೇಲೆ ಬೀಳುವ ನೆರಳು, ಗಾಳಿಗೆ ಮರ ಅಲುಗಾಡಿದಂತೆ ತನ್ನ ನೃತ್ಯವನ್ನು ಪ್ರಾರಂಭಿಸುತ್ತದೆ. ಹೀಗೆ ನಡುಗುವ ನೆರಳು ನೀರಮೇಲೆ ಬಿದ್ದರೆ ಸ್ಪಷ್ಟವಾಗಿ ನೋಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ವಸ್ತುವೊಂದರ ನೆರಳು ನೀರ ಮೇಲೆ ಬೀಳುವ ವೇಳೆಯಲ್ಲಿ ನೀರು ಶುದ್ಧವಾಗಿದ್ದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವಿನ ಬಿಂಬವೂ ಮೂಡುತ್ತದೆ. ನೆರಳಿಗೂ, ಬಿಂಬಕ್ಕೂ ಸಂಬಂಧವಿಲ್ಲವಾದರೂ, ಕೆಲವು ವ್ಯತ್ಯಾಸಗಳಂತೂ ಇವೆ. ಬೆಳಕಿಗೆ ನಿಂತ ಕ್ಷಣ ನೆರಳು ಕಾಣುವಂತೆ ಕನ್ನಡಿ ಮುಂದೆ ನಿಂತ ಕ್ಷಣ ಬಿಂಬ ಕಾಣುತ್ತದೆ. ನೆರಳು ವಸ್ತುವಿನಿಂದ ಉದ್ದವಾಗಬಲ್ಲದು, ಇಲ್ಲ ಕುಬ್ಜವಾಗಬಲ್ಲದು. (ಸೂರ್ಯನ ಚಲನೆಯನ್ನನುಸರಿಸಿ) ಆದರೆ ಬಿಂಬದ ಗಾತ್ರ, ಉದ್ದ, ತುಂಡ ಅಳತೆಗಳು ಕನ್ನಡಿಯ ಮಸೂರವನ್ನು ಅವಲಂಬಿಸಿರುತ್ತವೆ. ಕನ್ನಡಿಯ ಮುಂದೆ ನಿಂತು ನಾವು ಚಲಿಸಿದರೂ ಬಿಂಬ ಉದ್ದ, ತುಂಡ ಆಗುತ್ತದಾದರೂ ಅದು ಗೌಣ. ಬಹುಶಃ ನೆರಳಿಗೆ ಸವತಿಯಿದ್ದರೆ ಅದು ಬಿಂಬ ಮಾತ್ರ. ಕನ್ನಡಿ ಬಂದದ್ದರಿಂದ ಜನ ತಮ್ಮ ನೆರಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟಿರಬೇಕು.

ಕನ್ನಡಿಯಿಲ್ಲದಿದ್ದ ಕಾಲದಲ್ಲಿ ಜನ  ತಮ್ಮ ಮುಖವನ್ನು ಹೇಗೆ ನೋಡಿಕೊಳ್ಳುತ್ತಿದ್ದರು? ಎನ್ನುವುದು ಪ್ರಶ್ನೆಯಾದರೂ ಅವರು ನೆರಳು ನೋಡಿ ತಮ್ಮ ಸೌಂದರ್ಯವನ್ನು ಅಳೆದುಕೊಳ್ಳುತ್ತಿದ್ದರು ಎನ್ನುವುದು ಸತ್ಯಕ್ಕೆ ಹತ್ತಿರವಾದದ್ದು ಎನ್ನಬಹುದಾದರೂ ನೆರಳೇ ಸೌಂಧರ್ಯದ ಮಾನದಂಡವಾಗಿತ್ತು ಎಂಬುದು ತಪ್ಪಾಗುತ್ತದೆ. ಮನುಷ್ಯ ನೆರಳನ್ನು ನೋಡುವುದನ್ನು ಬಿಟ್ಟಿದ್ದರೆ ಅದು ಕನ್ನಡಿ  ಬಂದಂದಿನಿಂದ ಮಾತ್ರ ಎಂದು ಧಾರಾಳವಾಗಿ ಹೇಳಬಹುದೇನೋ. ನೆರಳನ್ನೇ ನಂಬಿಕೊಂಡಿದ್ದ ಕಾಲದಲ್ಲಿ ಕನ್ನಡಿ ಬಂದು, ಅದನ್ನು ಮುದುಕನೊಬ್ಬ  ಬಚ್ಚಿಟ್ಟುಕೊಂಡು ನೋಡಿಕೊಳ್ಳುತ್ತಿದ್ದುದನ್ನು ಕಂಡ ಅಜ್ಜಿ, ಅಜ್ಜನಿಲ್ಲದಾಗ ಕನ್ನಡಿಯಲ್ಲಿ ಬಗ್ಗಿ ನೋಡಿ ತನ್ನ ಯಜಮಾನ ಬೇರೊಬ್ಬಳನ್ನು ಇಟ್ಟುಕೊಂಡಿದ್ದಾನೆ ಅಂತ ರಂಪ ಮಾಡಿದ ಜಾನಪದ ಕಥೆಯನ್ನು ಯಾರು ಕೇಳಿಲ್ಲ?

ಪ್ರಾಯದ ಹುಡುಗ, ಹುಡುಗಿಯರು ಕನ್ನಡಿ ಮುಂದೆ ಸವೆಸುವ ಕಾಲದ ಒಂದಂಶವನ್ನಾದರೂ ನೆರಳನ್ನು ನೋಡುತ್ತಾ ಸವೆಸುತ್ತಾರೆಯೆ? ನೆರಳಿಗೆ  ಬಂದಿರುವ ಕುತ್ತನ್ನು ನೋಡಿ! ಅದಕ್ಕಾಗಿಯಾದರೂ ನೆರಳಿಗೆ ಈಗ  ತನ್ನನ್ನು ನೋಡಿಕೊಳ್ಳುವ ನಿಮ್ಮ ನೆರಳಿನಾಸರೆ  ಬೇಕಾಗಿದೆಯಲ್ಲವೇ?

೨೮ ಮೇ ೨೦೦೦ದ  ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Wednesday 30 June 2010

ಫ್ರೀಡ್ಮನ್ ಮತ್ತು ನಿಲೇಕಣಿ ಜತೆ ಒಂದು ಸಂಜೆ

ಕಳೆದ ಸೋಮವಾರ (೦೯ ಫೆ. ೨೦೦೯) ಸಂಜೆ ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.

‘ಇಮ್ಯಾಜಿನಿಂಗ್ ಇಂಡಿಯಾ ಇನ್ ಎ ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್ ವರ್ಲ್ಡ್’ ಎಂಬ ವೇದಿಕೆ ಮೇಲೆ  ಇವರನ್ನು ಮುಖಾಮುಖಿ ಮಾಡಿಸಿದ್ದು ಪೆಂಗ್ವಿನ್ ಮತ್ತು ಎನ್ಡಿಟಿವಿ. ಇದು ಪೆಂಗ್ವಿನ್ ಇತ್ತೀಚೆಗೆ ಪ್ರಕಟಿಸಿರುವ ನಿಲೇಕಣಿ ಅವರ  ‘ಇಮ್ಯಾಜಿನಿಂಗ್ ಇಂಡಿಯಾ’  ಫ್ರೀಡ್ಮನ್ ಅವರ ಇತ್ತೀಚಿನ ಕೃತಿ  ‘ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್’ ಪುಸ್ತಕಗಳನ್ನು ಪ್ರಮೋಟ್ ಮಾಡಲು ಏರ್ಪಡಿಸಿದ್ದ  ಕಾರ್ಯಕ್ರಮವಾದರೂ ಅಲ್ಲಿ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಇಬ್ಬರೂ ಒಂದೂವರೆ ಗಂಟೆ ನಿರರ್ಗಳವಾಗಿ ಅಭಿಪ್ರಾಯ ಹಂಚಿಕೊಂಡರು. ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು. ಎಂದಿನಂತೆ ಎನ್ಡಿಟಿವಿಯ ದೊಡ್ಡ ಗಂಟಲಿನ ಬರ್ಕಾ ದತ್ ಈ ಇಬ್ಬರು ಐಕಾನ್ಗಳನ್ನೂ ಮತ್ತು ಪ್ರೇಕ್ಷಕರನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದೊಂದು ಅಪರೂಪದ ಸಂಜೆ.

ನೂಯಾರ್ಕ್ ಟೈಮ್ಸ್ನಲ್ಲಿ ಪತ್ರಕರ್ತನಾಗಿ ಮಾಡಿದ ಕೆಲಸಕ್ಕೆ ಮೂರು ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ, ಥಾಮಸ್ ಫ್ರೀಡ್ಮನ್ ಮತ್ತು ನಂದನ್ ನಿಲೇಕಣಿ ಅವರು ಜತೆಗಿನ ಸಂವಾದದಲ್ಲಿ ಜಾಗತಿಕ ತಾಪಮಾನ ಏರಿಕೆ, ಹಣಕಾಸು ಹಿಂಜರಿತ, ಜಾಗತೀಕರಣ, ಎನರ್ಜಿ ಟೆಕ್ನಾಲಜಿ, ಪ್ರಜಾಪ್ರಭುತ್ವ, ಕಾನೂನು, ಸ್ಲಮ್ಡಾಗ್ ಮಿಲೆನಿಯರ್, ಭಯೋತ್ಪಾದನೆ ಮತ್ತು ಯುದ್ಧ  ಮುಂತಾದ ಅನೇಕ ವಿಷಯಗಳು ಬಂದವು. ಇಬ್ಬರೂ ಒಟ್ಟಾಗಿ ಒತ್ತಿ ಒತ್ತಿ ಜಪಿಸಿದ ಮಂತ್ರ ‘ಆಶಾವಾದ’. ಇದೊಂದೇ ಆರ್ಥಿಕ ಹಿಂಜರಿತದಿಂದ ಪ್ರಪಂಚವೇ  ತತ್ತರಿಸಿರುವಾಗ ಎಲ್ಲರೂ ಗುರಿಮುಟ್ಟಲು ಇರುವ ಏಕೈಕ ಮಾರ್ಗ ಎಂದು ಹೇಳಿದ್ದು ಆ ಅರ್ಥಪೂರ್ಣ ಮಾತುಕತೆಯ ಒಟ್ಟು  ಸಾರಾಂಶದಂತಿತ್ತು.

