ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Saturday 26 June 2010

ಈ ಬಾರಿಯಾದರೂ ನಾವೇ ಗೆಲ್ಲೋಣ !

ಕಳೆದ ನಾಲ್ಕೂವರೆ ವರ್ಷಗಳಿಂದ ಸಮಸ್ಯೆಗಳ ಪರಿಹಾರಕ್ಕೆ ನಮ್ಮನ್ನು ಅಲೆಸಿದವರು, ನಮ್ಮ ಎಲ್ಲ ಸಮಸ್ಯೆ ಪರಿಹರಿಸುತ್ತೇವೆಂದು ಈಗ ನಮ್ಮ ಬಳಿಗೇ ಬರುತ್ತಿದ್ದಾರೆ. ಮತ್ತೆ ಚುನಾವಣೆ ಬಂದಿದೆ.

ಕಳೆದ ಚುನಾವಣೆ ವೇಳೆ ನಡುಮಧ್ಯಾಹ್ನ  ನಮ್ಮ ಮನೆಗೆ ಬಂದದ್ದು, ನಾವು ಸೌಜನ್ಯದಿಂದ ಹಾಸಿದ ಗೊತ ಗೊತ ನಾರುವ ಕಂಬಳಿ ಮೇಲೆ ದೇಶಾವರಿ ನಗೆ ಬೀರುತ್ತ ಕುಳಿತದ್ದು, ಕೊಟ್ಟ ಬೆಲ್ಲದ ಪಾನಕವನ್ನು ಅಮೃತವೆಂಬಂತೆ ಕುಡಿದದ್ದು, ಚುನಾವಣೆ ಮುಗಿಯುವವರೆಗೆ ರಾತ್ರೋರಾತ್ರಿ ನಮ್ಮ ಕೇರಿಗೆ ತಮ್ಮ ಪಟಾಲಂನೊಂದಿಗೆ ಬರುತ್ತಿದ್ದುದು, ಅರ್ಧ ಹೊಟ್ಟೆಗೆ ಊಟ ಮಾಡಿ ಮಲಗಿದ್ದ  ಮಗುವಿನ ಕೆನ್ನೆ ಚಿವುಟಿದ್ದು, ವಯಸ್ಸಾದ ಕಣ್ಣು ಕಾಣದ ಅಪ್ಪ/ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ್ದು, ಎಲ್ಲವನ್ನೂ ಮತ್ತೆ ಪುನರಾವರ್ತಿಸುತ್ತಾ ನಮ್ಮ ಹೆಸರಿಡಿದು ಕರೆಯುತ್ತಾ, ನಾವು ಇನ್ನೈದು ವರ್ಷ ಅದೇ ರೋಮಾಂಚನ, ಭ್ರಾಂತಿಗಳಲ್ಲಿರುವಂತೆ ಮಾಡುವ ಮಾಂತ್ರಿಕರು ನಮ್ಮ ಮುಂದೆ ಮತ್ತೊಮ್ಮೆ ನಡು ಬಗ್ಗಿಸಿ ನಿಲ್ಲಲು ಬರುತ್ತಿದ್ದಾರೆ.

ನಮ್ಮನ್ನು ಹೇಗೆ ಪರವಶ ಮಾಡಿಕೊಳ್ಳಬೇಕೆಂಬುದು ಆ ಗುಮ್ಮನಗುಸುಕರಿಗೆ  ಚೆನ್ನಾಗಿ ಗೊತ್ತು. ಅವರ ನಿರೀಕ್ಷೆಗಳನ್ನು ನಾವು ಎಂದೂ ಹುಸಿ ಮಾಡಿಲ್ಲ. ಹಾಗಾಗಿಯೇ ಅವರಿಗೆ ನಮ್ಮ ಮೇಲೆ ಅಪಾರ ಭರವಸೆ. ನಮ್ಮಷ್ಟು ಭಾವುಕ, ನಿಯತ್ತಿನವರು ಸಿಕ್ಕಿದ್ದರಿಂದಲೇ ಪ್ರತಿ ಬಾರಿಯೂ ಅವರು ಗೆಲ್ಲುತ್ತಲೇ ಇದ್ದಾರೆ. ನಾವು ಸೋಲುತ್ತಲೇ ಇದ್ದೇವೆ. ಈ ಬಾರಿಯಾದರೂ ತಲೆ ತಲಾಂತರದಿಂದ ನಮ್ಮನ್ನು ಯಾಮಾರಿಸುತ್ತ ಬಂದವರ ವಿರುದ್ಧ ಗೆಲ್ಲಬೇಕೆಂಬ ಒಂದು ಯತ್ನ ಮಾಡಬಹುದಲ್ಲವೇ?  ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜಾತಿ/ಧರ್ಮಗಳನ್ನು ಕ್ಕರಿಸಲು ಇದು ಸಕಾಲ. ಜಾತ್ಯತೀತ/ ಧರ್ಮಾತೀತ ಎಂಬ ಸೋಗುಗಳಲ್ಲಿ ಬರುವ ಇವರ್ಯಾರಿಗೂ ಬದ್ಧತೆ ಇಲ್ಲ. ಚುನಾವಣೆ ಮುಗಿದ ಮೇಲೆ ಅವರು ನಮ್ಮನ್ನೇ ದೂರುತ್ತಾರೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೋಲುವವರು ಮಾತ್ರ ಎಂದಿನಂತೆ ನಾವೇ. ನಿಮ್ಮ ಕೆಲಸವನ್ನು ಪುಗಸಟ್ಟೆ ಮಾಡಿಕೊಡಲು ನನಗೇನೂ ಹುಚ್ಚು ನಾಯಿ ಕಚ್ಚಿಲ್ಲ. ಕೋಟಿ ಕೋಟಿ ಸುರಿದಿದ್ದೇನೆ, ಹಣ ಪಡೆಯದೆ ನೀವ್ಯಾರೂ ವೋಟು ಹಾಕಿಲ್ಲ ಎಂಬ ನಿರ್ಲಜ್ಜ  ಮಾತುಗಳೂ ಕಿವಿಗಪ್ಪಳಿಸುತ್ತವೆ.

