ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Saturday, 25 May 2019

ತೆಳ್ಳಗಾಗುತ್ತಿರುವ ಕೆನೆಪದರ ಆರೋಗ್ಯಕ್ಕೆ ಹಾನಿಕರ!


ಜಾತಿವಾರು ಸೌಲಭ್ಯಗಳ ವಿಷಯ ಬಂದಾಗ ಸಣ್ಣ ಸಣ್ಣ ಜಾತಿಗಳಿಗೆ ಸೌಲಭ್ಯ ಕೊಡಿಸುವುದಾಗಿ ಕೆಲ ಪ್ರಬಲ ಜಾತಿಗಳ ನಾಯಕರು ಸ್ವಯಂವಕ್ತಾರಿಕೆ ವಹಿಸುವ ವಿಷಯ ಈಗೀಗ ಹೆಚ್ಚು  ಕೇಳಿಬರುತ್ತಿದೆ.

ತಮ್ಮ ಜಾತಿಯ ನೇತೃತ್ವದಲ್ಲಿ ಇತರ ಜಾತಿಗಳಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸುವುದಾಗಿ ಹೇಳುವ  ದೊಡ್ಡಣ್ಣನ ರೀತಿಯ ವಕ್ತಾರಿಕೆಯನ್ನು ಅವರು ಬಹುಕಾಲದಿಂದಲೇ ವಹಿಸುತ್ತಾ ಬಂದಿದ್ದಾರೆ. ಇಂಥ ವಕ್ತಾರಿಕೆ ವಹಿಸಲು ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ  ಒಳಮೀಸಲು ವಿಷಯದ ಮಾತು ಬಂದಾಗಲೆಲ್ಲಾ ನಾಯಕರ ವರಸೆ ಮತ್ತು ವರಾತಗಳು ಬೇರೆಯೇ ಇರುತ್ತವೆ. ತನಗೆ ಲಾಭವಿಲ್ಲದೆ ಇತರ ಜಾತಿಗಳ ವಕ್ತಾರಿಕೆಯನ್ನು ಯಾರು ಯಾಕಾದರೂ  ವಹಿಸುತ್ತಾರೆ? ಇಂಥ ಪ್ರಶ್ನೆಗಳನ್ನು ಈಗ ಸಂಬಂಧಿಸಿದ ಕೆಲ ಸಣ್ಣ ಸಣ್ಣ ಜಾತಿ ಜನ ಕೇಳಿಕೊಳ್ಳಲೇಬೇಕಿದೆ. ಏಕೆಂದರೆ ಜಾತಿ ಜನಗಣತಿ ಮತ್ತು ಒಳಮೀಸಲಿಗೆ ಒತ್ತಡಗಳು ಹೆಚ್ಚುತ್ತಿರುವಾಗ ತಾವು  ಬಹುಕಾಲದಿಂದ ಅನುಭವಿಸುತ್ತಾ ಬಂದಿರುವ ಪಾಲಿಗೆಲ್ಲಿ ಚ್ಯುತಿ ಬಂದುಬಿಡುತ್ತದೋ ಎಂಬ ಆತಂಕ ಕೆಲವರನ್ನು ಕಾಡತೊಡಗಿದೆ. ಹಾಗಾಗಿ ಈಗ ಹೆಚ್ಚಾಗಿ ಜಾಗೃತರಾಗಿರುವ ಅವರು, ಇತರ ಎಲ್ಲ ಸಣ್ಣ ಜಾತಿಗಳಿಗೂ ತನ್ನದೇ ಜಾತಿ ನಾಯಕತ್ವ ನೀಡುವುದಾಗಿ ಮತ್ತೆ ಮತ್ತೆ ಹೇಳುತ್ತಾ ದಾರಿ ತಪ್ಪಿಸುತ್ತಿರುತ್ತಾರೆ.

ನಮ್ಮದು ಜಾತ್ಯತೀತ ಸಂವಿಧಾನವಿರಬಹುದು ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಜಾತಿ ಮತ್ತು ಸಂಖ್ಯೆಯ ಆಧಾರದಿಂದಲೇ ನಡೆಯುತ್ತಿರುವಾಗ ತಾವು ನಿರ್ದಿಷ್ಟ ವರ್ಗದಲ್ಲಿ ಬಹುಸಂಖ್ಯಾತರು ಎಂಬ ಒಂದೇ ಕಾರಣಕ್ಕೆ ಸ್ವಯಂ ನೇತೃತ್ವದ ಹಕ್ಕು ಕೆಲವರಿಗೆ ಹೇಗೋ ದಕ್ಕಿಬಿಡುತ್ತದೆ. ಎಲ್ಲ ರಂಗಗಳಲ್ಲೂ ಪ್ರಬಲರಾಗಿರುವ  ಒಂದು ನಿರ್ದಿಷ್ಟ ಜಾತಿಯ ಗುಂಪು ಇತರ ಎಲ್ಲ ಶೋಷಿತ ಮತ್ತು ಸಣ್ಣ, ಸಣ್ಣ ಜಾತಿಗಳ ಹೆಸರಲ್ಲಿ ನಡೆಸುತ್ತಿರುವ ಅಂಧಾದುಂದಿ ದರ್ಬಾರನ್ನು ಈಗೀಗ ಇತರ ಎಲ್ಲರೂ ಗೊತ್ತು ಮಾಡಿಕೊಳ್ಳುತ್ತಿರುವುದು ಕೆಲವು ಸ್ವಯಂಘೋಷಿತ ನಾಯಕರ ನಿದ್ದೆಗೆಡಿಸಿದೆ. ಹಾಗಾಗಿ ಒಳಮೀಸಲು  ಜಾರಿಯಾದರೆ ಒಗ್ಗಟ್ಟು ಒಡೆದುಹೋಗುತ್ತದೆ ಎಂಬುದೂ ಸೇರಿದಂತೆ ಒಳಮೀಸಲು ವಿರುದ್ಧ ಸ್ವಯಂಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

