ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 18 July 2011

ಮಕ್ಕಳಿಗೆ ಜಾತಿ, ಧರ್ಮಗಳ ಹಂಗು, ಹೊರೆ ಬೇಡ

 ಕಳೆದ ವಾರ ನಮ್ಮ ಹಿರಿಯ ಅಂಕಣಕಾರರಲ್ಲೊಬ್ಬರಾದ ಚಂದ್ರಶೇಖರ ಪಾಟೀಲರು, ಅವರ ಬುಧವಾರದ ಅಂಕಣದಲ್ಲಿ, ಕರ್ನಾಟಕವನ್ನು ಗುಜರಾತ್ ಆಗಿಯೂ, ಬಾಬಾ ಬುಡನ್ ಗಿರಿಯನ್ನು ಅಯೋಧ್ಯೆಯನ್ನಾಗಿಯೂ ಮಾಡುವ ಬಿಜೆಪಿ ಕನವರಿಕೆಯ ಮಾತುಗಳನ್ನು ಪ್ರಸ್ತಾಪಿಸಿ ಕುಟುಕಿದ್ದರು. ಅದರ ಪ್ರತಿಫಲವೆಂಬಂತೆ  ಕೋಲಾರದಲ್ಲಿ ಗುಡುಗಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಗವದ್ಗೀತೆ ಮಾತು ತೆಗೆದು, ಅದರ ಅಭಿಯಾನವನ್ನು ವಿರೋಸುವವರು ದೇಶ ಬಿಟ್ಟು ತೊಲಗಬೇಕೆಂದು ಹೇಳಿ ತಮ್ಮ ‘ಸೌಮ್ಯ’ ಮುಖವಾಡವನ್ನು ಕಳಚಿದ್ದಾರೆ. ಈ ಹಿಂದ ಪತ್ರಕರ್ತರನ್ನು ಸಮುದ್ರಕ್ಕೆ ಎಸೆಯಬೇಕೆಂದು ಗಂಡೂರಾವ್ ಅವರು ನೀಡಿದ್ದ ಹೇಳಿಕೆ ಏಕೋ ನೆನಪಾಯಿತು. ಇದು ಪ್ರಶ್ನಿಸುವವರನ್ನು ಸಹಿಸದ ಮನಸ್ಥಿತಿಯ ಸಂಕೇತ. ಇದನ್ನೇ ನಾವು ಇನ್ನೊಂದು ಅರ್ಥದಲ್ಲಿ ‘ಯಜಮಾನಿಕೆಯ ಹಮ್ಮು’ ಎಂದು ಕರೆಯಬಹುದು.

 ಸಚಿವರ ಹೇಳಿಕೆ ಹಿಂದೆ ಇನ್ನೊಂದು ಹುನ್ನಾರವೂ ಇರಬಹುದು, ಅದೆಂದರೆ ತಮ್ಮದೇ ಹೇಳಿಕೆಯಿಂದ ಉಂಟಾಗಿದ್ದ  ಇಂಗ್ಲಿಷ್- ಕನ್ನಡ ಕುರಿತ ಚರ್ಚೆಯ ದಿಕ್ಕನ್ನು ಬದಲಿಸಲು ಭಗವದ್ಗೀತೆಯನ್ನು ಬಳಸಿಕೊಂಡಿರಬಹುದು ಆಥವಾ ಟೀಕೆಗಳ ಸುರಿಮಳೆಯಲ್ಲಿ ನೆನೆಯುತ್ತಿರುವ ಸರಕಾರದ ವಿರುದ್ಧದ ಸಿಟ್ಟಿನ ವಿಷಯಾಂತರವೂ ಇರಬಹುದು. ಈ ಭಗವದ್ಗೀತೆ ಕುರಿತ ಕಾಗೇರಿಯವರ ಹೇಳಿಕೆಯನ್ನು ಬಿಜೆಪಿ ಅರ್ಧಯಕ್ಷರಾದ ಈಶ್ವರಪ್ಪ  ಅವರು ಶುಕ್ರವಾರ ಹುಬ್ಬಳ್ಳಿಯಲ್ಲಿ ಅನುಮೋದಿಸುವದರೊಂದಿಗೆ ಸಚಿವರ ನಿಲುವು ಮತ್ತು ಪಕ್ಷದ ನಿಲುವುಗಳು ಒಂದೇ ಎಂಬುದು ಸಾಬೀತಾಗಿದೆ. ಆದರೆ ವಾಸ್ತವವಾಗಿ ಸಚಿವರು ಹೇಳಿದ್ದು ಮೂಲತಃ ಪಕ್ಷದ ನಿಲುವೇ ಆಗಿತ್ತು ಎಂಬುದಕ್ಕೆ ಒತ್ತು ಕೊಡುತ್ತಾ, ಈ ಹೇಳಿಕೆಯನ್ನು ಪಕ್ಷ ಕೊಟ್ಟಿದ್ದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿರಲಿಲ್ಲ. ಏಕೆಂದರೆ ಸಚಿವರು ಕೇವಲ ಪಕ್ಷವನ್ನು ಪ್ರತಿನಿಸುವುದಿಲ್ಲ. ಅವರು ಸಂವಿಧಾನದ ಚೌಕಟ್ಟಿನಲ್ಲಿ ಪಕ್ಷಕ್ಕಿಂತ ಖಂಡಿತ ದೊಡ್ಡವರು. ಅವರು ಪ್ರತಿನಿಸುತ್ತಿರುವುದು ಬಿಜೆಪಿ ಕಾರ್ಯಕರ್ತರನ್ನಲ್ಲ, ಬದಲಿಗೆ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯನ್ನು. ಇದರ ಗಂಭೀರ ಅರಿವು ಶಿಕ್ಷಣ ಸಚಿವರಾದ ಕಾಗೇರಿಯವರಿಗೆ ಇರಬೇಕಿತ್ತು. ಆದ್ದರಿಂದಲೇ ಅನೇಕ ಪ್ರಾಜ್ಞರು ಅವರ ಮೇಲೆ ಮತ್ತೊಮ್ಮೆ ಮುಗಿಬಿದ್ದಿದ್ದಾರೆ.