ಅವರು ಹಂಚುವ ಹೆಂಡಕ್ಕೆ, ಹಣಕ್ಕೆ ಮಾರು ಹೋದವರು ಕನಿಷ್ಠ ಜನರಿರಬಹುದು. ಆದರೆ ಇದೆಲ್ಲವನ್ನೂ ನಮ್ಮ ಹೆಸರೇಳಿಕೊಂಡು ಹಂಚುವವರೂ, ತಲೆ ಹಿಡುಕರಂತೆ ಚುನಾವಣೆ ವೇಳೆ ಎದ್ದು ಕುಳಿತುಕೊಳ್ಳುವ ಏಜೆಂಟರೂ ನಮ್ಮನ್ನು ವಂಚಿಸಲು ಎರಗುತ್ತಾರೆ. ಎಲ್ಲ ನಡೆಯುವುದೂ ಸಮುದಾಯ ಹಿತದ ಹೆಸರಲ್ಲೇ!. ಸಮುದಾಯದ ಅಭಿವೃದ್ಧಿ ಎಂಬ ವಿಶಾಲ ಕಲ್ಪನೆಯನ್ನು ಜಾತಿ/ಧರ್ಮಕ್ಕೆ ಇಳಿಸಿ ಬಹಳ ಕಾಲವಾಯಿತು. ಸಮುದಾಯ ಎಂದರೆ ಜಾತಿ ಎಂಬ ಅರ್ಥವೂ ಈಗ ಹಳೆಯದು. ಈಗೇನಿದ್ದರೂ ಕುಟುಂಬ ಹಿತ. ಅದೇ ದೇಶದ ಹಿತವೂ ಹೌದು! ಈಗ ಯಾವ ಪಕ್ಷಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಎಲ್ಲ ದಾರಿಗಳೂ ಹೆದ್ದಾರಿ ಸೇರುವಂತೆ ಕೊನೆಗೆ ಎಲ್ಲ ಪಕ್ಷಗಳೂ ಅಕಾರದ ರುಚಿ ಕಂಡ ಮೇಲೆ ಒಂದೇ ಎಂಬುದು ಸಾಬೀತಾಗಿದೆ.

ಈಗ ರಾಜಕೀಯವೆಂದರೆ ನಡೆದಿದ್ದೇ ದಾರಿ. ತತ್ತ್ವ ಸಿದ್ಧಾಂತ ಎಂದರೇನು? ಎಂದು ಕೇಳುವ ಬೇಕಾದಷ್ಟು ನಾಯಕರಿದ್ದಾರೆ. ಅಭಿವೃದ್ಧಿ ಎಂಬ ಪದವನ್ನು ವಾಕರಿಕೆ ಬರುವಷ್ಟು ಬಾರಿ ಉಪಯೋಗಿಸಿ ಸವಕಲಾಗಿಸಿರುವವರು ರಾಜಕಾರಣಿಗಳು. ನೈತಿಕತೆ, ಪ್ರಾಮಾಣಿಕತೆ, ತತ್ತ್ವ, ಸಿದ್ಧಾಂತ  ಅಂದರೆ ಯಾವ ಮ್ಯೂಸಿಯಮ್ಮಿನಲ್ಲಿರುವ ವಸ್ತುಗಳು ಎಂದು ಕೇಳಿದರೆ  ಆಶ್ಚರ್ಯವೇನೂ ಇಲ್ಲ. ಇಷ್ಟಾಗಿಯೂ ಇಂಥ ವಿಷಯಗಳ ಮೇಲೆ ಮಾತನಾಡಿದರೆ ವೋಟು ಸಿಗಬಹುದೆಂಬ ಕಾರಣಕ್ಕೆ ಈಗಲೂ ಮೇಲಿನ ಶಬ್ದಗಳನ್ನು ಪಠಿಸುವವರೂ ಇದ್ದಾರೆ. ಗೆದ್ದ ಮೇಲೆ ಇದ್ಯಾವುದಕ್ಕೂ ಅರ್ಥವೇ ಇಲ್ಲ.