ಒಳಮೀಸಲು ಜಾರಿಯಾದರೆ ಒಗ್ಗಟ್ಟು ಹೇಗೆ ಒಡೆದುಹೋಗುತ್ತದೆ? ಇದೇ ಹೊತ್ತಿನ ಪ್ರಶ್ನೆ. ಕೆಲವರು ತಮ್ಮ ರಾಜಕೀಯ ಮತ್ತು ಇತರ ಸಂಘಟನಾತ್ಮಕ ಶಕ್ತಿಗೆ ಧಕ್ಕೆ ಬರುತ್ತದೆ ಎಂಬ ಕಾರಣದಿಂದ ನೇತೃತ್ವದ ನಾಟಕ ಆಡುತ್ತಿದ್ದಾರೆ. ಇವರ ನೇತೃತ್ವದ ರಾಜಕೀಯದಲ್ಲಿ ಇತರ ಸಣ್ಣ ಸಣ್ಣ  ಜಾತಿಗಳು ಈವರೆಗೆ ಪಡೆದಿರುವ ಪಾಲನ್ನು ಬಹಿರಂಗಗೊಳಿಸಿದರೆ ಇವರ ನಿಲುವು ಬೆತ್ತಲಾಗುತ್ತದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಯಾವ್ಯಾವ ಜಾತಿಯವರು ಇತರ ಸಣ್ಣ ಜಾತಿಗಳ ಸವಲತ್ತುಗಳನ್ನು ಹೊಡೆದುಕೊಂಡಿದ್ದಾರೆ ಎಂಬುದನ್ನು ಆದಷ್ಟು ಬೇಗ ಬಹಿರಂಗಗೊಳಿಸುವ ಕಾಲ ಬರಲೆಂದು ಧ್ವನಿಯಿಲ್ಲದ ಎಲ್ಲ ಜಾತಿಗಳು ಪ್ರಾರ್ಥಿಸುತ್ತಿವೆ. ಹಾಗೆ ನೋಡಿದರೆ ಯಾವುದೋ ಕಾಲದಲ್ಲಿ ಮಾಡಿದ ಜಾತಿ ಜನಗಣತಿ ಮತ್ತು ಈಗ ನಡೆಯುತ್ತಿರುವ ನಿಧಾನಗತಿಯ ಜಾತಿ ಜನಗಣತಿ ಚರ್ಚೆ ನಿಧಾನವಾದಷ್ಟೂ ಈಗಾಗಲೇ ಪ್ರಬಲರಾಗಿರುವವರ ಪ್ರಾಬಲ್ಯ ಹೆಚ್ಚುತ್ತಲೇ ಹೋಗುತ್ತದೆ. ಇಂಥ ಹೊತ್ತಿನಲ್ಲಿ ನೇತೃತ್ವ ವಹಿಸುವ ಮಾತನ್ನಾಡುವವರು ಯಾರನ್ನು ಮರುಳು ಮಾಡುತ್ತಿದ್ದಾರೆ?

ಸಣ್ಣವರೆಲ್ಲಾ ಜಾಣರಲ್ಲ!: ಮತಗಳ ದೃಷ್ಟಿಯಿಂದ ಎಲ್ಲೂ ನಿರ್ಣಾಯಕರಲ್ಲದ ಅನೇಕ ಸಣ್ಣ ಸಣ್ಣ ಜಾತಿಗಳ ಜನ ಇನ್ನೂ ಯಾವುದೇ ಸೌಲಭ್ಯದ ರುಚಿ ನೋಡದೆ ಒಳ ಮೀಸಲು, ಅದಕ್ಕೆ ಬೇಕಾಗುವ ಜಾತಿ ಆಧರಿತ ಜನಗಣತಿ ಎಂಬ ದೂರದ ಬೆಟ್ಟವನ್ನು ನಂಬಿಕೊಂಡು ತಾಳ್ಮೆಯಿಂದ ಇದ್ದಾರೆ. ಸಧ್ಯದಲ್ಲಿ ಅದು ಆಗದೇ ಹೋದರೆ ಆಯಾ ಜಾತಿ ಜನಗಳು ಇನ್ನೊಂದು ರೀತಿಯಲ್ಲಿ ಸಂಘಟಿತರಾಗುವ ದಿನಗಳು ದೂರವಿಲ್ಲ. ಸಣ್ಣ, ಸಣ್ಣ ಜಾತಿಗಳು ಎಂದೂ ಒಂದಾಗುವುದಿಲ್ಲ ಎಂಬ ಭ್ರಮೆಯೇ ಕೆಲವು ಸ್ವಯಂಘೋಷಿತ ವಕ್ತಾರರನ್ನು ಹೀಗೆ ಆಡಿಸುತ್ತಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಮುಂತಾಗಿ ಮಾತನಾಡುವ  ನಾಯಕರು ಯಾಕೆ ಒಳ ಮೀಸಲು ವಿರುದ್ಧವಿದ್ದಾರೆ? ಸೌಲಭ್ಯ ಜಾತಿವಾರು ವಿಂಗಡಣೆಯಾದರೆ ಇವರು ಕಳೆದುಕೊಳ್ಳುವ ಗಂಟೇನು? ಸಂವಿಧಾನಾತ್ಮಕವಾಗಿ ಸಿಗಲೇಬೇಕಾದ ಸೌಲಭ್ಯಗಳನ್ನು ಪಡೆಯಲು, ಸಣ್ಣ ಜಾತಿಗಳಿಗಿಂತ ನಾಯಕರ ಜಾತಿ ಪ್ರಬಲ ಎನ್ನುವ ಒಂದೇ ಕಾರಣಕ್ಕೆ ದೊಣ್ಣೆನಾಯಕರ ಅಪ್ಪಣೆಯಂತೆ ಏಕೆ ತಲೆ ಆಡಿಸಬೇಕು? ನಾಯಕರು ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳಾಗಿದ್ದರೆ ತಮ್ಮ ನಾಯಕತ್ವಕ್ಕೆ ಹೆಗಲುಕೊಟ್ಟಿರುವ ಮತ್ತು ಇವರಿಗೆ ವರ್ಗಗಳ ನಾಯಕರೆಂಬ ಅಭಿದಾನ ನೀಡಿರುವ ಸಣ್ಣ ಸಣ್ಣ ಜಾತಿಗಳ ಪರವಾಗಿ ಧ್ವನಿ ಎತ್ತಿರುವ ಉದಾಹರಣೆ ಇದ್ದರೆ ಬಹಿರಂಗವಾಗಿ ಉಲ್ಲೇಖಿಸಿ ಸಣ್ಣ ಸಣ್ಣ ಜಾತಿಗಳಿಗೆ ಇವರ ನಾಯಕತ್ವದ ಬಗ್ಗೆ ಇರುವ ಅಜ್ಞಾನವನ್ನು ತೊಡೆದು ಹಾಕಬೇಕು. ಆಶ್ಚರ್ಯವೆಂದರೆ ಒಳಮೀಸಲು ವಿಷಯ ಚರ್ಚೆಗೆ ಬಂದಾಗಲೆಲ್ಲಾ ಮೊದಲು ಪ್ರತಿಕ್ರಿಯಿಸುವ ಜನ ಇವರೇ ಆಗಿರುತ್ತಾರೆ