ಲಘುಹಾಸ್ಯದ ಧಾಟಿಯಲ್ಲೇ ಬರ್ಕಾ ಮತ್ತು ಪ್ರೇಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀಡ್ಮನ್ಎಲ್ಲರ ಮನ ಗೆದ್ದರು. ನಮ್ಮೆಲ್ಲಾ ತಂತ್ರಜ್ಞಾನ  ಪರಿಸರದ ಜೀವವೈವಿಧ್ಯ (ಈಕೋ ಸಿಸ್ಟಮ್) ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಬೇಕು. ಆರ್ಥಿಕ ಸ್ಥಿರತೆಗೆ ಇಂಧನ ತಂತ್ರಜ್ಞಾನ (ಎನರ್ಜಿ ಟೆಕ್ನೋಲಜಿ) ಹೊಸ ಮಂತ್ರವಾಗಬೇಕು. ಆರ್ಥಿಕ ಪಾರುಗಾಣಿಕೆಯಷ್ಟೇ ಮುಖ್ಯವಾಗಿ ತಕ್ಷಣ ಗಮನಹರಿಸಬೇಕಿರುವುದು ಇಂಧನ ತಂತ್ರಜ್ಞಾನ. ಅದು ಬೆಳೆಯದೇ ಹೋದರೆ ಇನ್ನೊಂದು ಕೈಗಾರಿಕಾ ಕ್ರಾಂತಿ ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಆಂತರಿಕ ಸ್ವಾತಂತ್ರ್ಯದ ಕೊರತೆ, ಮಹಿಳೆಯರ ಬಲವರ್ಧನೆ ಆಧುನಿಕ ಶಿಕ್ಷಣಗಳ ಬಗ್ಗೆ ತಕ್ಷಣ ಗಮನ ನೀಡಬೇಕು. ಎಲ್ಲರೂ ಸ್ವತಂತ್ರವಾಗಿ ನಡೆದಾಡಲು, ಮಾತನಾಡಲು ಅಲ್ಲಿರುವ ಉಸಿರುಗಟ್ಟುವ ವಾತಾವರಣವನ್ನು ತಿಳಿಗೊಳಿಸದೆ ಜಗತ್ತಿನೊಟ್ಟಿಗೆ ಶಾಂತಿಯುತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಿಲ್ಲ.   ತನ್ನ ಸ್ಥಳೀಯ ಶಕ್ತಿಯನ್ನು ಜಾಗತೀಕರಣಗೊಳಿಸುವ ಮೂಲಕ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಬೆಂಗಳೂರಿಗಿದೆ. ಅಮೆರಿಕ ಇಂಥದೇ ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆದಿದೆ. ಇಂತಹ ಅವಕಾಶ ಬಂದರೆ ಬೆಂಗಳೂರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೆರಿಕ ಕೂಡ ತಲೆತಲಾಂತರದಿಂದ ನಿರ್ಲಕ್ಷಿಸಿರುವ ಪರಿಸರ, ಇಂಧನ, ವಲಸೆ, ವೃದ್ಧಾಪ್ಯ ಪಿಂಚಣಿ ಮತ್ತು ಆರೋಗ್ಯ ಸಂಬಂ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿರುವುದು ತುರ್ತು. ಸ್ಲಮ್ಡಾಗ್ ಮಿಲೆನಿಯರ್ ಚಿತ್ರವನ್ನು ಕೇವಲ ಕಲೆಯಾಗಿ ಮಾತ್ರ ನೋಡಬೇಕು. ಭಾರತದ ಸ್ವಾತಂತ್ರ್ಯ ಆತ್ಮವಿಶ್ವಾಸಗಳನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು ಫ್ರೀಡ್ಮನ್.  ತಮ್ಮ ಹೆಸರಾಂತ ಪುಸ್ತಕ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಗೆ ಆ ಹೆಸರು ಇಡಲು ನಿಲೇಕಣಿ ಕಾರಣ ಎಂದ ಫ್ರೀಡ್ಮನ್, ನಂದನ್ ಅವರನ್ನು ಸಂದರ್ಶಿದಾಗ ಅವರು ಹೇಳಿದ ‘ದಿ ಪ್ಲೇಯಿಂಗ್ ಫೀಲ್ಡ್  ಈಸ್ ಬೀಯಿಂಗ್ ಲೆವೆಲ್ಡ್’ ಎಂಬ ಉಕ್ತಿಯೇ ಅಂತಿಮವಾಗಿ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಎಂಬ ಹೆಸರಿನ ಉಗಮಕ್ಕೆ ಕಾರಣವಾಯಿತು ಎಂದು ವಿವರಿಸಿದರು.

ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಲಘು ಧಾಟಿಯಲ್ಲಿ ಉತ್ತರಿಸಲು ನಂದನ್ ಕೂಡಾ ಹಿಂದೆ ಬೀಳಲಿಲ್ಲ. ಸತ್ಯಂನ ಹಗರಣದ ಮೂಲ ‘ರಿಯಲ್ ಎಸ್ಟೇಟ್’ ಎಂಬ ಚಟಾಕಿ ಹಾರಿಸಿದ ನಿಲೇಕಣಿ, ಇಂಥ ಹಗರಣಗಳು  ಭಾರತದ ಐಟಿ ಉದ್ಯಮ ತನ್ನ ಬದ್ಧತೆ ಮತ್ತು ಪಾರದರ್ಶಕತೆಯನ್ನು ಪುನಾ ನಿರೂಪಿಸಬೇಕಾದ ಸ್ಥಿತಿಗೆ ದೂಡಿದೆ. ಹಗರಣ ಭಾರತಕ್ಕೆ ಕಪ್ಪು ಚುಕ್ಕೆಯಾದರೂ ಅದು ವಿಶ್ವಾಸಾರ್ಹತೆಗೆ ದೊಡ್ಡ ಹಾನಿ ಮಾಡಲಾರದು. ಆದರೆ ಇನ್ನು ೩೦ ವರ್ಷಗಳನಂತರ ಭಾರತಕ್ಕೆ ಸಿಗುವ ಮಾನವಶಕ್ತಿ (ಹ್ಯೂಮನ್ ಕ್ಯಾಪಿಟಲ್)ಯ ಲಾಭ ಬೇರೆ ಯಾವುದೇ ದೇಶಕ್ಕೆ ಸಿಗಲು ಸಾಧ್ಯವಿಲ್ಲ. ಆಗ ದೇಶದ ಯುವಜನರೇ ಬಹುಸಂಖ್ಯಾತರಾಗಿರುತ್ತಾರೆ.  ಇದನ್ನೇ  ಡೆಮೋಗ್ರಾಫಿಕ್ ಡಿವಿಡೆಂಡ್ ಎಂದು ಕರೆದರು ನಿಲೇಕಣಿ. ಒಂದು ದೇಶದ ಚರಿತ್ರೆಯಲ್ಲಿ ಒಮ್ಮೆ ಮಾತ್ರ ಬರುವ ಸುವರ್ಣ ಅವಕಾಶ ಇದು. ಭಾರತದಲ್ಲಿ ಹುಟ್ಟುವ ಮಕ್ಕಳ  ಅನುಪಾತ ಕ್ರಮೇಣ ಕಡಿಮೆಯಾಗುತ್ತಿದ್ದು ಹಿರಿಯರ ಸಂಖ್ಯೆಯೂ ಕುಗ್ಗಲಿದೆ ಆಗ ದೇಶದ ಸಮಗ್ರ ಬೆಳವಣಿಗೆ ಭರದಿಂದ ಸಾಗುತ್ತದೆ. ಹಗರಣಗಳಲ್ಲಿ ಭಾರತವೇನೂ ಏಕಸ್ವಾಮ್ಯತೆ ಸಾಸಿಲ್ಲ ಏಕೆಂದರೆ  ಅಮೆರಿಕದಲ್ಲೂ ಹಗರಣಗಳಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಒಂದು ಹಗರಣದ ಆರೋಪಿಯನ್ನು ತಿಂಗಳುಗಳೇ ಕಳೆದರೂ ಬಂಸಿಲ್ಲ. ಆದರೆ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥನನ್ನು ಹಗರಣ ಹೊರಬಿದ್ದ ಮೂರು ದಿನಗಳಲ್ಲಿ ಬಂಸಲಾಯಿತು. ಇದು ಭಾರತ ಹೊಂದಿರುವ ನ್ಯಾಯ ವ್ಯವಸ್ಥೆಯ ಸಂಕೇತ. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದರು.

ಭಾರತದ ಪ್ರತಿ ಮನುಷ್ಯ ಎರಡು ಟನ್ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ, ಅದೇ ಅಮೆರಿಕದಲ್ಲಿ ಪ್ರತಿಯೊಬ್ಬನೂ ೨೦ ಟನ್ ಸೇರಿಸುತ್ತಿದ್ದಾನೆ. ಆದರೂ ಭಾರತ ಕಾರ್ಬನ್ ನಿಯಂತ್ರಣದ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಭಾರತ ಅವಕಾಶಗಳ ಬಾಂಬ್ ಮೇಲೆ ಕುಳಿತಿದೆ ಆದರೆ ಅದಕ್ಕೆ ಇಚ್ಛಾಶಕ್ತಿ ಇರುವ ನಾಯಕತ್ವದ ಕೊರತೆ ಮತ್ತು ರಾಜಕೀಯ ಕ್ಷೋಭೆ ದೊಡ್ಡ ತೊಡಕುಗಳಾಗಿವೆ. ಭಾರತ ಇತರ ಆರ್ಥಿಕ ಮೂಲಗಳ ಕಡೆಯೂ ಗಮನಹರಿಸಬೇಕೆಂಬ ಪಾಠವನ್ನು ಈ ಹಿಂಜರಿತದಿಂದ ಕಲಿಯಬೇಕು ಹಾಗೆಯೇ  ಇತರ ಮೂಲಸೌಕರ್ಯಗಳ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕು. ಸ್ಲಮ್ಡಾಗ್ ಮಿಲೆನಿಯರ್ನಲ್ಲಿ ಭಾರತವನ್ನು ಚಿತ್ರಿಸಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ  ಅದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳಬೇಕಾಗಿಲ್ಲ. ಅದನ್ನು ಚಿತ್ರವಾಗಿಯಷ್ಟೇ ನೋಡಬೇಕು ಏಕೆಂದರೆ ಆ ಸಿನಿಮಾ ಇಡೀ ಭಾರತದ ಚಿತ್ರಣ ನೀಡುವುದಿಲ್ಲ. ಆ ಚಿತ್ರದಲ್ಲಿ ಚಿತ್ರಿಸಿರುವುದಕ್ಕಿಂತ ಭಾರತ ಹೆಚ್ಚು  ವೈವಿಧ್ಯಮಯ ಮತ್ತು ಸಂಕೀರ್ಣವಾಗಿಯೂ  ಇದೆ ಎಂದರು ನಿಲೇಕಣಿ.