ಬದ್ಧತೆ ಕೊರತೆ ಕಾರಣಕ್ಕೆ ೪ ವರ್ಷಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು.  ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳ ಮುಖ್ಯಸ್ಥರು ತಮ್ಮಿಷ್ಟ  ಬಂದಾಗ ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡಿ ಅನಿಶ್ಚಿತತೆಗೆ ದೂಡಿರುವ ಉದಾಹರಣೆಗಳು, ರಾಜ್ಯವೂ ಸೇರಿ ಬೇಕಾದಷ್ಟು ಕಡೆ ಆಗಿವೆ. ಅನಿಶ್ಚಿತತೆಗೆ ಜನರನ್ನು ದೂರುವ ನೈತಿಕತೆ ಯಾರಿಗೂ ಇಲ್ಲ. ಈ ಬಾರಿ ನಿಮ್ಮ ಕದ ತಟ್ಟುವವರು ಅನಿಶ್ಚಿತತೆಗೆ ಅವಕಾಶ ಕೊಡಬೇಡಿ ಎಂದೂ ಹೇಳಬಹುದು. ಅನಿಶ್ಚಿತತೆ ಪ್ರಗತಿಗೆ ಮಾರಕವೇನೋ ಹೌದು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು  ರ್ನಿಷ್ಟ ಪಕ್ಷಕ್ಕೆ ಸೇರಿದವನೆಂಬ ಕಾರಣಕ್ಕೆ ಅಯೋಗ್ಯರನ್ನು ಆಯ್ಕೆ ಮಾಡಬಾರದು. ಅನಿಶ್ಚಿತತೆಯ ಕಾರಣವೇ ಪಕ್ಷವೊಂದನ್ನು ಆರಿಸಲು ಮಾನದಂಡ ಖಂಡಿತ ಅಲ್ಲ. ಇಲ್ಲಿ ವಿವೇಚನೆ ಬಳಸಬೇಕು.

ಈಗಿನ ಚುನಾವಣೆ ಯಾವ ವಿಷಯಗಳ ಆಧಾರದ ಮೇಲೆ ನಡೆಯುತ್ತಿದೆ ಗೊತ್ತೇ? ಯಾವ ಪಕ್ಷಗಳಿಗೂ ಮುಖ್ಯ ಅಜೆಂಡಾವೇ ಇಲ್ಲ. ಅದಕ್ಕಾಗಿಯೇ ಅವರೆಲ್ಲಾ ಟಿವಿ, ಉಚಿತ ವಿದ್ಯುತ್, ಅಗ್ಗದ ಅಕ್ಕಿ ಮುಂತಾದ ಜನಪ್ರಿಯ ಯೋಜನೆಗಳ ಮಾರು ಹೋಗಿದ್ದಾರೆ. ತಮಿಳುನಾಡಿನಲ್ಲಿ ಕಳೆದ ಚುನಾವಣೆಯಲ್ಲಿ ಇದೇ ರೀತಿಯ ಅಗ್ಗದ ಪ್ರಚಾರಕ್ಕಿಳಿದು ಯಶಸ್ವಿಯಾದ ಕರುಣಾನಿ ನಮ್ಮವರನ್ನು ಪ್ರೇರೇಪಿಸಿರಬಹುದು. ಆದರೆ ತಮಿಳುನಾಡು ಈಗ ಎದುರಿಸುತ್ತಿರುವ ವಿದ್ಯುತ್ ಕೊರತೆ ಮತ್ತು ನೀಡಿರುವ ಕಳಪೆ ಟಿವಿಗಳ ಬಗ್ಗೆ ಮಾತ್ರ ಯಾರೂ ಮಾತಾಡುತ್ತಿಲ್ಲ. ಕೊನೆಗೆ ನಮ್ಮ ಹಳ್ಳಿಮಕ್ಕಳಿಗೆ ನೀಡಿರುವ ಸೈಕಲ್ಗಳ ಗುಣಮಟ್ಟವನ್ನಾದರೂ ನಾವು ಪರೀಕ್ಷಿಸಿದ್ದೇವೆಯೇ?