ಕೆಲವು ರಾಜಕೀಯ ನಾಯಕರು ಇಷ್ಟು ದಿನ ಇತರ ಎಲ್ಲ ಸಣ್ಣ ಜಾತಿಗಳ ಹೆಸರಲ್ಲಿ ವಕ್ತಾರಿಕೆ ವಹಿಸಿ ಸ್ವಜನ ಪಕ್ಷಪಾತ ಮೆರೆದಿರುವುದರ ಫಲವೇ ಈಗ ಒಳಮೀಸಲು, ಜಾತಿ ಆಧರಿತ ಜನಗಣತಿ ವಿಚಾರ ಭುಗಿಲೇಳಲು ಕಾರಣ ಎಂಬುದನ್ನು ನಾಯಕರು ಬೇಗ ಅರ್ಥ ಮಾಡಿಕೊಂಡರೆ ಒಳ್ಳೆಯದು. ಮೀಸಲಿಗೆ ಸಂಬಂಧಿಸಿದ ಆಯೋಗದ ವರದಿಯೊಂದು ತಮ್ಮ ಜಾತಿಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಇನ್ನೊಂದು ಪ್ರಬಲ ಜಾತಿ ವರದಿಯನ್ನೇ ನಿಷ್ಕ್ರಿಯಗೊಳಿಸಿದ ಇತಿಹಾಸ ನಮ್ಮೆಲ್ಲರ ಕಣ್ಣ ಮುಂದಿದೆ. ಹಾಗಾದರೆ ಇನ್ನೆಷ್ಟು ದಿನ ಜಾತಿ ಹೆಸರಲ್ಲೇ ಶೋಷಣೆಗೆ ಒಳಗಾಗುತ್ತಿರುವ ಸಣ್ಣ ಸಣ್ಣ ಜಾತಿಗಳು ಸುಮ್ಮನಿರಬೇಕು? ಅಂಥ ಸಂವಿಧಾನಾತ್ಮಕ ಪಾಲು ತಮಗೆ ಸಿಗಲೇಬೇಕೆಂದು ಬಲವಾಗಿ ಅವರು ಹೋರಾಟ ಮಾಡಲು ಮುಂದಾದರೆ ನಾಯಕರೇಕೆ ಒಗ್ಗಟ್ಟಿನ ಉಪದೇಶ ಮಾಡಬೇಕು? ಸಣ್ಣ ಜಾತಿಗಳ ಅನೇಕ ಸೌಲಭ್ಯಗಳನ್ನು ಕಬಳಿಸುತ್ತಿರುವ ತಮ್ಮ ಜಾತಿಯ ಹಿತವನ್ನು ಬಲಿಕೊಟ್ಟು, ಸಣ್ಣ ಜಾತಿಗಳಿಗೆ ಇವರು ಹೇಗೆ ಸಾಮಾಜಿಕ ನ್ಯಾಯ ಕೊಡಿಸಬಲ್ಲರು? ಪ್ರಬಲ ಜಾತಿಗಳ ಪೋಷಣೆಗಾಗಿಯೇ ಇರುವ ನೂರಾರು ಜಾತಿಗಳ ವರ್ಗದ ಸಂಕೋಲೆಯಿಂದ ಸಣ್ಣ-ಪುಟ್ಟ ಜಾತಿಗಳು ಹೊರಬರಲು ಇರುವ ಒಂದೇ ಉಪಾಯ ಎಂದರೆ  ಜಾತಿ ಆಧರಿತ ಜನಗಣತಿ ಮತ್ತು ಒಳ ಮೀಸಲು. ಇದು ಮೀಸಲು ಸೌಲಭ್ಯ ಪಡೆಯುತ್ತಿರುವ ಎಲ್ಲ ಜಾತಿ, ಬುಡಕಟ್ಟು, ವರ್ಗಗಳಿಗೂ ಅನ್ವಯಿಸುತ್ತದೆ. ಹಾಗಾಗಿ ಕೆಲ ಪಟ್ಟಭದ್ರರ ಮಾತಿಗೆ ಯಾರೂ ಮರುಳಾಗಬೇಕಿಲ್ಲ, ಬದಲಾಗಿ ಜಾತಿ ಆಧರಿತ ಜನಗಣತಿ, ಒಳಮೀಸಲಿನ ತ್ವರಿತ ಅಗತ್ಯವನ್ನು ಸಂಬಂಸಿದವರಿಗೆ ಮನವರಿಕೆ ಮಾಡಿಕೊಡಲು, ಎಲ್ಲ ಶೋಷಿತ ಸಮುದಾಯಗಳು ಸಾಂಪ್ರದಾಯಿಕ ಸ್ವಯಂಘೋಷಿತ ನಾಯಕರ ಪರಿಯಿಂದ ತುರ್ತಾಗಿ  ಅಚೆ ಬರಬೇಕಾದ ಅನಿವಾರ್ಯತೆ ಇದೆ
ಯೋಜನೆ-ನಿಗಮ-ಮಂಡಳಿ: ಒಂದು ವರ್ಗದ ಹೆಸರಲ್ಲಿ ಒಂದು ಯೋಜನೆ ಘೋಷಿಸಿಬಿಟ್ಟರೆ ಇಡೀ ವರ್ಗದ ಪ್ರೀತಿ ಗಳಿಸಬಹುದೆಂಬ ಭ್ರಮೆಯಲ್ಲಿಯೇ ಈಗಿನ ರಾಜಕೀಯ ಪಕ್ಷಗಳು ಮತ್ತು ನಾಯಕರು ಇದ್ದಾರೆ. ಜತೆಗೆ ಇಂಥ ಭ್ರಮೆಗಳನ್ನು ಮೊದಲಿನಿಂದಲೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಾ ಇರುವ ನಾಯಕರೂ ಹೆಚ್ಚಾಗಿದ್ದಾರೆ. ಯಾರಿಗೂ ಸಾಮಾಜಿಕ ನ್ಯಾಯದ ನಿಜವಾದ ಅನುಷ್ಠಾನ ಬೇಕಾಗಿಲ್ಲ. ಮೂಲಕ ಶೋಷಿತರ ಪರವಾಗಿ ಮಾತನಾಡಿ ಕೆಲವೇ ಪ್ರಬಲ ಜಾತಿಗಳ ಕೆಂಗಣ್ಣಿಗೆ ಗುರಿಯಾಗುವುದು ಬೇಕಿಲ್ಲ. ಆದ್ದರಿಂದ ತಾವು ಘೋಷಿಸಿದ ಸವಲತ್ತು ವರ್ಗದ ಎಲ್ಲರಿಗೂ ತಲುಪಿದೆಯೇ, ತಲುಪುತ್ತದೆಯೇ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಒಳ ಮೀಸಲು ವಿಷಯವಾಗಿ ದೇವೇಗೌಡರು ಗುಡುಗಿ ಸುಮ್ಮನಾಗಿದ್ದು ಏಕೆ? ಕಳೆದ ಚುನಾವಣೆಗಳಲ್ಲೇ ಅವರು ಒಳಮೀಸಲು ಬಗ್ಗೆ ಒಂದು ನಿರ್ದಿಷ್ಟ ಧೋರಣೆಯನ್ನು ಏಕೆ ತಾಳಲಿಲ್ಲಯಾವುದೋ ಜಾತಿಯ ಯಾರೋ ಅನಾಮಧೇಯರನ್ನು ತಮಗೆ ಬೇಕಾದವರು ಎಂಬ ಒಂದೇ ಕಾರಣಕ್ಕೆ ಎಮ್ಮೆಲ್ಸಿಯಾಗಿಯೋ ಅಥವಾ ಯಾವುದೋ ನಿಗಮ ಮಂಡಳಿಯೊಂದರ ಅಧ್ಯಕ್ಷರನ್ನಾಗಿಯೋ ನೇಮಕ ಮಾಡಿದರೆ ಇಡೀ ಜಾತಿ/ವರ್ಗಕ್ಕೆ ನ್ಯಾಯ ದೊರಕಿಸಿದಂತೆ ಎಂಬುದು ಇನ್ನೊಂದು ಭ್ರಮೆ. ಹೀಗೆ ನೇಮಕಗೊಳ್ಳುವ ಅನೇಕ ನಾಯಕರು, ಅವರು ನೇಮಕಗೊಂಡ ನಂತರವೇ ತಮ್ಮವರೆಂದು ಇಡೀ ಸಮುದಾಯಕ್ಕೆ ಗೊತ್ತಾಗುತ್ತದೆ. ಸಂಖ್ಯೆಯ ಕಾರಣಕ್ಕೆ ಪ್ರಬಲ ಜಾತಿಗಳ ಜನ ಎಲ್ಲ ಕಡೆಯೂ ಇರುವಾಗ ಎಲ್ಲಿಯೂ ಸಲ್ಲದ ಹುದ್ದೆಗಳಿಗೆ ಸಣ್ಣ ಜಾತಿಗಳ ಕೆಲವರನ್ನು ನೇಮಿಸಲಾಗುತ್ತದೆ. ಯಾವುದೋ ಕೆಲಸಕ್ಕೆ ಬಾರದ ನಿಗಮ -ಮಂಡಳಿಯ ಅಧ್ಯಕ್ಷಗಿರಿ ಪಡೆದ ವರ್ಗದ ನಾಯಕ, ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ತನ್ನ ಜಾತಿ ಜನರ ಪ್ರತಿನಿಯಾಗುವುದು ಯಾವ ರೀತಿಯ ಪ್ರಜಾಪ್ರಭುತ್ವ? ಇನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ಟಿಕೇಟು ಹಂಚುವುದೇ ಒಂದು ಪ್ರಹಸನ. ಹೆಸರಿಗೆ ಮಾತ್ರ ವರ್ಗದವರಿಗೆ ಟಿಕೇಟು ಎಂಬಂತೆ ಬಿಂಬಿಸಲಾಗುತ್ತದೆ. (ಪರಿಶಿಷ್ಟ ಜಾತಿ/ವರ್ಗದವರಿಗೆ  ಪ್ರತ್ಯೇಕ ಸ್ಥಾನಗಳ ಮೀಸಲು ಇರುವುದರಿಂದ ಇದು ಅನ್ವಯಿಸುವುದಿಲ್ಲ.) ಕೊನೆಗೆ ಟಿಕೆಟ್ ಸಿಗುವುದು ಮಾತ್ರ ಕ್ಷೇತ್ರದ ಮಟ್ಟಿಗೆ ಹೆಚ್ಚಿಗೆ ಇರುವ ಎಂದಿನ ಪ್ರಬಲ ಜಾತಿಗೆ ಮಾತ್ರ. ಅನೇಕ ಬಾರಿ ನಿರ್ದಿಷ್ಟ ಜಾತಿಯ ಒಟ್ಟು ಜನಸಂಖ್ಯೆ ಇತರೆ ಎಲ್ಲ ಸಣ್ಣ ಸಣ್ಣ ಜಾತಿಗಳ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟೂ ಇರುವುದಿಲ್ಲ. ಹೇಗಿದ ಸಾಮಾಜಿಕ ನ್ಯಾಯ? ಹೀಗಾಗುವುದು ಬೇಡ, ನಮ್ಮ ಸಂವಿಧಾನಾತ್ಮಕ ಪಾಲನ್ನು ನಮಗೆ ಕೊಡಿ ಎಂದು ಜನ ಕೇಳಿದರೆ ಇವರಿಗೆ ಅದು ವರ್ಗವನ್ನು ಒಡೆಯುವ ಹುನ್ನಾರದಂತೆ ತೋರುತ್ತದೆ
ಒಳಮೀಸಲು ಬಗ್ಗೆ ಕೂದಲಲ್ಲಿ ಬೆಣ್ಣೆ ತೆಗೆದಂತೆ ನಾಜೂಕಿನಿಂದ ಮಾತಾಡುವ ಇವರಿಗೆ ಒಳಮೀಸಲಿನಿಂದ ಒಳೇಟು ಬೀಳುತ್ತದೆ. ಹಾಗಾಗಿಯೇ ಬೆಕ್ಕಿನ ಸನ್ಯಾಸ ಬೋಧಿಸುತ್ತಾ ತಮ್ಮ ಆಷಾಢಭೂತಿತನವನ್ನು ಅನಾವರಣಗೊಳಿಸುತ್ತಿರುತ್ತಾರೆ. ಪ್ರಬಲ ಜಾತಿಗಳು, ಪ್ರಬಲ ಮಠ ಮತ್ತು ಪ್ರಬಲ ನಾಯಕತ್ವದಿಂದ ಮುನ್ನಡೆಯುತ್ತಿರುವಾಗ ಸಣ್ಣ ಸಣ್ಣ ಜಾತಿಗಳು ದಿಕ್ಕು-ದೆಸೆಯಿಲ್ಲದೆ ಇನ್ನೆಷ್ಟು ದಿನ ನಲುಗಬೇಕು? ಹಾಗಾಗಿ ನಿಜ ಅರ್ಥದಲ್ಲಿ ಎಲ್ಲವೂ ಬಹುಜನರಿಂದ ಬಹುಜನರಿಗಾಗಿ ಎಂಬುದು ನಿಜವಾಗಬೇಕಿದ್ದರೆ ಸಣ್ಣ, ಸಣ್ಣ ಜಾತಿಗಳು ಇನ್ನೊಬ್ಬರನ್ನು ನೆಚ್ಚಿಕೊಳ್ಳದೆ ಬೇಗ ಎದ್ದು ನಿಲ್ಲಬೇಕು.
ನ್ಯಾಯಬಾಹಿರ ಶಿಫಾರಸು: ಈಗ ಹಿಂದುಳಿದ ಆಯೋಗ ಒಂದು ಹೊಸ ಶಿಫಾರಸು ಮಾಡಿ ಮತ್ತೆ ಬಹುಸಂಖ್ಯಾತ ಹಿಂದುಳಿದ ವರ್ಗದ ಬಡವರನ್ನು ಅವಕಾಶವಂಚಿತರನ್ನಾಗಿ ಮಾಡಲು ಹೊರಟಿದೆ. ಅದರ ಶಿಫಾರಸಿನ ಪ್ರಕಾರ ಹಿಂದುಳಿದ ವರ್ಗದವರ ಈಗಿನ ಕೆನೆ ಪದರದವರ ಆದಾಯ ಮಿತಿಯನ್ನು ಹೆಚ್ಚಿಸಬೇಕು. ಅಂದರೆ ಹಿಂದುಳಿದಿರುವ ವರ್ಗದ ಮೀಸಲು ಮಿತಿಯಲ್ಲಿ ಇನ್ನಷ್ಟು ಜನ ಆದಾಯವಿರುವವರು ಬರುತ್ತಾರೆ ಎಂದಾಯ್ತು. ಹಾಗಾದಾಗ ಕೃಷಿ ಕಾರ್ಮಿಕನ ಮಗನೊಬ್ಬ ಕಾಲೇಜು ಉಪನ್ಯಾಸಕ ಸೇರಿದಂತೆ ಎಲ್ಲ ಕ್ಲಾಸ್ ಒನ್ ಸಂಬಳದಾರನ ಮಗನ ಜತೆ ರ್ಸ್ಪಸಬೇಕು. ಇದರ ಮೇಲೆ ಒಳ ಮೀಸಲು ಬಂದರೂ ಬರಲಿ, ಬಡವರ ಹೆಸರಲ್ಲಿಯೇ ಎಲ್ಲ ಬಡವರ ಅವಕಾಶಗಳನ್ನೂ ಇನ್ನಷ್ಟು ದಿನ ಆರಾಮವಾಗಿ ಹೊಡೆದುಕೊಳ್ಳಬಹುದೆಂಬ ಹುನ್ನಾರ  ಇದರ ಹಿಂದಿದೆ. ಆದ್ದರಿಂದ ಮೀಸಲು ನೀತಿಗೆ  ವಿರುದ್ಧವಾದ ಶಿಫಾರಸನ್ನು ಬಹುಸಂಖ್ಯಾತ ಹಿಂದುಳಿದ ಬಡವರು ಸರ್ವಥಾ ಒಪ್ಪಬಾರದು. ಸರಕಾರ ಶಿಫಾರಸಿನ ಬಗ್ಗೆ ಶೀಘ ತೀರ್ಮಾನಕ್ಕೆ ಬರುವುದಾಗಿ ಸಮಾಜಕಲ್ಯಾಣ ಸಚಿವರು ಹೇಳಿರುವುದನ್ನು ನೋಡಿದರೆ ಸರಕಾರದ ತರಾತುರಿಯ ಧಾವಂತದ ಹಿಂದೆ ಯಾರಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು. ಇಂಥದೇ ಪರಿಸ್ಥಿತಿಗಳನ್ನು ಶತಮಾನಗಳಿಂದ ಅನುಭವಿಸುತ್ತಿರುವ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು ಜಾತಿ ಅಧರಿತ ಜನಗಣತಿ ಮತ್ತು ಮೀಸಲುಗಳ ಅಗತ್ಯವನ್ನು ಆದಷ್ಟೂ ಬೇಗ ಮನಗಾಣಬೇಕಿದೆ. ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಇಂಥ ಅವೈಜ್ಞಾನಿಕ ಶಿಫಾರಸಿನ ಬಗ್ಗೆ ಕೆಲವರು ಧ್ವನಿ ಎತ್ತಿರುವುದು ಮತ್ತು ಅವರನ್ನು ಬೆಂಬಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಬಡವರ ಪಾಲಿಗೆ ಆನೆ ಬಲ ತಂದಿದೆ.