ಕಾರ್ಯಕ್ರಮದ ನಂತರ, ತಾವು ಕೊಂಡ ಪುಸ್ತಕದಲ್ಲಿ ಅವರಿಬ್ಬರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಎರಡು ಉದ್ದದ ಸಾಲುಗಳಲ್ಲಿ ನಿಂತಿದ್ದರು. ನನ್ನ ಸರದಿಯಲ್ಲಿ ಫ್ರೀಡ್ಮನ್ ಅವರಿಗೆ ವಿಜಿಟಿಂಗ್ ನೀಡಿ ಪರಿಚಯಿಸಿಕೊಂಡೆ. ಮುಗುಳ್ನಕ್ಕು, ಹಾಯ್ ನೈಸ್ ಮೀಟಿಂಗ್ ಯೂ ಅಂದರು. ದೊಡ್ಡ  ಅಂಕಣಕಾರ,ಲೇಖಕ, ಪತ್ರಕರ್ತನ ಜತೆ ಏನು ಮಾತನಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪುಸ್ತಕದಲ್ಲಿ ಸುಮ್ಮನೆ ಸಹಿ ಹಾಕಿಕೊಡುತ್ತಾರೆ ಎಂದು ಎಣಿಸಿದ್ದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದುದಷ್ಟೇ ಅಲ್ಲದೆ ಅವರು ಹೇಳಿದ ವಿಷಯಗಳನ್ನು ಅವರವರ ವಿಜಿಟಿಂಗ್ ಕಾರ್ಡ್ನಲ್ಲಿ ದಾಖಲಿಸಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ಜಾಗವಿಲ್ಲದ ವಿಜಿಟಿಂಗ್ ಕಾರ್ಡ್ಗಳ ಮೂಲೆಮೂಲೆಗಳಲ್ಲೂ ಬರೆದುಕೊಳ್ಳುತ್ತಿದ್ದರು.  ನೂಯಾರ್ಕ್ಟೈಮ್ಸ್ನ ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ ಅಂದೆ. ವೆರಿಮಚ್ ಅಪ್ರಿಷಿಯೇಟೆಡ್ ಅಂದರು. ಸೋ.., ಎಂದು ಮಾತು ಮುಂದುವರಿಸುವಂತೆ ಸೂಚಿಸಿದರು. ಹಣಕಾಸು ಹಿಂಜರಿತದ ಸಮಯದಲ್ಲಿ ಬೇಲೌಟ್(ಪಾರುಗಾಣಿಕೆ) ಬಗ್ಗೆ ನೀವು ತಳೆದಿದ್ದ ನಿಲುವು ನನಗೆ ತುಂಬ ಇಷ್ಟವಾಯಿತು ಎಂದೆ. ಹೇಗೆ ಎಂಬಂತೆ ನೋಡಿದರು. ಉತ್ತಮ ಶಕ್ತಿಯುತ ಸೋಲಾರ್ ಕಾರುಗಳನ್ನು ಸಂಶೋಸಲು ಹಣ ವಿನಿಯೋಗಿಸುವ ಬದಲು ಔಟ್ಡೇಟೆಡ್ ಆಗುತ್ತಿರುವ ಕಾರುಗಳನ್ನು ತಯಾರಿಸುವ ಕಂಪನಿಗಳಿಗೆ ಹಣದ ನೆರವು (ಪಾರುಗಾಣಿಕೆ)ನೀಡುವುದು ಡಿವಿಡಿಗಳು ಔಟ್ಡೇಟೆಡ್ ಆಗುವಾಗ ಕ್ಯಾಸೆಟ್ ತಯಾರಿಕೆಗೆ ಹಣ ಕೊಟ್ಟಂತೆ ಎಂಬ ನಿಮ್ಮ ಅಭಿಪ್ರಾಯದ ಹಿಂದಿನ ಲಾಜಿಕ್ ತುಂಬಾ ಚನ್ನಾಗಿದೆ ಎಂದು ಹೇಳಿದೆ. ಥ್ಯಾಂಕ್ಯು, ಥ್ಯಾಂಕ್ಯು ವೆರಿಮಚ್ ಅಂದು ನನ್ನ ವಿಜಿಟಿಂಗ್ ಕಾರ್ಡ್ ಮೇಲೆ ಏನನ್ನೋ ಗೀಚಿಕೊಂಡರು. ಗಂಭೀರವಾಗಿ ಮಾತನಾಡುತ್ತಲೇ ಆಟೋಗ್ರಾಫ್ ಹಾಕಿಕೊಟ್ಟು ಇನ್ನೊಬ್ಬರನ್ನು ಸ್ವಾಗತಿಸುವಂತೆ ಆ ಕಡೆ ನಗೆ ಬೀರಿದರು.

೨೨ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

ಭಾರತಕ್ಕೊಂದು ಪಾರುಗಾಣಿಕೆ ನೀತಿ ಬೇಕೆ?

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ಅರ್ಥಕೋಶಕ್ಕೆ ಜಾಗತೀಕರಣದ ತೀರಾ ಇತ್ತೀಚಿನ ಕೊಡುಗೆ ಪಾರುಗಾಣಿಕೆ (ಬೇಲ್ಔಟ್) ಎಂಬ ಪದ. ಬೇಲ್ಔಟ್ಗೆ ಕನ್ನಡದಲ್ಲಿ ಇತ್ತೀಚಿಗೆ ನಾವೇ ಕಂಡುಕೊಂಡಿರುವ ಪದ ಪಾರುಗಾಣಿಕೆ. ಕಂಪನಿ ಅಥವಾ ವ್ಯವಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಆ ಸ್ಥಿತಿಯಿಂದ ಮೇಲೆತ್ತಲು ಅಥವಾ ಪಾರುಮಾಡಲು ಸರಕಾರಗಳು ಕೊಡುವ ಕಾಣಿಕೆಯೇ ಈ ಪಾರುಗಾಣಿಕೆ. ವ್ಯವಸ್ಥೆಯೊಂದರ ಅಭಿವೃದ್ಧಿಗೆ ಸರಕಾರ ಘೋಷಿಸುತ್ತಿದ್ದ ಪ್ರೋತ್ಸಾಹಕರ ನೀತಿಗಳನ್ನು, ಇಂಥ ಉದ್ಯಮಕ್ಕೆ ಸರಕಾರ ಉತ್ತೇಜಕ ಕ್ರಮಗಳನ್ನು ಕೈಗೊಂಡಿದೆ ಎಂದು  ಈವರೆವಿಗೂ  ಹೇಳಲಾಗುತ್ತಿತ್ತು. ಈ ಎಲ್ಲ ಉತ್ತೇಜಕ ಕ್ರಮಗಳು ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ಲಾಭ ತಂದುಕೊಡುತ್ತಿರಲಿಲ್ಲ. ಬದಲಾಗಿ ಆಯಾ ಕ್ಷೇತ್ರದ ಎಲ್ಲ ರೀತಿಯ ಬೃಹತ್ ಮತ್ತು ಸಣ್ಣ ಉದ್ಯಮಗಳಿಗೆ ನೆರವಾಗುತ್ತಿದ್ದವು.

ಅಮೆರಿಕ, ಬ್ರಿಟನ್, ಚೀನಾ, ರಷ್ಯಾ,ಫ್ರಾನ್ಸ್ ಮತ್ತು ಜಪಾನ್ ಮುಂತಾದ  ಮುಂದುವರಿದ ರಾಷ್ಟ್ರಗಳು ಕಂಪನಿ ಹಾಗೂ ನಿರ್ದಿಷ್ಟ ಉದ್ಯಮದ ಕಂಪನಿಗಳ ಸಮೂಹಕ್ಕೆ ಈ ಪಾರುಗಾಣಿಕೆ ಪ್ಯಾಕೇಜ್ ನೀಡುವ ಪರಿಪಾಠವನ್ನು ಬಹಳ ಹಿಂದಿನಿಂದಲೇ ಇಟ್ಟುಕೊಂಡಿವೆ. ಪ್ರಸ್ತುತ ಆರ್ಥಿಕ ಕುಸಿತದಲ್ಲಿ ಅಮೆರಿಕ ಮಾಡುತ್ತಿರುವುದೂ ಇದನ್ನೆ. ಸತ್ಯಂಗೆ ಪಾರುಗಾಣಿಕೆ ಇಲ್ಲ ಎಂದು ಸರಕಾರ ಎರಡೆರಡು ಬಾರಿ ಹೇಳಿದೆಯಾದರೂ ಅದನ್ನು ಪೂರ್ಣ ನಂಬುವಂತಿಲ್ಲ. ಸತ್ಯಂ ಹಗರಣ ಕೇವಲ ಸಂಕೇತ ಮಾತ್ರ. ಮುಂದೆ ಇಂತಹ ಪರಿಸ್ಥಿತಿಗಳು ಬೇಕಾದಷ್ಟು ಬರಬಹುದು.

ಭಾರತಕ್ಕಿಂತ ಹತ್ತಾರು ಪಟ್ಟು ಹೆಚ್ಚು ಸದೃಢ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕದಂಥ ದೇಶದಲ್ಲೇ ಈಗ ಪಾರುಗಾಣಿಕೆ (ಬೇಲ್ಔಟ್) ಬಗ್ಗೆ ಅಪಸ್ವರಗಳು ಏಳುತ್ತಿವೆ. ಬಂಡವಾಳಶಾಹಿಗಳ ವಕ್ತಾರರು ಎಂಬ ಆಪಾದನೆ ಹೊತ್ತುಕೊಂಡಿರುವ ಅಮೆರಿಕದ ಹೆಸರಾಂತ ಆರ್ಥಶಾಸ್ತ್ರಜ್ಞ ಪಾಲ್ಕ್ರುಗ್ಮನ್ ಮತ್ತು ಪತ್ರಕರ್ತ ಥಾಮಸ್ ಫ್ರೀಡ್ಮನ್ ಅಂಥವರೂ ಕೂಡಾ ಈಗ ಪಾರುಗಾಣಿಕೆ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಾರುಗಾಣಿಕೆ ವ್ಯಾಖ್ಯಾನಕ್ಕೆ ಬೇರೆಯದೇ ಅರ್ಥವ್ಯಾಪ್ತಿಯ ಅನಿವಾರ್ಯತೆ ಇದೆ ಎನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭಾರತದಂಥ  ಮುಂದುವರಿಯುತ್ತಿರುವ ದೇಶ ಪಾರುಗಾಣಿಕೆ ಬಗ್ಗೆ ಯೋಚಿಸುವುದು ಎಷ್ಟು ಸರಿ? 