ಮುಖ್ಯ ಪಕ್ಷಗಳ ಈಗಿನ ಪ್ರಣಾಳಿಕೆಗಳು ಜನವಿರೋ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಸಂಪನ್ಮೂಲ ಕ್ರೋಡೀಕರಿಸಿ ಅದನ್ನು ಸಮಗ್ರ ಅಭಿವೃದ್ಧಿಗೆ ಬಳಸುವ ಬದಲು ಇಂಥ ಜನಪ್ರಿಯ ಯೋಜನೆ ಘೋಷಿಸಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲು ಇವರು ಹೊರಟಿರುವಾಗ ಅವರನ್ನು ಬೆಂಬಲಿಸಿದರೆ ಆಮಿಷಗಳಿಗೆ ನಾವೂ ಬಲಿಯಾಗಿದ್ದೇವೆ ಎಂದೇ ಅರ್ಥ.

ವಿವಾದಗಳಿಲ್ಲದ ಹತ್ತಾರು ಅಭಿವೃದ್ಧಿ ವಿಷಯಗಳು ಇದ್ದರೂ ಅವನ್ನು ತಮ್ಮ ಪ್ರಣಾಳಿಕೆಯಲ್ಲಿ ಯಾವ ಪಕ್ಷಗಳು ಸೇರಿಸಿಲ್ಲ. ಕೃಷ್ಣಾ ಕೊಳ್ಳದ ಎ ಸ್ಕೀಂ ಯೋಜನೆಗಳೇ ಕುಂಟುತ್ತಾ ಸಾಗಿರುವಾಗ ಇತ್ತ, ಹತ್ತಾರು ಸಣ್ಣ ನೀರಾವರಿ ಯೋಜನೆಗಳು ದಶಕದಿಂದಲೂ ತಮ್ಮ  ಅಂದಾಜು ವೆಚ್ಚದ ಅನುಪಾತವನ್ನು ಕೆಲ ಭ್ರಷ್ಟ ಅಕಾರಿಗಳ ಶಾಮೀಲಿನೊಂದಿಗೆ ಉಬ್ಬಿಸಿಕೊಳ್ಳುತ್ತಿರುವಾಗ, ಸತತ ನಾಲ್ಕು ವರ್ಷದಿಂದ ರೈಲ್ವೆ ಬಜೆಟ್ನಲ್ಲಿ ಅನ್ಯಾಯವಾಗುತ್ತಾ ನೂರಾರು ಕಿಲೋಮೀಟರ್  ರೈಲು ಹಳಿಗಳ ಕಾಮಗಾರಿ ನನೆಗುದಿಗೆ ಬಿದ್ದು ಅಭಿವೃದ್ಧಿಯ ರೈಲು ಹಿಂದಕ್ಕೋಡುತ್ತಿರುವಾಗ ಇವರು ಸಂತೃಪ್ತ ಜನರಿಗೆ ಬೇಕಾದ ಟೀವಿ, ಅಸಾಧ್ಯ ಬೇಡಿಕೆಯಾದ ಉಚಿತ ವಿದ್ಯುತ್ ಮತ್ತು ಮುಗ್ಗಲು ಅಕ್ಕಿಯ ಆಮಿಷ ತೋರಿಸುತ್ತಿದ್ದಾರೆ.

ಜಾತ್ಯತೀತತೆ ಹೆಸರಲ್ಲಿ ವಂಚಿಸಿದವರು, ಧಾರ್ಮಿಕ ವಿಷಯವಾಗಿ ನಿಮ್ಮನ್ನು  ಕೆರಳಿಸಲು ನೋಡಿದವರು, ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಹೆಸರೇಳಿಕೊಂಡು ಅವರು ಇದ್ದಲ್ಲಿಯೇ ಇರುವಂತೆ ನೋಡಿಕೊಂಡಿರುವವರು ಈಗ ಆ ವಿಷಯ ಕುರಿತು ಮಾತನಾಡುತ್ತಲೇ ಇಲ್ಲ. ಇದು ಖಂಡಿತಾ ಅವರ ಅವಜ್ಞೆಯಲ್ಲ, ಬದಲಾಗಿ ನಮ್ಮನ್ನು ಮುಖ್ಯ ಸಮಸ್ಯೆಗಳಿಂದ ದೂರ ತಿರುಗಿಸಲು ಹೂಡಿರುವ ಆಟ. ಇದು ಹಣ, ತೋಳ್ಬಲಗಳ  ಚುನಾವಣೆ. ಮೊಟ್ಟಮೊದಲ ಬಾರಿಗೆ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಉದ್ದಿಮೆಯಂತೆ ರಾಜಕೀಯವನ್ನು ಪರಿಗಣಿಸಿದವರು ನಮ್ಮ ನಾಯಕರಾಗಲು ಬರುತ್ತಿದ್ದಾರೆ. ಯಾವ ಪಕ್ಷ ಒಳ್ಳೇತನಕ್ಕೆ ಮಣೆ ಹಾಕಿದೆ? ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಳಸಿರುವ ಮಾನದಂಡ ಯಾವುದು? ಅಪ್ಪಟ ಜಾತಿ ಮತ್ತು ಹಣದ ಲೆಕ್ಕಾಚಾರ.