(ಐದಾರು ವರ್ಷಗಳ ಹಿಂದೆ ಬರೆದದ್ದು)

Wednesday, 26 March 2014

ಸಿಂಗಾರಿತ್ಲು ಎರಡನೇ ಆವೃತ್ತಿ ಶೀಘ್ರ

ಆತ್ಮೀಯರೇ,

ನಾಳೆ ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ. ೧೦ ವ‍‍ರ್ಷಗಳ ಹಿಂದೆ ನಾನು ಬರೆದ ನಾಟಕ ಸಿಂಗಾರಿತ್ಲು ೨೦೦೬ರಲ್ಲಿ ಪ್ರಕಟವಾಗಿತ್ತು. ಈ ನಾಟಕದ ಹಸ್ತಪ್ರತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನ ಮತ್ತು ಪ್ರಕಟಿತ ಕೃತಿಗೆ ಬಿಎಂಟಿಸಿ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಅರಳು ಪ್ರಶಸ್ತಿಯ ಮೊಟ್ಟಮೊದಲ ಆವೃತ್ತಿಯ ಬಹುಮಾನ ಬಂದಿತ್ತು. ಬಿಎಂಟಿಸಿಯ ಕನ್ನಡ ಸಂಘದ ಗೆಳೆಯರಾದ ಬಾಲಕೃಷ್ಣ ಅವರು ಇದನ್ನು ರಂಗಕ್ಕೂ ತಂದಿದ್ದರು.
ಮೊದಲ ಆವೃತ್ತಿಗೆ ಹಿರಿಯ ಜಾನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣ ಬೆನ್ನುಡಿಯನ್ನೂ, ಹೆಸರಾಂತ ಕಥೆಗಾರ ಮೊಗಳ್ಳಿ ಗಣೇಶ್‌ ಮುನ್ನುಡಿಯನ್ನೂ ಬರೆದಿದ್ದರು. ಮುಖಪುಟಕ್ಕೆ ಗೆಳಯ ಸೃಜನ್‌ ಚಿತ್ರ ಒದಗಿಸಿದ್ದರು.
ಮೊದಲ ಆವೃತ್ತಿಯನ್ನು ಗೆಳೆಯ ದೇವು ಪತ್ತಾರನ ಸಹಕಾರದಿಂದ ನಾರಾಯಣ ಮಾಳ್ಕೋಡ್‌ ತಮ್ಮ ಸುಮುಖ ಪ್ರಕಾಶನದಿಂದ ಪ್ರಕಟಿಸಿದ್ದರು. ಪ್ರತಿಗಳು ಮುಗಿದು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಗೆಳೆಯ ಸಬ್ಬನಹಳ್ಳಿ ರಾಜು ತಮ್ಮ ಅಂಕ ಪ್ರಕಾಶನದ ವತಿಯಂದ ಎರಡನೇ ಆವೃತ್ತಿ ತರುತ್ತಿದ್ದಾರೆ.
ಎರಡನೇ ಆವೃತ್ತಿಗೆ ಮುನ್ನುಡಿಯನ್ನು ಗೆಳೆಯ ಆನಂದ್‌ ಋಗ್ವೇದಿ ಬರೆದಿದ್ದಾನೆ. ಬೆನ್ನುಡಿಯನ್ನು ಹೆಸರಾಂತ ನಿರ್ದೇಶಕ ಇಕ್ಬಾಲ್‌ ಅಹಮದ್‌ ಬರೆದಿದ್ದಾರೆ. ಉಳಿದಂತೆ ಹಿರಿಯರಾದ ದಿ. ಚಿ. ಶ್ರೀವಾಸರಾಜು ಮೇಷ್ಟ್ರು, ಗಿರಡ್ಡಿ ಗೋವಿಂದರಾಜ್‌, ಚಿಂತಾಮಣಿ ಕೋಡ್ಲಕೆರೆ ಗೆಳೆಯರಾದ ಮಂಜುನಾಥ್‌, ಸುರೇಶ್‌ ಅಂಗಡಿ, ಇಸ್ಮಾಯಿಲ್‌ ಜಬೀರ್‌ ಅವರ  ಅನಿಸಿಕೆಗಳು ಈ ಸಂಚಿಕೆಯಲ್ಲಿವೆ. ಈ ಆವೃತ್ತಿಗೆ ಗೆಳೆಯ, ಕಲಾವಿದ ನಾಗಲಿಂಗಪ್ಪ ಮುಖಪುಟ ರೂಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳೊಂದಿಗೆ

ಕರಿಸ್ವಾಮಿ. ಕೆ

Monday, 24 March 2014

ಇ ರಾಘವನ್ ಅವರ ಎರಡನೇ ಪುಣ್ಯ ತಿಥಿ

ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಹಿಂದಿನ ಸಂಪಾದಕರಾಗಿದ್ದ . ರಾಘವನ್ ಅವರು ತೀರಿಕೊಂಡು ಇಂದಿಗೆ ಎರಡು ವರ್ಷಗಳು ತುಂಬಿದವು. ಅವರ ಜತೆಗಿನ ನೆನಪುಗಳನ್ನು ನಮ್ಮ ಅನೇಕ ಸಹೋದ್ಯೋಗಿಗಳು ಹಂಚಿಕೊಂಡಿರುವ ಪುಸ್ತಕವೊಂದು ಸಿದ್ಧವಾಗುತ್ತಿದೆ. ಚುನಾವಣೆಯ ಕಾವು ಇಲ್ಲದಿದ್ದರೆ ಪುಸ್ತಕ ಇಂದೇ ಬಿಡುಗಡೆಯಾಗಬೇಕಿತ್ತು. ಚುನಾವಣೆಯ ಈ ಭರಾಟೆ ಮುಗಿದ ನಂತರ ಮುಂದಿನ ತಿಂಗಳು ಪುಸ್ತಕವನ್ನು ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ.
ನನ್ನ ಗೆಳೆಯ ಜೇಪಿ ಮತ್ತು ನಾನು ಸಂಪಾದಿಸಿರುವ ಈ ಪುಸ್ತಕಕ್ಕೆ ಗೆಳೆಯ, ಕಲಾವಿದ ಬಡಿಗೇರ್‌ ಮುಖಪುಟ ರಚಿಸಿದ್ದಾರೆ. ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳು
ಕರಿಸ್ವಾಮಿ. ಕೆ