ಬಹುಸಂಖ್ಯಾತರ ಸುಖಗಳನ್ನು ಕಿತ್ತುಕೊಂಡು ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ, ತಣಿಸಲೆಂದೇ ಇರುವ ಕಂಪನಿಗಳ ಸಿಇಒಗಳಂತಿರುವ ರಾಜಕಾರಣಿ/ಅಕಾರಿ/ಅಕಾರೇತರ ವರ್ಗ ಆಧುನಿಕ ಭಾರತದಲ್ಲಿ ಅನೇಕ ಮಂದಿ ಸಿಗುತ್ತಾರೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಸುತ್ತಿದ್ದ ಕೆಲವೇ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದ್ದ ಸತ್ಯಂನ ಮೀಸೆ ಮಣ್ಣಾಗುವುದರೊಂದಿಗೆ ಭಾರತದಲ್ಲಿ ಬಹು ಚರ್ಚೆಯಾಗುತ್ತಿರುವುದು ಈ ಪಾರುಗಾಣಿಕೆ ಕುರಿತದ್ದೇ. ಸತ್ಯಂನಂಥ ಕಂಪನಿಗಳು ಮಾಡಿಕೊಂಡ ಅವಾಂತರದಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಘಾಸಿ ಈ ಪಾರುಗಾಣಿಕೆಯಿಂದ ಖಂಡಿತಾ ಸರಿಹೋಗುವುದಿಲ್ಲ. ಇದು ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಿಕ್ಕೀತೇ? ಎಂಬಂತೆ.

ಐಟಿ ಜಗತ್ತು ಸಮಗ್ರ ಜನಜೀವನವನ್ನು ಅಸ್ತವ್ಯಸ್ತ ಮಾಡುವಷ್ಟು ಪ್ರಭಾವವನ್ನು ಭಾರತದಲ್ಲಿ ಇನ್ನೂ ಹರಡಿಲ್ಲ. ಹಾಗಾಗಿ ಅದು ಎಲ್ಲರ ಅಳಿವು -ಉಳಿವೇನಲ್ಲ. ಇಲ್ಲಿನ ಜನರ ನೀರು, ಭೂಮಿ ಕಬಳಿಸಿ ಅವರನ್ನು ಅತಂತ್ರರನ್ನಾಗಿಸಿ ವಿದೇಶಿ ವಿನಿಮಯದ ಕಾರಣಕ್ಕೆ ರೂಪಾಯಿಗೆ ಒಂದಷ್ಟು ಬೆಲೆ ತಂದುಕೊಟ್ಟಿರುವುದೇ ದೇಶಕ್ಕೆ ಆಗಿರುವ ಲಾಭ. ಇದೇ ಮಂದಿ ರೂಪಾಯಿ ದುರ್ಬಲಗೊಂಡರೆ ಕುಣಿದು ಕುಪ್ಪಳಿಸುತ್ತಾರೆ. ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿಗೆ ಸ್ವಲ್ಪ ಕಿಮ್ಮತ್ತು ಬಂದರೂ ತಮ್ಮ ಲಾಭಾಂಶಕ್ಕೆ ಹೊಡೆತ ಅಂತ ನೆಲಮುಗಿಲು ಒಂದಾಗುವಂತೆ ಬಡಬಡಿಸುತ್ತಾರೆ.  ಹತ್ತಾರು ವರ್ಷಗಳಿಂದ ಇಲ್ಲಿ ಒಪ್ಪೊತ್ತಿಗೆ ಅನ್ನವಿಲ್ಲದೆ, ಕೆಲಸಕ್ಕೆ ಸರಿಯಾದ ಕೂಲಿಯಿಲ್ಲದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಈ ದರಿದ್ರ ಸರಕಾರಗಳಿಗೆ ಅನ್ನದಾತನನ್ನು ಪಾರು ಮಾಡುವ ಯಾವ ಪಾರುಗಾಣಿಕೆ ಉಪಾಯಗಳೂ ಹೊಳೆದಿಲ್ಲ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾವಿರಾರು ರೈತರ ಕಲ್ಯಾಣಕ್ಕೆ ಒಂದು ಸಮಗ್ರ ಪ್ಯಾಕೇಜ್ ನೀಡಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಸೂರಿಲ್ಲದೆ, ನೀರಿಲ್ಲದೆ, ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದು ಬದುಕುತ್ತಿರುವವರ ಮಕ್ಕಳು ಶಾಲೆಗೆ ಹೋಗಲು ಮೈಲುಗಟ್ಟಲೆ ಕೆಟ್ಟ ರಸ್ತೆಯಲ್ಲಿ ನಡೆಯಬೇಕು. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಇದೇ ರಸ್ತೆಯಲ್ಲಿ ಹೊತ್ತೊಯ್ಯಬೇಕು. ಆದರೆ ತಮ್ಮ ಹವಾನಿಯಂತ್ರಿತ ಕಾರುಗಳು ಓಡಾಡಲು ರಸ್ತೆಯ ಒಂದು ತಿರುವಿನಲ್ಲಿ ಒಂದು ಬಿರುಕು ಬಿಟ್ಟಿದ್ದರೂ ಸರಕಾರ ಸರಿಯಾದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ಕೂಗಾಡಿ ಬೇರೆ ರಾಜ್ಯ/ದೇಶಕ್ಕೆ  ಹೋಗುತ್ತೇವೆಂದು ಬೆದರಿಕೆಯೊಡ್ಡುತ್ತಲೇ ವ್ಯವಹರಿಸುವ ಐಟಿ-ಬಿಟಿ ಮಂದಿಯನ್ನು ಪಾರು ಮಾಡುವುದು ಹೇಗೆಂಬ ಚರ್ಚೆಗಳು ಸತ್ಯಂ ಪತನದ ಕಾರಣದಿಂದ ಮುಗಿಲು ಮುಟ್ಟಿವೆ. ಸತ್ಯಂ ಹುಳುಕು ಹೊರಬಿದ್ದು ತಿಂಗಳೂ ಕಳೆದಿಲ್ಲ ಆಗಲೇ ಅವರನ್ನು ಮೇಲೆತ್ತಲು ಜನರ ತೆರಿಗೆ ಹಣವನ್ನು ಸುರಿಯಬೇಕೆಂದು ಕೆಲ ರಾಜಕಾರಣಿ-ಅಕಾರಿ ದಲ್ಲಾಳಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಪೂರ್ಣಪ್ರಮಾಣದ ದಿನಗೂಲಿಯೂ ಸಿಗದೆ ದೇಶದ ಶೇಕಡಾ ೭೦ರಷ್ಟು ಮಂದಿ ಒದ್ದಾಡುತ್ತಿರುವಾಗ, ಲಕ್ಷಗಳಲ್ಲಿ ಸಂಬಳ ಎಣಿಸಿಕೊಂಡು ಐಷಾರಾಮಿ ಜೀವನ ನಡೆಸಿದ ಕೆಲವೇ ಸಾವಿರ ಮಂದಿ ಬಗ್ಗೆ ಇಷ್ಟೊಂದು ತೀವ್ರವಾಗಿ ಸ್ಪಂದಿಸುತ್ತಿರುವವರಿಗೆ ದೇಶದ ಬೆನ್ನೆಲುಬಾದ ಲಕ್ಷ, ಲಕ್ಷ ಜನರ ಗೋಳು ಮಾತ್ರ ‘ದಿನಾ ಸಾಯುವವರಿಗೆ ಅಳುವವರ್ಯಾರು?’ ಎನ್ನುವಂತಹದ್ದು. ಅಷ್ಟಾಗಿಯೂ, ಅವನು ಕೊಟ್ಟ ಹಣದಿಂದಲೇ ಈ ಐಷಾರಾಮಿಗಳನ್ನು ಉಳಿಸಬೇಕಿರುವ ವಿಪರ್ಯಾಸ ನೋಡಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಯಾವಾಗಲೂ ಮೇಲು’ ಹೇಗೆಂದು ಈಗ ಅನೇಕರಿಗೆ ಗೊತ್ತಾಗುತ್ತಿರಬಹುದು.  ಯಾವತ್ತೂ ಕೊಡುತ್ತಿದ್ದ ರೈತ ಕೇಳಲಾರಂಭಿಸಿ ಎಷ್ಟೋ ದಿನಗಳಾಗಿದ್ದರೂ ಅವನತ್ತ ಬೆನ್ನು ತಿರುಗಿಸಿರುವ ಮಂದಿ ಇವತ್ತು ಜಗತ್ತೇ ಮುಳುಗಿ ಹೋಗಿದೆ ಎಂಬಂತೆ ಹುಯಿಲೆಬ್ಬಿಸುತ್ತಿದ್ದಾರೆ. ಸತ್ಯಂಗೆ ಎರಡು ಸಾವಿರ ಕೋಟಿ ರೂಗಳ ಪಾರುಗಾಣಿಕೆ  ನೀಡಬೇಕೆಂಬ ಚರ್ಚೆ ಕಳೆದ ಕೆಲ ವಾರಗಳಿಂದ ನಡೆಯುತ್ತಲೇ ಇದೆ. ಸತ್ಯಂನ ಕುರಿತ ಖ್ಯಾತಿ/ಕುಖ್ಯಾತಿಗೆ ಹೊಣೆ ಯಾರು? ಅದರ ನೆರವಿಗೆ ಸರಕಾರ ಬರಬೇಕೆ? ಬೇಡವೇ ಎಂಬ ಬಗ್ಗೆ ಸಹಜವಾಗಿಯೇ ಆಂಧ್ರದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರ ನಡುವೆ  ಜಟಾಪಟಿ ಜಗಜ್ಜಾಹೀರಾಗಿದೆ. ಇದೇ ವಿಷಯವಾಗಿ ಕೇಂದ್ರದ ಇಬ್ಬರು ಪ್ರಭಾವಿ ಸಚಿವರಾಗಿರುವ ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಪಾರುಗಾಣಿಕೆ ಪ್ರಸ್ತಾವವನ್ನು ವಿರೋಸಿದ್ದಾರೆಂಬ ಸುದ್ದಿ ಬಂದಿದೆ. ಅವರ ಈ ವಿರೋಧದ ಹಿಂದೆ ಮೇಲೆ  ಚರ್ಚಿಸಿರುವ ಅನೇಕ ಸೂಕ್ಷ್ಮಗಳೇ ಇರಬೇಕು. ಇಂಥ ವಿಷಯಗಳ ಬಗ್ಗೆ ಎಂದಿನ ತಮ್ಮ ನಿಧಾನ ತಂತ್ರ ಅನುಸರಿಸುತ್ತಿರುವ ಎಡಪಂಥೀಯರಿಗಂತೂ ಈ ವಿಷಯ ಅಗ್ನಿಪರೀಕ್ಷೆಯೇ ಸರಿ.  ಜನರ ನೀರು, ಭೂಮಿಯನ್ನು ಕಬಳಿಸಿ ಸರಕಾರದ ಮೇಲೆ ಪ್ರಭಾವ ಬೀರಿ ಎಲ್ಲ ಸಂಪನ್ಮೂಲಗಳನ್ನು ತಮ್ಮೆಡೆಗೆ ಬಹಳ ಘನತೆಯಿಂದಲೇ ತಿರುಗಿಸಿಕೊಳ್ಳುವ ಚಾಣಾಕ್ಷ ಐಟಿ-ಬಿಟಿ ಉದ್ಯಮಿಗಳು, ತಾವು ಪಡೆದಿರುವುದಕ್ಕೆ ಪ್ರತಿಯಾಗಿ ಕೊಟ್ಟಿರುವುದು ಏನೂ  ಇಲ್ಲ. ಜನಸಾಮಾನ್ಯರು ಪಟ್ಟಣದಲ್ಲಿ ಜೀವಿಸಲು ಸಾಧ್ಯವಾಗದಷ್ಟು ದುಬಾರಿಗೊಳಿಸಿದ್ದು ಇವರು ಕೊಟ್ಟಿರುವ ಬೃಹತ್ ಕೊಡುಗೆ. ನೂರು ಜನರ ಅನ್ನ, ಭೂಮಿ ಕಿತ್ತುಕೊಂಡು ೧೦ ಜನಕ್ಕೆ ಕೆಲಸ ಕೊಟ್ಟು ಅತಿಯಾದ ಸಂಬಳ ಕೊಟ್ಟರೆ ದೇಶ ಉದ್ಧಾರವಾಗುತ್ತದೆ ಎಂಬ ಭ್ರಮೆ ಹುಟ್ಟಿಸಿ ಸಮಾಜದಲ್ಲಿ ಬೃಹತ್ ಕಂದಕಕ್ಕೆ  ಕಾರಣವಾಗಿರುವ ಅನೇಕರು, ಎಲ್ಲ ಹೋರಾಟಗಳನ್ನು ಹತ್ತಿಕ್ಕಿ ತಮಗೆ ಭೂಮಿ, ನೀರು ಕೊಡುವ ಮುಖ್ಯಮಂತ್ರಿಗಳನ್ನು  ನಂಬರ್ ಒನ್ ಮುಖ್ಯಮಂತ್ರಿ ಎಂದೋ ಇಲ್ಲ ಈತ ಪ್ರಧಾನಿ ಆಗಬೇಕು ಎಂತಲೋ ವಂದಿಮಾಗದರಂತೆ ವದರುವ ಇವರಿಗೆ ಅದೇ ಸಾಮಾನ್ಯನ ತೆರಿಗೆ ಹಣವನ್ನೇ ಏಕೆ ಕೊಡಬೇಕು?