 ಕೋಲಾರದಲ್ಲಿ ಪ್ರಗತಿಪರ ಸಂಘಟನೆಗಳು ಈ ಹಿಂದೆ ಇದೇ ಭಗವದ್ಗೀತೆ ಹೇರುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಅದೇ ನೆಲದಲ್ಲಿ ಶಿಕ್ಷಣ ಸಚಿವರು ಅವರೆಲ್ಲರಿಗೂ ಉತ್ತರ ಕೊಟ್ಟಿದ್ದಾರೆ.  ಸಚಿವರಾಗಿ ಅವರು ನೀಡಿರುವ ಹೇಳಿಕೆಯ ತರತಮವನ್ನು  ಒಂದು ಉದಾಹರಣೆ ಮೂಲಕ ನೋಡಬಹುದು. ಹೇಗೆಂದರೆ, ಆಯೋಧ್ಯ ವಿಷಯದಲ್ಲಿ ಬಿಜೆಪಿ ಪಕ್ಷವಾಗಿ ಗುಟುರು ಹಾಕಿದಂತೆ ಅಕಾರಕ್ಕೆ ಬಂದಾಗ ಮಾತನಾಡಲಿಲ್ಲ. ಏಕೆಂದರೆ ಅದು ಮೈತ್ರಿಕೂಟ ಧರ್ಮಕ್ಕೆ ವಿರುದ್ಧವಾದದ್ದೆಂಬ ನಿಲುವನ್ನು ಅಂದು ಆ ಪಕ್ಷದ ಪ್ರಮುಖ ನಾಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ ಆಡ್ವಾಣಿಯವರಿಂದ ಹೇಳಿಸಿ ಎಲ್ಲರ ಬಾಯಿ ಮುಚ್ಚಿಸಲಾಗಿತ್ತು. ಇಲ್ಲಿ ಅದಕ್ಕೆ ತದ್ವಿರುದ್ದ. ಕಾರಣ ಇಲ್ಲಿ ಪಕ್ಷವೊಂದೇ ಅಕಾರ ನಡೆಸುತ್ತಿದೆ. ಬಿಜೆಪಿ ಏಕೈಕ ಅಕಾರರೂಢ ಪಕ್ಷವಾಗಿ ಹೊರ ಹೊಮ್ಮಲು  ಈ ಮೂರು ವರ್ಷಗಳಲ್ಲಿ ಆಡಿದ ಎಲ್ಲ ಆಟಗಳನ್ನೂ ಜನ ಬಲ್ಲರು. ಹಾಗೆಂದು ಅದು ಅಸಂವಿಧಾನಿಕವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ನಾವೆಲ್ಲ ಬೆಂಬಲಿಸಬೇಕಿಲ್ಲ.