Sunday, 27 October 2013

ನೆನಪು: ಅಮ್ಮ ತೀರಿಕೊಂಡು ಒಂದು ವರ್ಷ




ನನ್ನಮ್ಮ ತೀರಿಕೊಂಡು ಒಂದು ವರ್ಷ ಕಳೆದುಹೋಯಿತು(9/10/2012). ಅಮ್ಮನ ಒಂದು ವರ್ಷದ ನೆನೆಪಿಗೆ ಕಳೆದ ಅಕ್ಟೋಬರ್ 10ನೇ ತಾರೀಖು ಗುರುವಾರ ರಾತ್ರಿ, ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ನನ್ನ ಊರು ಜವನ್ನಹಳ್ಳಿಯಲ್ಲಿ ಸುಮಾರು 35 ಜನರ ತಂಡ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು. ಸುಮಾರು 10 ವರ್ಷಗಳ ನಂತರ ರಾತ್ರಿಯೆಲ್ಲ ಭಜನೆ ಸಂಭ್ರಮದಲ್ಲಿ ಮುಳುಗಿದ್ದೆ. ಅದು ಕೊಟ್ಟ ಖುಷಿಯನ್ನು ಶಬ್ಧಗಳಲ್ಲಿ ಹಿಡಿದಿಡುವುದು ಕಷ್ಟ. ಇದೆಲ್ಲ ದುಡ್ಡಿನಿಂದ ಆಗುವ ಕೆಲಸವಲ್ಲ. ನನ್ನಮ್ಮ, ನನ್ನಪ್ಪ-ಅಕ್ಕಂದಿರ ಕಾರಣದಿಂದ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ತತ್ತ್ವ ಪದಕಾರರು ನಮ್ಮ ಮನೆಯಲ್ಲಿ ಜಮಾಯಿಸಿದ್ದರು. ಗುಂಪು, ಪಂಥ, ಜಾತಿ ಬೇಧಗಳಿಗೆ ಅಲ್ಲಿ ಆಸ್ಪದವೇ ಇರುವುದಿಲ್ಲ.
ನಮ್ಮ ಮನೆಯ ಭಜನೆ ಕಾರ್ಯಕ್ರಮಕ್ಕೆ ಸುಮಾರು 25-30 ವರ್ಷಗಳ ಇತಿಹಾಸವಿದೆ. ನಮಗೆಲ್ಲ ಸಾಹಿತ್ಯ-ಸಂಗೀತ ಅಂತ ಅಭಿರುಚಿ ಹುಟ್ಟಿದ್ದರೆ ಅದಕ್ಕೆ ನಮ್ಮ ಮನೆಯಲ್ಲಿ ಕಾಲಕಾಲಕ್ಕೆ ನಡೆಯುತ್ತಿದ್ದ ಭಜನೆಯೂ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೇ ಕಾರಣ. ಇವತ್ತಿಗೂ ಮುಖ ತೊಳೆದು ವಿಭೂತಿ ಧರಿಸಿದ ನಂತರ ದೇವರ ಮನೆಯಲ್ಲಿದ್ದ ಏಕತಾರಿಯನ್ನು ಮೀಟಿ ನಾದ ಹೊರಡಿಸಿದ ನಂತರವೇ ತಿಂಡಿ – ಊಟದ ತಟ್ಟೆಯ ಮುಂದೆ ಅಪ್ಪ, ನನ್ನ ಅಕ್ಕಂದಿರು ಕುಳಿತುಕೊಳ್ಳುತ್ತಾರೆ. ನನ್ನಮ್ಮನಂತೂ, ರಾಗಿಯನ್ನು ಇರುವೆ ಗೂಡಿಗೆ ಹಾಕಿದ ನಂತರ ಸೂರ್ಯನಿಗೆ ನಮಸ್ಕಾರ ಹಾಕಿ ಏಕತಾರಿ ಮುಂದೆ ಕೂತು ನಾದ ಹೊರಡಿಸಿ ಧ್ಯಾನ ಮಾಡಿದ ಮೇಲೆ ನಾಯಿಗೆ ಅನ್ನ ಹಾಕಿಯೇ ಊಟ ಮಾಡುತ್ತಿದ್ದರು. ಇದಕ್ಕೆಲ್ಲ ನಾನೊಬ್ಬನೇ ಅಪವಾದ.
ನನ್ನ ಮೂವರು ಅಕ್ಕಂದಿರು, ತಂಗಿ ಭಜನೆಯ ಕಾರ್ಯಕ್ರಮದಲ್ಲಿ ಅಪ್ಪನೊಟ್ಟಿಗೆ ಕೂತುಕೊಂಡರೆ ನಾದಲೋಕದಲ್ಲಿ ಮನೆ ಮುಳುಗಿ ಹೋಗುತ್ತಿತ್ತು. ಸುಖ-ಕಷ್ಟ ಬೇಸರದ ಘಳಿಗೆಗಳಲ್ಲಿ ನನ್ನಪ್ಪ ಏಕತಾರಿ ಹಿಡಿದು ಕೂರುತ್ತಿದ್ದರು. ನನ್ನ ಒಬ್ಬ ಭಾವ ಕೂಡ ಭಜನೆ ಭಲ್ಲವರಾಗಿದ್ದುದು ಇನ್ನೊಂದು ಮೆರೆಗು ನೀಡುತ್ತಿತ್ತು. ಇವತ್ತಿಗೂ ಭಜನೆಯಲ್ಲಿ ಕುಳಿತುಕೊಳ್ಳುವ ನನ್ನ ಅಕ್ಕಂದಿರು ತತ್ತ್ವಪದಗಳ ಹಾಡಿನಲ್ಲಿ ವಿಜೃಂಭಿಸುತ್ತಾರೆ.
ವರ್ಷಕ್ಕೊಂದು ಬಾರಿ ಎಂಥ ಕಷ್ಟವೇ ಇರಲಿ ಭಜನೆ ಮಾತ್ರ ನಿಲ್ಲುತ್ತಿರಲಿಲ್ಲ. ನಿರ್ದಿಷ್ಟ ವೇಳೆಗೆ ಭಜನೆ ನಡೆಯುತ್ತಿರಲ್ಲವಾದರೂ, ಭಜನೆ ನಡೆದು ವರ್ಷವಾಯಿತೆಂದು ಸಾಮಾನ್ಯವಾಗಿ  ನನ್ನಮ್ಮನೇ ಅಪ್ಪನಿಗೆ ಭಜನೆ ಕಾರ್ಯಕ್ರಮ ಏರ್ಪಡಿಸುವಂತೆಗೆ ಒತ್ತಾಯಿಸುತ್ತಿದ್ದರು. ನನ್ನಮ್ಮ ಸತ್ತ ದಿನವೂ ರಾತ್ರಿಯೆಲ್ಲ ಭಜನೆ ನಡೆಯಿತು. ಅಮ್ಮ ಸಾಯುವುದಕ್ಕೆ ಮುಂಚೆ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇದ್ದರು. ಅಮ್ಮನ ಹಾರೈಕೆಯಲ್ಲಿ ನಾನು ಹೈರಾಣಾಗಿದ್ದರಿಂದ ಅವತ್ತು ಭಜನೆಯನ್ನು ಮಿಸ್ ಮಾಡಿಕೊಂಡಿದ್ದೆ. ಬೆಂಗಳೂರು, ಬಾಗಲಕೋಟ, ಗಂಗಾವತಿಗಳಲ್ಲಿ ನನ್ನ ವೃತ್ತಿ ಜೀವನ ಸುಮಾರು 12 ವರ್ಷ ಮುಗಿದು ಹೋಗಿದ್ದರಿಂದ ಇಷ್ಟೊಂದು ಅಸ್ಥೆಯಿಂದ ಇತ್ತೀಚೆಗೆ ಭಜನೆಯನ್ನು ಆಸ್ವಾದಿಸಲು ಸಾಧ್ಯವಾಗಿರಲಿಲ್ಲ.
ಅಂತೂ ಅವತ್ತು ನನ್ನ ಅನೇಕ ಗುರು/ ಗೆಳೆಯರನ್ನು ಅವತ್ತು ನೆನೆದೆ. ಅದರಲ್ಲೂ ಮುಖ್ಯವಾಗಿ ಎಸ್. ಆರ್. ರಾಮಕೃಷ್ಣ, ಆಲೂರು ದೊಡ್ಡಲಿಂಗಪ್ಪ, ಪಿ. ಮಂಜುನಾಥ್, ಉಗಮ ಶ್ರೀನಿವಾಸ್, ಸತೀಶ್ ತಿಪಟೂರು, ಹಳ್ಳಿ ಸುರೇಶ್, ಶಿವಪ್ಪ, ನಾಗತಿಹಳ್ಳಿ ರಮೇಶ್ ಮತ್ತು ದಿ. ಎನ್. ಕೆ ಹನುಮಂತಯ್ಯ ನೆನಪಾದರು. ಇವರೆಲ್ಲ ಭಜನೆಗೆ ಬಂದಿದ್ದರೆ ಇದನ್ನೆಲ್ಲ ಹೇಗೆ ಆಸ್ವಾಧಿಸುತ್ತಿದ್ದರೋ ಗೊತ್ತಿಲ್ಲ. ಸುಮಾರು 13 ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಬಳಿಯ ಬಾಬೂರಾಯನ ಕೊಪ್ಪಲಲ್ಲಿ ತೀರಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಭಜನೆ ತಂಡದಲ್ಲಿ ಸೇರಿಕೊಂಡು ಹನುಮಂತಯ್ಯ ಮತ್ತು ಆಲೂರು ದೊಡ್ಡ ಇಡೀ ಜನಸಂದಣಿಯನ್ನು ಹುಚ್ಚೆಬ್ಬಿಸಿದ್ದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಇದೆಲ್ಲ ಏನೇ ಇರಲಿ, ಮೊನ್ನೆಯ ಭಜನೆ ಕಾರ್ಯಕ್ರಮದಲ್ಲಿ ಹಾಡಿದ ತತ್ತ್ವ ಪದಗಳು, ವಚನಗಳು, ವಿವಿಧ ಪಂಥ-ಗುಂಪಿನ ವಿವಿಧ ಆನುಭಾವಿ ಪದಗಳ ಜುಗಲ್ಬಂಧಿ ಮರೆಯಲಾರದ ನೆನೆಪಾಗಿ ಉಳಿಯಿತು. ಪ್ರತಿವರ್ಷ ಇಷ್ಟೇ ಸಂಖ್ಯೆಯ ತತ್ತ್ವಪದಕಾರರನ್ನು ಕರೆಸಿ ಹಾಡಿಸಲು ಪ್ರಯತ್ನಿಸಬೇಕೆಂದು ಅಕ್ಕ-ಅಪ್ಪನನ್ನು ಆಗ್ರಹಿಸಿದ್ದೇನೆ. ಬೆಂಗಳೂರಿನಲ್ಲಿ ಇಂತಹದೊಂದು ಇಡೀ ರಾತ್ರಿ ಕಾರ್ಯಕ್ರಮ ಆಯೋಜಿಸಿದರೆ ಹೇಗೆಂದು ಯೋಚಿಸುತ್ತಿದ್ದೇನೆ. ಅದೆಲ್ಲ ಯಾವಾಗ ಸಾಧ್ಯವಾಗುವುದೋ ನೋಡಬೇಕು. ಇಷ್ಟಕ್ಕೆಲ್ಲ ಕಾರಣವಾದ, ಅಗಾಧ ಶಕ್ತಿ ಮತ್ತು ಅನೇಕ ವಿಷಯಗಳಲ್ಲಿ ವಿಜ್ಞಾನಿಯಂತೆ ಯೋಚಿಸುತ್ತಿದ್ದ ಅನಕ್ಷರಸ್ಥೆ ನನ್ನಮ್ಮನ ಕುರಿತು ಬರೆಯಬೇಕೆಂಬ ತುಡಿತ ಹೆಚ್ಚುತ್ತಿದೆ.