ಇವತ್ತಿಗೂ ತಂತ್ರಜ್ಞಾನವೂ ಸೇರಿದಂತೆ ಇತರೆ ಯಾವುದೇ ಉದ್ಯಮವೂ ಭಾರತದ ಎಲ್ಲರನ್ನೂ ಪ್ರತಿನಿಸುವ ಅವರ ಏಳಿಗೆಗಾಗಿ ಇರುವ ಏಕೈಕ ಪಾರಂಪರಿಕ ರಂಗ ಅಥವ ಸಂಕೇತವೇನಲ್ಲ. ಕಂಪನಿಯೊಂದು ಮಾಡಿಕೊಂಡ ಯಡವಟ್ಟಿಗೆ ಬೇರೆಯವರ ಮೂಗನ್ನೇಕೆ ಕೊಯ್ಯಬೇಕು? ಹಾಗೆಂದು ಸಾವಿರಾರು ಉದ್ಯೋಗಿಗಳ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಗ್ಗೆ  ಅನುಕಂಪ ಖಂಡಿತಾ ಇರಬೇಕು. ಅದರೆ ಅವರ್ಯಾರೂ ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿಲ್ಲವಲ್ಲ. ಅವರೆಲ್ಲ ವೃತ್ತಿ ಪ್ರತಿಭಾವಂತರು. ಬೇಕಾದಷ್ಟು ಅವಕಾಶಗಳೂ ಇವೆ. ಅಲ್ಲಿವರೆಗೆ ಉಪವಾಸ ಬೀಳುವ ಸ್ಥಿತಿಯಂತೂ ಅವರ್ಯಾರಿಗೂ ಇಲ್ಲ.  ಅಣೆಕಟ್ಟೆ ಕಟ್ಟಲು ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ, ಒಂದಿಷ್ಟು ಪರಿಹಾರ ಕೊಟ್ಟು ಪುನರ್ವಸತಿ ಎಂಬ ಹಂದಿಗೂಡುಗಳಂಥ ಜಾಗಕ್ಕೆ ನೂಕುವ ಈ ಅಕಾರಿ-ರಾಜಕಾರಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲವೆ? ತಲೆತಲಾಂತರದಿಂದ ಬಂದ ಎಲ್ಲವನ್ನೂ ಕಳೆದುಕೊಂಡು ದಿನದಿನಕ್ಕೂ ಕಿಮ್ಮತ್ತು ಕಡಿಮೆಯಾಗುವ ದುಡ್ಡು ತೆಗೆದುಕೊಂಡು  ಈಗಾಗಲೇ ಊರು ತೊರೆದವರ ಸಂಕಷ್ಟಗಳಿಗೆ ಈ ಮಂದಿ ಸ್ಪಂದಿಸಿದ್ದಾರೆಯೇ?. ಇಷ್ಟೆಲ್ಲದರ ಹೊರತಾಗಿಯೂ ತಾನು ಲಾಭ ಗಳಿಸುವಾಗ ಮೂರು ತಿಂಗಳಿಗೊಮ್ಮೆ, ಅವು ದೇಶದ ಜಿಡಿಪಿ ಅಂಕಿ -ಅಂಶಗಳೇನೋ ಎಂಬಂತೆ ವರದಿಗಳನ್ನು ಮಾಧ್ಯಮಕ್ಕೆ ತಲುಪಿಸುವ ಐಟಿ-ಬಿಟಿ ಮಂದಿ, ಅದರ ಶೇಕಡಾ ಒಂದರಷ್ಟನ್ನಾದರೂ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದಾರೆಯೇ? ಹತ್ತಾರು ವರ್ಷಗಳ ತೆರಿಗೆ ರಿಯಾಯಿತಿ ಪಡೆದು ಹಣ ಮಾಡುವಾಗ ಯಾರನ್ನೂ ದರಕರಿಸದ ಇವರನ್ನು ಜನರ ಹಣದಿಂದ ಏಕೆ ಉಳಿಸಬೇಕು? ಸತ್ಯಂಗೆ ಪಾರುಗಾಣಿಕೆ ನೀಡುವುದೇ ನಿಜವೇ ಆದರೆ ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆಯಷ್ಟೇ ಅಲ್ಲದೆ ಜನವಿರೋ ಹಾಗೂ ಜನತಂತ್ರವಿರೋ ಕೂಡಾ. ಪ್ರಪಂಚದಲ್ಲಿ ಆಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದ ಈಗ ಐಟಿ ಸೇರಿದಂತೆ ಎಲ್ಲ ಉದ್ಯಮಗಳೂ ಸಂಕಷ್ಟದಲ್ಲಿವೆ. ಹಾಗಾಗಿ ಯಾವುದೋ ಒಂದು ವಲಯದ ಒಂದು ಕಂಪನಿಗೆ ಪಾರುಗಾಣಿಕೆ ನೀಡುವ ಬದಲು ಇಡೀ ಉದ್ಯಮ ವಲಯಕ್ಕೆ ಅನುಕೂಲವಾಗುವಂಥ ಸಮಗ್ರ ಸುಧಾರಣಾ ಕ್ರಮ ಕೈಗೊಂಡರೆ ಒಳ್ಳೆಯ ಫಲ ದೊರೆಯಬಹುದು.

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ರಾಜಕೀಯ ವ್ಯವಸ್ಥೆ, ಮುಂದುವರಿದ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಗಿಂತ ಪೂರ್ಣ ಭಿನ್ನ. ಅದರಲ್ಲೂ ಭಾರತದಂಥ ದೇಶದಲ್ಲಿ ಬಹುಸಂಸ್ಕೃತಿಯ ಬೃಹತ್ ಪ್ರಜಾಪ್ರಭುತ್ವವಿದ್ದರೂ ಜಾತಿ, ಧರ್ಮದ ಆಧಾರದ ಮೇಲೇ ಇನ್ನೂ ಪ್ರಭಾವ ಉಳಿದುಕೊಂಡಿರುವ ಸ್ವಜನಪಕ್ಷಪಾತ, ಭ್ರಷ್ಟ  ವ್ಯವಸ್ಥೆ ತುಂಬಿ ತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ತಮಗೆ ಬೇಕಾದವರಿಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಪಾರುಗಾಣಿಕೆ ಹಂಚುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹಾಗಾಗಿಯೇ ಪಾರುಗಾಣಿಕೆ ಭಾರತದ ಮಟ್ಟಿಗೆ ನಿಜವಾಗಿಯೂ ಸೋಂಕು.