ಕಾಗೇರಿಯವರು ತಮ್ಮ ಪರಿವಾರದವರಿಗೆ ಈ ಕಟ್ಟಪ್ಪಣೆ ವಿಸಿ ದಕ್ಕಿಸಿಕೊಳ್ಳಬಹುದೇನೋ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದು, ಸಚಿವರಾಗಿ ಅವರ ನಡೆ ಮತ್ತು ನುಡಿ, ಈ ವಿಷಯವಾಗಿ ಸಂಫೂರ್ಣವಾಗಿ ಅಸಂವಿಧಾನಿಕ. ಇದನ್ನೇ ಎಲ್ಲರೂ ಕಟು ಶಬ್ಧಗಳಲ್ಲಿ ಖಂಡಿಸುತ್ತಿರುವುದು. ಮಕ್ಕಳೆಲ್ಲ ಹೊರಲಾರದ ಪಠ್ಯಪುಸ್ತಕಗಳು ಮತ್ತು ಮನೆಗೆಲಸಗಳ ನಡುವೆ ನಲುಗುತ್ತಿದ್ದರೆ ಅವರಿಗೆ ಭಗವದ್ಗೀತೆ ಆಭಿಯಾವೆಂಬ ಇನ್ನೊಂದು ಹೊರೆ ಏಕೆ?. ಇಷ್ಟಾಗಿಯೂ ಮಕ್ಕಳೆಲ್ಲಾ ಒಂದೇ ಧರ್ಮದವರು/ಜಾತಿಯವರು ಶಾಲೆಗೆ ಬರುತ್ತಾರೆಯೇ? ಸಾಧ್ಯವಾದರೆ ಮಕ್ಕಳಗೆ ಎಲ್ಲ ಧರ್ಮಗಳ ಸಾರವನ್ನು ಹೇಳಬೇಕು ಇದರಲ್ಲಿ ವ್ಯತ್ಯಾಸವಿರಬಾರದು. ಯಾವುದೇ ಧರ್ಮದ ವಿಚಾರಗಳನ್ನು ಜಾತಿ/ಧರ್ಮದ ಹಂಗಿಲ್ಲದ ಮಕ್ಕಳ ಮೇಲೆ ಹೇರುವುದು ಸರಿಯೇ? ಹಾಗೆಯೇ ಮಕ್ಕಳನ್ನು ಬರಿ ಶಿಕ್ಷಣದ ಕಡೆಗಷ್ಟೇ ಗಮನ ಹರಿಸಲು ಸಾಧ್ಯವಾಗುವಂತೆ ಅವರ ಪಾಡಿಗೆ ಅವರನ್ನು ಬಿಡುವುದು ಒಳ್ಳೆಯದು.

ಯಾವುದೂ  ಒಂದು ಧರ್ಮ ಆಥವಾ ಆ ಧರ್ಮದ ಗ್ರಂಥ ಶ್ರೇಷ್ಠವೆಂದು ಹೇಳುವುದು ಅದರಲ್ಲೂ ಮಕ್ಕಳ ಮಟ್ಟದಲ್ಲಿ ಅದನ್ನು ಪರಿಚಯಿಸುವುದು ಸರ್ವಾತಾ ಮಾನ್ಯವಲ್ಲ. ಇಲ್ಲದಿದ್ದರೆ ಈ ಹಿಂದೆ, ವಾಜಪೇಯಿ ಸರಕಾರ ಪೋಕ್ರಾನ್ ಅಣು ಪರೀಕ್ಷೆ ನಡೆಸಿದಾಗ ಲಂಕೆಶ್ ಅವರು ಹೇಳಿದ ‘ಎಲ್ಲ ಬಿಟ್ಟು ಮಗ ಭಂಗಿ ನೆಟ್ಟ’ ಎಂಬಂತಾಗುತ್ತದೆ. ಇಷ್ಟಾಗಿಯೂ ಒಳ್ಳೆಯ ಮಂತ್ರಿಗಳಲ್ಲಿ ಒಬ್ಬರೆಂದು ಹೆಸರು ಪಡೆದಿರುವ ಕಾಗೇರಿಯವರು ಸುಪ್ರೀಂ ಕೋರ್ಟ್ನಲ್ಲಿರುವ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮಗಳ ವಿಷಯವಾಗಿ ಹೆಚ್ಚು ಗಮನ ಹರಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡ್ಯೊಯ್ಯವಂತಾದರೆ ಎಲ್ಲ ಕನ್ನಡಿಗರಿಗೆ ಸಂತಸವಾಗುತ್ತದೆ.