Sunday, 12 May 2013

ನನ್ನನ್ನು ಕ್ಷಮಿಸಿಬಿಡು ಅಮ್ಮಾ




ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನಿಲ್ಲದ ಎಷ್ಟೋ ಮಂದಿಗೆ ತಮ್ಮ ಅಮ್ಮಂದಿರು ನೆನಪಾಗಿವಂತೆ ನನಗೂ ನನ್ನಮ್ಮ ನೆನಪಾದರು. ಅಮ್ಮನ ದಿನ, ಅಪ್ಪನ ದಿನ ಇಂಥ ಯಾವುದೇ ದಿನಗಳ ಬಗ್ಗೆ ಅನಕ್ಷರಸ್ಥೆಯಾಗಿದ್ದ ನನ್ನಮ್ಮನಿಗೆ ಗೊತ್ತಿರುವುದು ಸಾಧ್ಯವಿರಲಿಲ್ಲ.
ಅಮ್ಮನಿಲ್ಲದ ಮೊದಲ ‘ಅಮ್ಮನ ದಿನ’ವಾದ್ದರಿಂದಲೇ ಇದು ನನ್ನನ್ನು ಇಷ್ಟೊಂದು ತೀವ್ರವಾಗಿ ಕಾಡುತ್ತಿರುಬಹುದು ಎಂದುಕೊಂಡಿದ್ದೇನೆ. ಏಕೆಂದರೆ ಅಮ್ಮನ ದಿನದ ಮಹತ್ವ ನನಗೆ ಈ ಮೊದಲು ಅಷ್ಟಾಗಿ ಗೊತ್ತಾಗಿರಲಿಲ್ಲ. ನನ್ನಮ್ಮ ಬದುಕಿದ್ದಾಗ ಬಂದ ‘ಅಮ್ಮನ ದಿನ’ಗಳಲ್ಲಿ ಪತ್ರಿಕೆಗಳಲ್ಲಿ ಯಾವುದಾದರೂ ಲೇಖನ ಬಂದರೆ ಕಣ್ಣಾಡಿಸುತ್ತಿದ್ದೆ. ಅಮ್ಮ ನೆನಪಾಗುತ್ತಿದ್ದರು. ವಿಷ್ ಮಾಡುವ ಪದ್ಧತಿ ಖಂಡಿತಾ ಇರಲಿಲ್ಲ. ಹಾಗಾಗಿ ನಾನು ನನ್ನಮ್ಮನಿಗೆ ಎಂದೂ ವಿಷ್ ಮಾಡಲಿಲ್ಲ.
ಬಡತನದ ಕಾರಣದಿಂದ ಅನುಭವಿಸಿದ ಅವಮಾನ, ಸಂಕಟಗಳು ನಮ್ಮನ್ನು ಅಷ್ಟಾಗಿ ತಟ್ಟದಂತೆ ಕಾಪಾಡಿದ್ದ ಅಮ್ಮನ ತಾಕತ್ತು ದೊಡ್ಡದು. ದೊಡ್ಡ ಮನಸ್ಸಿನ ಅಮ್ಮ ಸದಾ ಚಟುವಟಿಕೆಯಿಂದ ಇದ್ದರು. ಸುಮಾರು ನಲವತ್ತು ವರುಷಗಳಿಂದ ಅಸ್ತಮಾ ಎಂಬ ಭಯಂಕರ ಕಾಯಿಲೆ ವಿರುದ್ಧ ಸೆಣಸಾಡುತ್ತಲೇ ಕಳೆದ ಅಕ್ಟೋಬರಿನಲ್ಲಿ ತೀರಿಕೊಂಡರು.
ಸಾಯುವ ಮುನ್ನ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಸಾಯುತ್ತೇನೆ, ಊರಿಗೆ ಕರೆದುಕೊಂಡು ಹೋಗು ಎಂದು ಗೋಗರೆದರೂ, ವೈದ್ಯರ ಸಲಹೆಯಂತೆ, ಆಸ್ಪತ್ರೆಯ ಆರೈಕೆಯಲ್ಲಿ ಬದುಕಬಹುದೆಂಬ ನನ್ನ ಆಸೆಯಿಂದ ಹೆಣವಾಗಿ ಊರು ಸೇರಿದರು. ಕೊನೆಯ ಆಸೆ ಈಡೇರಿಸದ ‘ನನ್ನನ್ನು ಕ್ಷಮಿಸಿಬಿಡು ಅಮ್ಮಾ’ ಎಂದು ಕೇಳಿಕೊಳ್ಳುವುದಷ್ಟೇ ಉಳಿದಿರುವ ಮಾರ್ಗ.


Sunday, 24 March 2013

ಈ. ರಾಘವನ್ ಅವರ ಮೊದಲ ಪುಣ್ಯ ತಿಥಿ


ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಈ  ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು ತೀರಿಕೊಂಡು ಇಂದಿಗೆ ಒಂದು ವರ್ಷ.  ಅನೇಕ ಒಳ್ಳೆಯ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುವ ಅವರನ್ನು ತುಂಬು ಪ್ರೀತಿಯಿಂದ ನೆನೆಯಬೇಕಾದ ದಿನವಿದು. ರಾಘವನ್ ಅವರಂಥ ವ್ಯಕ್ತಿಗಳು ಯಾವಾಗಲೂ ಮನದಲ್ಲೇ ಇರುತ್ತಾರೆ. ಅವರ ನೆನಪನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಹಂಚಿಕೊಳ್ಳಲು ಇದೊಂದು ನೆಪ  ಅಷ್ಟೆ.