೧೮ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

ಲಂಕೆಗೊಂದು ಲಂಘನ


ಶ್ರೀಲಂಕಾ, ಭಾರತ ಮಾತೆ ಸುರಿಸಿದ ಒಂದು ಕಣ್ಣೀರ ಹನಿ. ಇದು ಯಾರಿಗೆ ಹೊಳೆದ ಅದ್ಭುತವೋ ಗೊತ್ತಿಲ್ಲ. ಶ್ರೀಲಂಕಾದ ಭೂಪಟವನ್ನು ನೋಡಿದರೆ ಹಾಗನಿಸುತ್ತದೆ. ಭಾರತ ಮಾತೆ ಸಂತೋಷಕ್ಕೊ, ದುಃಖಕ್ಕೋ ಸುರಿಸಿದ ಕಣ್ಣೀರಿನಿಂದ ಶ್ರೀಲಂಕಾ ಉದಿಸಿದೆ ಎಂಬ ಒಂದು ಅಂಶವೇ ಲಂಕಾದ ಬಗೆಗೆ ಭಾರತೀಯರಿಗೆ ಎಂಥದೋ ಒಂದು ಸಂಬಂಧ ಏರ್ಪಡಿಸುತ್ತದೆ. ಜಗತ್ತಿಗೆ ಮೊದಲ ಮಹಿಳಾ ಪ್ರಧಾನಿಯನ್ನು ಕೊಟ್ಟ ದೇಶದ ಭೂಪಟಕ್ಕೆ ಈ ಕಲ್ಪನೆ ಕೊಟ್ಟ ಮಹಾತ್ಮನಿಗೆ ಒಂದು ನಮಸ್ಕಾರ.

ಅಂತರಿಕ ಸಮಸ್ಯೆ ಜತೆಗೆ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿರುವ ದೇಶವೊಂದರ ಸ್ಥಿತಿ ಹಣಕಾಸು ಹಿಂಜರಿತದ ಸಮಯದಲ್ಲಿ ಹೇಗಾಗಬಹುದು ಎಂಬುದಕ್ಕೆ ಶ್ರೀಲಂಕಾ ಈಗ ಅತ್ಯುತ್ತಮ ಉದಾಹರಣೆಯಂತಿದೆ. ಹಣಕಾಸು ಹಿಂಜರಿತದ ತೀವ್ರ ಪರಿಣಾಮಗಳು ಲಂಕಾದ ತುಂಬ ಕಾಣುತ್ತವೆ. ಬಣ ಬಣ ಎನ್ನುವ ಹೋಟೆಲ್, ರೆಸಾರ್ಟ್ಗಳು, ಬೀಚ್ಗಳು ಪ್ರವಾಸಿಗರ ಕೊರತೆಯಿಂದ ನಲುಗುತ್ತಿವೆ. ಹಾಗಾಗಿ ಯಾವುದೆ ಹೋಟೆಲ್, ರೆಸಾರ್ಟ್ಗೆ ಹೋದರೂ ಅಲ್ಲಿನ ಊಟೋಪಚಾರ ಅಷ್ಟಕ್ಕಷ್ಟೆ. ಅಷ್ಟೇಕೆ ನಾವು ಉಳಿದುಕೊಂಡಿದ್ದ ಕೊಲಂಬೊದಲ್ಲಿರುವ ಭಾರತದ  ಹೆಸರಾಂತ ಪಂಚತಾರಾ ಹೋಟೆಲ್ನಲ್ಲೂ ಊಟ,ತಿಂಡಿ ಎಲ್ಲವೂ ಸಪ್ಪೆ,ಸಪ್ಪೆ. ಹೆಚ್ಚೇನೂ ಆಯ್ಕೆಗೆ ಅವಕಾಶವಿರದಂಥ ಸರಳ ಊಟ. ಪಂಚತಾರಾ ಹೋಟೆಲ್ ಊಟ ಅಂದರೆ ಇಷ್ಟೇನಾ ಎನ್ನುವಷ್ಟು.

ಸೈನಿಕರ ಗಸ್ತು: ಪ್ರವಾಸಿಗಳ ಕುಸಿತಕ್ಕೆ ಲಂಕೆಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ವ್ಯಾಪಕ ಪರಿಣಾಮ ಬೀರಿದೆ ಎನಿಸುತ್ತದೆ. ಹೆಜ್ಜೆ ಹೆಜ್ಜೆಗೂ ತಪಾಸಣೆ ಅದೂ ಕೂಗಳತೆ ದೂರದಲ್ಲೇ ಎರಡೆರಡು ಬಾರಿ. ಪ್ರತಿ ಬಾರಿಯೂ ವಾಹನದಿಂದ ಕೆಳಗಿಳಿದು ಎಲ್ಲ ವರದಿ ಒಪ್ಪಿಸಿದ ನಂತರವೇ ಮುಂದಕ್ಕೆ ಹೋಗಬೇಕು. ನಾಗರಿಕರ ನಡುವೆಯೇ ಆಧುನಿಕ ಬಂದೂಕುಗಳನ್ನು ಹಿಡಿದ ಯುವ ಸೈನಿಕರು ಎಲ್ಲೆಂದರಲ್ಲಿ  ಕಣ್ಣಿಗೆ ಬೀಳುತ್ತಾರೆ. ಈ ಪರಿಯ ಭದ್ರತೆ ಬಗ್ಗೆ ಟಿವಿಗಳಲ್ಲಿ ನೋಡಿ, ಪತ್ರಿಕೆಗಳಿಲ್ಲಿ ಓದಿದ್ದ ನಮಗೆ ಬಿಗಿ ಭದ್ರತೆ ಎಂದರೇನು ಅಂದು ಗೊತ್ತಾದದ್ದು ಲಂಕಾದ ರಾಜಧಾನಿ ಕೊಲಂಬೊದಲ್ಲಿ.

ಲಂಕೆಯ ಸೈನಿಕರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಅಲ್ಲಿ ಸೈನ್ಯಕ್ಕೆ ಸೇರಲು ಕನಿಷ್ಠ ವಯೋಮಿತಿ ೧೫ ವರ್ಷ. ಸೇನೆಗೆ ಸೇರುವುದು ಕಡ್ಡಾಯವಲ್ಲದಿದ್ದರೂ ಕಾಲೇಜಿನಲ್ಲಿ ಕಲಿಯಬೇಕಾದ ವಯಸ್ಸಿನಲ್ಲಿ ಗನ್ ಹಿಡಿದು ದೇಶಸೇವೆ ಮಾಡುತ್ತಿದ್ದ, ಗಂಭಿರ ಹಸನ್ಮುಖಿಗಳಂತೆ ಕಾಣುತ್ತಿದ್ದ ಅವರನ್ನು ನೋಡಿದರೆ ನಾವೆಲ್ಲ ಎಷ್ಟು ಪುಣ್ಯವಂತರು ಅನಿಸುತ್ತಿತ್ತು. ನಾವು ಕಂಡ ಬಹುತೇಕ ಸೈನಿಕರ ವಯಸ್ಸು ೨೫ ವರ್ಷ ದಾಟಿರಲಿಲ್ಲ. ಕೆಲವರಂತೂ ಗಂಟೆಗಟ್ಟಲೆ ಒಂದೇ ಕಡೆ ನಿಲ್ಲಬೇಕಾಗಿದೆ. ಅವರ ಹೆಗಲ ಮೇಲೆ ದೊಡ್ಡ ಬಂದೂಕು. ಅದರ ತೂಕ ಎಷ್ಟೋ? ಹೆದ್ದಾರಿಗಳಲ್ಲಿ ಮರಳು ತುಂಬಿದ ಚೀಲಗಳ ಕೋಟೆ ಕಟ್ಟಿಕೊಂಡು ನಡುವೆ ಗನ್ ಹಿಡಿದು ಸೆಟೆದುಕೊಂಡಿದ್ದರೂ ಸ್ಥಿತಪ್ರಜ್ಞರಂತಿದ್ದ ಆ ಯುವ ಸಯನಿಕರು ಹುಟ್ಟುಸಿದ ಭಾವನೆಗಳು ನೂರಾರು. ಬಂದೂಕು ಹಿಡಿದು ಶಿಫ್ಟ್ಗಳಲ್ಲಿ ಹಗಲಿರುಳೆನ್ನದೆ ಜನರ ರಕ್ಷಣೆಗೆ ನಿಲ್ಲುವ ಜಗತ್ತಿನ ಎಲ್ಲ ಸೈನಿಕರಿಗೂ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದೆಂಬ ಭಾವ ಮೂಡಿತು.