ಇದು ವಿಷಯಗಳಿಲ್ಲದ, ಕೇವಲ ಆಮಿಷಗಳ ಚುನಾವಣೆ. ಅಷ್ಟರಮಟ್ಟಿಗೆ ನಮ್ಮನ್ನು ಅಳೆದು ತೂಗಿರುವ ರಾಜಕೀಯ ಪಕ್ಷಗಳು, ಹಣ ಕೊಟ್ಟುಬಿಟ್ಟರೆ ಏನನ್ನಾದರೂ ಮಾಡಬಹುದು, ನಮ್ಮನ್ನು ಕೊಂಡುಕೊಳ್ಳಬಹುದು ಎಂದು ಲೆಕ್ಕ ಹಾಕಿವೆ. ನಾವು ಯಾವತ್ತಾದರೂ ನಮ್ಮ ಮನೆ ಬಾಗಿಲಿಗೆ ಮತ ಯಾಚಿಸಿ ಬರುವವರ ಮುಂಗೈ ಹಿಡಿದು ಗೆದ್ದು ಬಂದರೆ ಯಾವ ಕೆಲಸ ಮಾಡುತ್ತೀಯ? ಅಥವಾ ಇಂಥ ಕೆಲಸ ಮಾಡಿಕೊಡುವ ಮಾತು ಕೊಡು ಎಂದು ಕೇಳಿದ್ದೇವಾ? ಈಗಂತೂ ಮಾತು ಕೊಟ್ಟು ತಪ್ಪಿಸಿಕೊಳ್ಳುವ ಸಂಪ್ರದಾಯವೇ ಇರುವುದರಿಂದ ಹಾಗೆ ಮಾತು ಕೇಳಿದರೆ ಕೊಡುವವರೂ ಹೆಚ್ಚಾಗಿರಬಹುದೇನೋ! ಹಾಗಾಗಿ ಇದು ಹಿಂದೆಂದೂ ಕಂಡರಿಯದ ಚುನಾವಣೆ ಆಗಲಿದೆ.
ಇವತ್ತು ಈ ಪಕ್ಷ ನಾಳೆ ಇನ್ನೊಂದು ಪಕ್ಷ, ಅಲ್ಲಿ ಟಿಕೆಟ್ ಸಿಗದಿದ್ದರೆ ಮಗದೊಂದು ಪಕ್ಷ. ತನಗೆ ಅನುಕೂಲವಾಗುವ ಕೊನೆ ಕ್ಷಣದವರೆಗೂ  ಎಲ್ಲರೂ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು! ಪರಿಸ್ಥಿತಿ ಕೈ ಮೀರುತ್ತಿದೆ ಎಂದ ಕೂಡಲೇ ಎಲ್ಲ ಅದಲು -ಬದಲು. ಇಂಥ ಕನಿಷ್ಠ  ನಿಯತ್ತಿಲ್ಲದವರಿಂದ ನಾವು ಯಾವ ನಿಯತ್ತನ್ನು  ನಿರೀಕ್ಷಿಸಬಹುದು? ಅದಕ್ಕಾಗಿಯಾದರೂ ನಾವು ಈ ಬಾರಿ ಹೆಚ್ಚು ಜಾಗರೂಕರಾಗಿ ನಮ್ಮ ಬಹು ಅಮೂಲ್ಯ ಹಕ್ಕನ್ನು ಚಲಾಯಿಸಿ, ಯೋಗ್ಯರನ್ನು  ಆರಿಸಿ ಬದಲಾವಣೆಗೆ ಕಾರಣರಾಗಬೇಕಿದೆ.

೩೦ ಏಪ್ರಿಲ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

No comments:

Post a Comment