ಬಿಗಿ ಭದ್ರತೆ: ಪೋರ್ಚುಗೀಸರು, ಅರಬರು ಮತ್ತು ಇಂಗ್ಲಿಷರ ಆಡಳಿತಕ್ಕೆ ಒಳಗಾಗಿದ್ದ  ಶ್ರೀಲಂಕಾ ಸ್ವತಂತ್ರಗೊಂಡಿದ್ದು ೧೯೪೮ನೇ ಇಸವಿ ಫೆಬ್ರವರಿ ೪ರಂದು. ನಮ್ಮ ತಂಡ ಕೊಲಂಬೊದಲ್ಲಿದ್ದ ದಿನ (ಜನವರಿ.೨೦) ಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ೧೪ ದಿನ ಉಳಿದಿತ್ತು. ಅದಕ್ಕಾಗಿ ತಾಜ್ ಸಮುದ್ರ ಹೋಟೆಲ್ನ ಪಕ್ಕದಲ್ಲಿ ಬೀಚ್ಗೆ ಎದುರಾಗಿ ಭರ್ಜರಿ ಸಭಾಂಗಣದ ನಿರ್ಮಾಣವೂ ನಡೆಯುತ್ತಿತ್ತು. ಇಪ್ಪತ್ತರ ಬೆಳಗ್ಗೆ ನಾವು ತಾಜ್ ಹೋಟೆಲ್ನ ಮುಂದಿರುವ ಕಣ್ಣುಕುಕ್ಕುವಂತಿದ್ದ ಸುಮಾರು ೨ ಕಿಲೋಮೀಟರ್ ಉದ್ದದ ಕಡಲ ದಂಡೆಯ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಗಮನಿಸುತ್ತಿದ್ದ ಸೈನಿಕರು ನಮ್ಮೆಡೆಯೇ ದೃಷ್ಟಿ ನೆಟ್ಟಿದ್ದರು. ಕೆಲವರು ನಾಗರಿಕರ ವೇಷದಲ್ಲಿದ್ದರು. ಸೈನಿಕರ ಫೋಟೊ ತೆಗೆಯುವುದು ಬೇಡ ಎಂಬ ಸೂಚನೆ  ಕೊಡಲಾಗಿತ್ತು. ಬಿಗಿ ಭದ್ರತೆ ಕಾರಣದಿಂದ ನಮ್ಮ ಬೆಂಗಳೂರಿನ ಸಣ್ಣ ಪಾರ್ಕೊಂದರಲ್ಲಿ ವಾಕ್ ಮಾಡುವಷ್ಟು ಜನರೂ ಅಲ್ಲಿರಲಿಲ್ಲ.  ವಾಕ್ ಮುಗಿಸಿ ಮರಳುವಾಗ ನಾವು ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಪ್ರತಿಮೆಯೊಂದರ ಫೋಟೊ ತೆಗೆದುಕೊಂಡು ಅದೇ ಬದಿಯಿಂದ ಹೊಟೇಲ್ ಕಡೆ ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಬರುತ್ತಿದ್ದೆವು. ಇದ್ದಕ್ಕಿದ್ದಂತೆ ನಾಲ್ಕೈದು ಪೊಲೀಸರು ಮತ್ತು ಸೈನಿಕರಿದ್ದ  ತಂಡ ನಮ್ಮನ್ನು ಸುತ್ತುವರಿಯಿತು. ಪ್ರಶ್ನೆಗಳ ಮಳೆ ಸುರಿಸಿತು. ನಾವು ಪಂಚತಾರಾ ಹೋಟೆಲ್ನ ಅತಿಥಿಗಳು, ಮಾಧ್ಯಮದವರು ಎಂದೆವು. ಪಾಕಿಸ್ತಾನದವರಾ ಎಂದ ಒಬ್ಬ. ಭಾರತೀಯರು ಎಂದೆವು. ಇನ್ನೊಬ್ಬ ತಮಿಳಾ ಎಂದ. ನಾವು ಬೆಂಗಳೂರಿನವರು ಎಂದೆವು. ನಗುಮೊಗದಿಂದ ನಮ್ಮನ್ನು ರಸ್ತೆಯ ಇನ್ನೊಂದು ಬದಿಯಿಂದ ಹೋಟೆಲ್ಗೆ ಹೋಗುವಂತೆ ಸೂಚಿಸಿ ದಾರಿ ಬಿಡಲಾಯಿತು. ಆ ಕಡೆ ಅಧ್ಯಕ್ಷರದೂ, ಪ್ರಧಾನಿಯದೋ ನಿವಾಸ ಇದೆ ಎಂದು ಯಾರೋ ಗೊಣಗಿದರು. ಅಂದು ರಾತ್ರಿ ಊಟವಾದ ನಂತರ ಒಂದು ರೌಂಡ್ ಬೀಚ್ನಲ್ಲಿ ಸುತ್ತೋಣ ಎನಿಸಿ ಹೋಟೆಲ್ ಕಾಂಪೌಂಡ್ನ ಬಳಿ ಬಂದೆವು. ಹೋಟೆಲ್ನ ಎರಡೂ ಬದಿ ನಿಂತು ಕಾವಲು ಕಾಯುತ್ತಿದ್ದ ಸೈನಿಕರು ನಮ್ಮನ್ನು ಹೊರಬಿಡಲು ಸುತಾರಾಂ ಒಪ್ಪಲಿಲ್ಲ. ಅದಕ್ಕಾಗಿ ದೇಶದ ಉತ್ತರ ಭಾಗವಾದ ಜಾಫ್ನಾದಲ್ಲಿ ಎಲ್ಟಿಟಿಇ ಗೆರಿಲ್ಲಾಗಳೊಂದಿಗೆ ನಡೆಯುತ್ತಿದ್ದ ನಿರ್ಣಾಯಕ ಸಮರದ ಪರಿಣಾಮ ಭದ್ರತೆ ತುಸು ಅತಿ ಎನಿಸುವಷ್ಟಿತ್ತು.

ಸಹಜ ಸುಂದರಿ ಕೊಲಂಬೊ: ಬಹುಪಾಲು ವೃತ್ತಗಳಲ್ಲಿ ಬುದ್ಧನ ಮುಗುಳ್ನಗೆಯ ಮೂರ್ತಿ, ಯಾವುದೋ ಒಂದು ವೃತ್ತದಲ್ಲಿ ಗಣಪತಿ, ಮತ್ತೊಂದು ಸರ್ಕಲ್ನಲ್ಲಿ ವೀಣಾಪಾಣಿ ಸ್ನಿಗ್ಧ ಸೌಂದರ್ಯದ ಸರಸ್ವತಿ ವಿಗ್ರಹ. ಮುಗಿಲನ್ನು ಚುಂಬಿಸುವಂತಿದ್ದ ಎತ್ತರದ ಗೋಪುರ ಹೊಂದಿದ್ದ ನಮ್ಮ ಶ್ರೀರಂಗಪಟ್ಟಣ, ಹಂಪಿ ದೇವಸ್ಥಾನಗಳನ್ನು ನೆನಪಿಸುತ್ತಿದ್ದ ಗೋಪುರಗಳ ದೇವಸ್ಥಾನಗಳು. ಅಷ್ಟೇನೂ ಜನಸಂದಣಿಯಿಲ್ಲದ ಕಿರಿದಾದ ರಸ್ತೆಗಳ ಕಾರಣಕ್ಕೆ ಟ್ರಾಫಿಕ್ಕು. ಮಂಗಳೂರಿನಂಥ ಹವೆ. ಹೆಜ್ಜೆ ಹೆಜ್ಜೆಗೂ ಕಾಣುವ ಟರ್ಫ್ ಕ್ಲಬ್ಗಳ ಅಕೌಂಟೆಂಟ್ ಕಚೇರಿಗಳು, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಪೀಪಲ್ಸ್ ಬ್ಯಾಂಕ್ನ ಶಾಖಾ ಕಚೇರಿಗಳು. ಪೀಪಲ್ಸ್ ಬ್ಯಾಂಕ್ ಶ್ರೀಲಂಕಾದ ಮುಖ್ಯ ಸಂಕೇತಗಳಲ್ಲಿ ಒಂದು. ಕೊಲಂಬೊದಲ್ಲಿ ಶಾಪಿಂಗ್ ಎಂದರೆ ತಟ್ಟನೆ ಎಲ್ಲರೂ ಹೇಳುವ ಹೆಸರು ಹೌಸ್ ಆಫ್ ಫ್ಯಾಷನ್. ಬೆಂಗಳೂರಿನ ಒಂದು ಸಣ್ಣ ಮಾಲ್ನಂತಿರುವ ಹೌಸ್ ಆಫ್ ಫ್ಯಾಷನ್ ತುಂಬ ಪ್ರಸಿದ್ಧ. ಐದು ಅಂತಸ್ತಿನ ಈ ಪುಟ್ಟ ಕಟ್ಟಡದಲ್ಲಿ ಕಿರಾಣಿ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ಅದರಲ್ಲೂ ಬಟ್ಟೆಗಳು ಹೆಚ್ಚು ಸಿಗುತ್ತವೆ. ಹೆಂಗಸರು, ಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೂ ಪ್ರತ್ಯೇಕ ವಿಭಾಗದ ಮಳಿಗೆಗಳಿವೆ. ಇದು ಕೊಲಂಬೊದ ವೈಶಿಷ್ಟ್ಯ.

ಬೀಚ್ಗಳ ತವರು ಬೆಂಟೋಟಾ: ಲಂಕಾ ಪ್ರಕೃತಿ ಸೌಂದರ್ಯದ ಖನಿ. ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಈ ಪುಟ್ಟ ದ್ವೀಪ ಒಂಬತ್ತು ಪ್ರಾಂತ್ಯಗಳುಳ್ಳ ೨೫ ಜಿಲ್ಲೆಗಳನ್ನು ಹೊಂದಿದೆ. ಕರ್ನಾಟಕದ ಮೂರನೇ ಒಂದು ಭಾಗದಷ್ಟಿರುವ ಲಂಕಾದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸಿಗಿರಿಯಾ, ಕ್ಯಾಂಡಿ, ಅನುರಾಧಾಪುರ, ಪೋಲನ್ನರುವಾ, ದಂಬುಲ್ಲಾ, ಕಟರಗಾಮಾ, ಶ್ರೀಪಾದ ಎಂಬ ಏಳು ಸ್ಥಳಗಳಿವೆ. ನಮ್ಮ ಪ್ರವಾಸ ಕಾಲದಲ್ಲಿ ಯಾವುದೇ ವಿಶ್ವಪರಂಪರೆಯ ತಾಣಕ್ಕೆ ಭೇಟಿ ನೀಡಲಿಲ್ಲವಾದರೂ ಬೆಂಟೋಟಾ ಎಂಬ ಸುಂದರ ದ್ವೀಪಗಳ ಗುಚ್ಚದಲ್ಲಿ ವಿಹರಿಸಿದೆವು. ಬೆಂಟೋಟಾ ಕೊಲಂಬೊ ಮತ್ತು ದಕ್ಷಿಣಕ್ಕಿರುವ ಗಾಲೇ ಪಟ್ಟಣಗಳನ್ನು ಸೇರಿಸುವ ಸಮುದ್ರದ ದಂಡೆಯಲ್ಲೇ ಹಾದು ಹೋಗುವ ಹೆದ್ದಾರಿಯಲ್ಲಿದೆ. ಸುಮಾರು ೬೫ ಕಿಲೋಮೀಟರ್ನ ಈ ಅಂತರದಲ್ಲಿ ಹೆಚ್ಚು ಕಡಿಮೆ ಇಕ್ಕೆಲಗಳಲ್ಲಿ ಮನೆಗಳ ನಡುವೆಯೇ ರಸ್ತೆ ಹಾದುಹೋಗುತ್ತದೆ. ಹಾಗಾಗಿ ಸಮುದ್ರದ ದರ್ಶನವಾಗುವುದು ಅಲ್ಲಲ್ಲಿ ಮಾತ್ರ. ಎಕರೆಗಳ ಲೆಕ್ಕದಲ್ಲಿರುವ ನೂರಾರು ದ್ವೀಪಗಳನ್ನು ಸುತ್ತುವರಿದಿರುವ ಹಿನ್ನೀರಿನಲ್ಲಿ ವಿದ್ಯುಚ್ಚಾಲಿತ ದೋಣಿಗಳಲ್ಲಿ ಸಂಚರಿಸುವುದೇ ರೋಚಕ ಅನುಭವ. ಕಡಲ ಹಿನ್ನೀರಿನಲ್ಲಿ ಕಣ್ಣಿಗೆ ಕಾಣುವ ಮೊಸಳೆಗಳ ಹಿಂಡು, ದಡಕ್ಕೆ ಹೊಂದಿಕೊಂಡಿರುವ ತುಂಬಾ ವ್ಯವಸ್ಥಿತವಾಗಿ ಒಪ್ಪವಾಗಿರುವ ರೆಸಾರ್ಟ್ಗಳು, ಹೋಟೆಲ್ಗಳು, ಒಂದೊಂದೇ ಸಂಸಾರಗಳಿರುವ ಕೆಲ ದ್ವೀಪಗಳಿವೆ. ಅಲ್ಲಿರುವ ಹೇರಳ ಮಸಾಲೆಯ ಚೆಕ್ಕೆ ಮರಗಳಿಂದ ಚೆಕ್ಕೆ, ಎಣ್ಣೆ ಬೇರ್ಪಡಿಸಿ ಮಾರುವ ಅಂಥ ಒಂದು ಮನೆಗೆ ನಾವು ಭೇಟಿ ನೀಡಿದ್ದೆವು.
ವ್ಯತ್ಯಾಸವಿಲ್ಲ: ಕೃಷಿಯಂತೆ ಮೀನುಗಾರಿಕೆಯನ್ನು ನಂಬಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಲಂಕೆಯಲ್ಲಿದ್ದಾರೆ. ಪ್ರವಾಸೋದ್ಯಮ ಮತ್ತು ರಫ್ತು ಕುಸಿದರೆ ನೇರ ಪರಿಣಾಮ, ಹೋಟೆಲ್, ಮೀನುಗಾರಿಕೆ ಮೇಲಾಗುತ್ತದೆ. ಅದನ್ನೇ ನಾವು ಲಂಕೆಯಲ್ಲಿ ಹೆಚ್ಚು ಕಂಡೆವು. ಚಹಾ ಲಂಕೆಯಲ್ಲಿ ಬಹು ಸ್ವಾದಗಳಲ್ಲಿ ಸಿಗುತ್ತದೆ. ಟೀ ಪ್ರಿಯರಿಗಂತೂ ಅದು ಆಡಂಬೋಲವೇ ಸರಿ. ಗುಣಮಟ್ಟ ಮತ್ತು ಸ್ವಾದಗಳನ್ನು ಆಧರಿಸಿ ಹತ್ತಾರು ಬಗೆಯ ಸಂಸ್ಕರಿಸಿ ಮಾಡಿದ ಚಹಾ ಎಲೆಗಳ ಡಬ್ಬಗಳ ಪ್ಯಾಕ್ ಸಿಗುತ್ತದೆ. ಸ್ಥಳೀಯ ಪರಂಪರೆ ಸಾರುವ ಮರದ ಕೆತ್ತನೆಗಳು ಹೇರಳವಾಗಿ ಸಿಗುತ್ತವೆ. ಆನೆ, ಬೌದ್ಧ ಹಾಗೂ ಹಿಂದೂ ದೇವರುಗಳ ಸುಂದರ ಮುಖವಾಡಗಳು ಸಿಗುತ್ತವೆ. ಭಾರತದ ಒಂದು ರೂಪಾಯಿಗೆ ಸಧ್ಯಕ್ಕೆ ಶ್ರೀಲಂಕಾದ ಎರಡು ರೂಪಾಯಿ ಇಪ್ಪತ್ತು ಪೈಸೆ ಸಿಗುತ್ತದೆ. ಆ ಲೆಕ್ಕದಲ್ಲಿ ಬೆಲೆಗಳಲ್ಲಿ ಭಾರತ-ಲಂಕಾಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಸಮದ್ರ ದಂಡೆ ಭರ್ತಿ ತೆಂಗಿನಿಂದ ತುಂಬಿದೆ. ಇದರ ಹೊರತು ಟೀ ತೋಟಗಳು, ಮಳೆಕಾಡುಗಳು, ಅಮೂಲ್ಯ ಮರಗಳು ಮತ್ತು ಕಾಡುಪ್ರಾಣಿಗಳಿಂದ ತುಂಬಿರುವ ಶ್ರೀಲಂಕಾ ನಮ್ಮ ಮಲೆನಾಡಿನಂತೆ ಸ್ಪಚ್ಚಂದ ಹಸಿರಿನಿಂದ ಕಂಗೊಳಿಸುತ್ತದೆ. ದೇಶದ ಶೇಕಡ ೨೫ರಷ್ಟು ಭಾಗ ಕಾಡುಪ್ರಾಣಿಗಳದೇ ಸಾಮ್ರಾಜ್ಯ ಭಾರತ ಹಾಗೂ ಶ್ರೀಲಂಕಾಗಳ ನಡುವೆ ರಾಮಾಯಣ ಸೇರಿ ಅನೇಕ ಪೌರಾಣಿಕ ಮತ್ತು ಭೌಗೋಳಿಕ ಸಂಬಂಧಗಳ ಗುಚ್ಚವೇ ಇದೆ. ಈ ಎಲ್ಲ ಕಾರಣಗಳಿಂದಲೋ ಏನೋ ಶ್ರೀಲಂಕಾ ಅನ್ಯ ದೇಶ ಎಂದು ಅನಿಸುವುದೇ ಇಲ್ಲ. ನಮ್ಮ ಮತ್ತು ಅವರ ಆಹಾರ, ಉಡುಗೆ - ತೊಡುಗೆಗಳಲ್ಲಿ ಅಷ್ಟು ವ್ಯತ್ಯಾಸವಿಲ್ಲ. ಜನ ಕೂಡ ಮೃದು ಸ್ವಭಾವದವರು ಎನಿಸುತ್ತದೆ. ವಿಜ್ಞಾನ- ತಂತ್ರಜ್ಞಾನಗಳ ವಿಷಯಗಳು ಅಲ್ಲಿನ್ನೂ ವ್ಯಾಪಕವಾಗಿಲ್ಲ. ಹಾಗಾಗಿ ಕೊಲಂಬೋ ನೋಡಿದರೆ ಹತ್ತು ವರ್ಷಗಳ ಹಿಂದಿನ ಬೆಂಗಳೂರು ನೋಡಿದಂತೆ ಅನಿಸುತ್ತದೆ. ಹಾಗಾಗಿಯೇ ಪ್ರವಾಸಿಗರಿಗೆ ಅದರಲ್ಲೂ ನವ ದಂಪತಿಗಳಿಗೆ ಲಂಕಾ ಸ್ವರ್ಗದಂತಿದೆ.

ತೆಂಗು ಮತ್ತು ಲಂಕನ್ನರು: ಲಂಕಾದ ಮುಖ್ಯ ಬೆಳೆ ಚಹಾ, ತೆಂಗು, ಭತ್ತ ಮತ್ತು ರಬ್ಬರ್ . ಲಂಕನ್ನರು ತೆಂಗಿಗೆ ತುಂಬಾ ಮಹತ್ವ ಕೊಡುತ್ತಾರೆ. ಆ ಮಹತ್ವ ಹೇಳುವ ಒಂದು ಕಥೆಯನ್ನು ಶ್ರೀಲಂಕಾದಲ್ಲಿ ನಮ್ಮ ಪತ್ರಕರ್ತರ ತಂಡವನ್ನು ಸುತ್ತಿಸಿದ ಹೆಸರಾಂತ ಪ್ರವಾಸಿ ಸಂಸೆ ಎಯ್ಟ್ಕೆನ್ ಸ್ಪೆನ್ಸ್ನ  ಮುಖ್ಯಅಕಾರಿ ಪ್ರಶಾಂತ್ ದಿಸೆನಾಯಕೆ ಹೇಳಿದರು. ಒಮ್ಮೆ ಅನೇಕ ದೇಶಗಳ ಮುಖ್ಯಸ್ಥರ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿದ್ದ ಅನೇಕ ನಾಯಕರು ತಮ್ಮ ತಮ್ಮ ದೇಶಗಳ ವಿಜ್ಞಾನಿಗಳ ಕೌಶಲ ಮತ್ತು ಪ್ರತಿಭೆಯನ್ನು ಹೊಗಳುತ್ತಿದ್ದರು. ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ವಿಜ್ಞಾನಿಗಳು ಸೂಪರ್ ಕಂಪ್ಯೂಟರ್ ಕಂಡುಹಿಡಿದು ಅದನ್ನು ಅನೇಕ ಶಾರೀರಕ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲು ಬಳಸುತ್ತಿರುವ ಬಗ್ಗೆ ಹೇಳಿದರು. ಫ್ರಾನ್ಸ್ನವರೂ ಕೂಡ ತಮ್ಮ ವಿಜ್ಞಾನಿಗಳು ರೋಬೋಟ್ಗಳಿಂದಲೇ ನಿತ್ಯದ ಅನೇಕ ಕೆಲಸ ನಿರ್ವಹಿಸುವ ವ್ಯವಸ್ಥೆ ರೂಪಿಸಿರುವುದಾಗಿ ಹೇಳಿಕೊಂಡರು. ಭಾರತದ ಪ್ರಧಾನಿಗಳು ತಮ್ಮ ದೇಶದ ವಿಜ್ಞಾನಿಗಳು ಕಾಲಿಲ್ಲದೆ ಹುಟ್ಟಿದ್ದ ಮಗುವಿಗೆ ಯಶಸ್ವಿಯಾಗಿ ಕಾಲು ಜೋಡಿಸಿದ್ದು ಆ ಮಗು ಮುಂದೆ ಒಲಂಪಿಕ್ಸ್ನ ಓಟದ ಸ್ಪರ್ಧೆಯಲ್ಲಿ  ಭಾಗವಹಿಸಲು ತಯಾರಿ ನಡೆಸುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ಸರದಿ ಬಂದಾಗ ಲಂಕಾದ ಅಧ್ಯಕ್ಷರು ಹೇಳಿದ್ದು: ನಮ್ಮ ದೇಶದಲ್ಲೂ ಒಂದು ಹೆಣ್ಣು ಮಗು ಹುಟ್ಟಿತ್ತು ಅದಕ್ಕೆ ಮೆದುಳು ಇರಲಿಲ್ಲ. ಆ ಮೆದುಳಿನ ಜಾಗಕ್ಕೆ ತೆಂಗಿನಕಾಯಿಯನ್ನು ಕೂಡಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾದರು, ಮುಂದೆ ಆ ಮಗು ಶ್ರೀಲಂಕಾದ ಅಧ್ಯಕ್ಷೆಯಾಯಿತು.


೧ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.